ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾ. ಪಂ. ಯ ಯಲ್ಲಮ್ಮ ಕ್ಯಾಂಪಿನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿ ಎಂ ಸಿ ಯ ನೂತನ ಅಧ್ಯಕ್ಷರಾಗಿ ದಮ್ಮೂರು ತಿಪ್ಪೇಸ್ವಾಮಿ ಮತ್ತು ಉಪಾಧ್ಯಕ್ಷರಾಗಿ ದೊಡ್ಡ ನಿಂಗಪ್ಪ ವಾಲ್ಮೀಕಿ ಅವಿರೋಧವಾಗಿ ಆಯ್ಕೆಗೊಂಡರು.
ಇಲ್ಲಿನ ಶಾಲೆಯಲ್ಲಿ ನಡೆದ ಪೋಷಕರ ಸಭೆಯಲ್ಲಿ ಕರವೇ ತಾಲೂಕು ಅಧ್ಯಕ್ಷ ಬಳೆ ಮಲ್ಲಿಕಾರ್ಜುನ ಮಾತನಾಡಿ, ಶಾಲೆ ಒಂದು ದೇವಾಲಯ ಇಂತಹ ಶಾಲೆಗಳ ಅಭಿವೃದ್ದಿಗಾಗಿ ಸರ್ಕಾರ ಶಾಲೆಯಲ್ಲಿ ಓದುತ್ತಿರುವ ಮಕ್ಕಳ ಪೋಷಕರನ್ನು ಸೇರಿಸಿ ಶಾಲಾಭಿವೃದ್ದಿ ಸಮಿತಿಯನ್ನು (ಎಸ್ಡಿಎಂಸಿ) ರಚಿಸಲು ಪ್ರತಿ ಸರ್ಕಾರಿ ಶಾಲೆಗೆ ಅವಕಾಶ ಕಲ್ಪಿಸಿದೆ. ಹೀಗೆ ರಚನೆಯಾದ ಸಮಿತಿಯು ಒಬ್ಬ ಯೋಗ್ಯ ವ್ಯಕ್ತಿಯನ್ನು ಅಧ್ಯಕ್ಷನನ್ನಾಗಿ ಆಯ್ಕೆ ಮಾಡುತ್ತದೆ.
ಈ ರೀತಿ ಆಯ್ಕೆಯಾದ ಅಧ್ಯಕ್ಷರೊಬ್ಬರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಮಕ್ಕಳು ಓದುತ್ತಿರುವ ಶಾಲೆಗೆ ಏನಾದರೂ ಸೇವೆ ಸಲ್ಲಿಸಲಾಗುವುದು. ನಮ್ಮ ಮಕ್ಕಳಿಗೆ ಉತ್ತಮ ವಾತಾವರಣದಲ್ಲಿ ಒಳ್ಳೆಯ ಶಿಕ್ಷಣ ದೊರೆಯಬೇಕು. ಗ್ರಾಮದ ಪ್ರತಿಯೊಬ್ಬರೂ ಶಾಲೆಯ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿ ಒತ್ತು ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಎಂದರು.
ಮುಖ್ಯಗುರು ಜೆ.ವೆಂಕೋಬಪ್ಪ ಮಾತನಾಡಿ, ಸಂವಿಧಾನ ಬದ್ಧವಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್ಡಿಎಂಸಿ)ಗಳ ಕರ್ತವ್ಯ ಮತ್ತು ಜವಾಬ್ದಾರಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೃಢವಾದ ನಿಲುವಿನೊಂದಿಗೆ ಪೂರಕವಾಗಿರಬೇಕು ಎಂದರು.
ನಂತರ ನೂತನ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ಶಿಕ್ಷಕರ ಹಾಗೂ ಸದಸ್ಯರ, ಸ್ಥಳೀಯ ಮುಖಂಡರ ಸಹಕಾರದೊಂದಿಗೆ ಶಾಲಾ ಅಭಿವೃದ್ಧಿಗೆ ಅಗಲಿರುಳು ಶ್ರಮಿಸುತ್ತೇನೆ ಎಂದರು.
ನಂತರ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಮಾಲಾರ್ಪಣೆ ಮೂಲಕ ಗೌರವಿಸಿದರು.
ಈ ಸಂದರ್ಭದಲ್ಲಿ ಸಹಶಿಕ್ಷಕ ಇಮಾಮ್ಸಾಬ್, ಮುಖಂಡರಾದ ಪರಶುರಾಮ, ಹುಲುಗಪ್ಪ, ಗಿಣಿ, ಹೊನ್ನೂರಸ್ವಾಮಿ, ಬಾಬು, ಹೊನ್ನೂರವಲಿ, ಕಜ್ಜಿ ನಾಗಪ್ಪ ವಾಲ್ಮೀಕಿ, ಕುರುಬರ ಚಂದ್ರಶೇಖರ ಸೇರಿದಂತೆ ಮಹಿಳೆಯರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















