ಕೊಪ್ಪಳ / ಗಂಗಾವತಿ : ಸಮೀಪದ ಚಿಲುಕೂರಿ ನಾಗೇಶ್ವರ್ ರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶರಣ ಮಡಿವಾಳ ಮಾಚಿದೇವರ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಮಾಚಿದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದ ಕಾಲೇಜಿನ ಪ್ರಾಚಾರ್ಯ ಪ್ರೊ.ಕರಿಗೂಳಿ ಅವರು, ಸಾಮಾಜಿಕ ಶೋಷಣೆಯು ಹೆಚ್ಚಿದ್ದ 12ನೇ ಶತಮಾನದ ಕಾಲದಲ್ಲಿ ಸಮಾನತೆಯ ಸಂದೇಶ ಸಾರಿದ ಬಸವಾದಿ ಶರಣರಲ್ಲಿ ಪ್ರಮುಖರಾದ ಮಡಿವಾಳ ಮಾಚಿದೇವರು ಬಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ದೇವರ ಹಿಪ್ಪರಗಿಯವರು.
ಬಸವ ಚಿಂತನೆಯ ಕಾಲಘಟ್ಟದಲ್ಲಿ ಅತ್ಯಂತ ಕಟುಪ್ರಶ್ನೆ ಕೇಳಲು ಹೆಸರಾಗಿದ್ದರು. ತನ್ನ ಮೇಲೆ ದಾಳಿ ಮಾಡಿಸಿದ ಬಿಜ್ಜಳರಾಜನ ಸೈನ್ಯವನ್ನು ಹಾಗೂ ಆನೆಯನ್ನು ಸೋಲಿಸಿ ಗೆದ್ದ ಮಹಾನ್ ಶಕ್ತಿಶಾಲಿ ಶರಣರು. ‘ಬೇಡುವ ಭಕ್ತರಿಲ್ಲದೆ ಬಡವನಾದೇನಯ್ಯ’ ಎಂಬ
ಬಸವಣ್ಣರನ್ನೇ ನೀವು ಮಾತ್ರ ದಾನಿಗಳು ನಾವೆಲ್ಲರೂ ದರಿದ್ರರೇ..? ಎಂದು ಪ್ರಶ್ನಿಸಿ ಭಕ್ತರು ಬಡವರಲ್ಲ ಎಂದು ಸಾಬೀತುಪಡಿಸಿದ ಇವರು ಅತ್ಯಂತ ಭಕ್ತಿಮಯ ಜ್ಞಾನಿಗಳಾಗಿ ದ್ದರು. ಇದಕ್ಕೆ ಮೂಲ ಕಾರಣ ಶೂದ್ರರಿಗೆ ವಿದ್ಯೆ ದೊರೆಯದ ಕಾಲದಲ್ಲೇ ಇವರಿಗೆ ವಿದ್ಯೆ ಕಲಿಸಿದ ಇವರ ಗುರುಗಳಾದ ಮಲ್ಲಿಕಾರ್ಜುನಯ್ಯ ಸ್ವಾಮಿಗಳು.
ಜ್ಞಾನ ಸಂಪಾದನೆಯಲ್ಲಿ ಹಾಗೂ ಭಕ್ತಿಪಥದಲ್ಲಿ ಗುರುವಿನ ಪಾತ್ರ ಹಿರಿದು ಎಂಬುದಕ್ಕೆ ಮಡಿವಾಳ ಮಾಚಿದೇವರ ಜೀವನವೇ ಸಾಕ್ಷಿ. ಸಾಮಾಜಿಕವಾಗಿ ಅಸಮಾನತೆಯನ್ನು ಆಚರಿಸುತ್ತಿದ್ದ ಅಂದಿನ ಕಾಲದಲ್ಲೇ ಭಕ್ತರಲ್ಲದವರು ನನ್ನನ್ನು ಮುಟ್ಟಬೇಡಿ ಎಂಬ ಮಾತಿನೊಂದಿಗೆ ಜಾತಿವಾದಿಗಳನ್ನು ಆತ್ಮವಿಮರ್ಶೆಗೆ ಹಚ್ಚಿದ ಮಹನೀಯರು. ಇಂತಹ ಮಹಾನ್ ಶರಣರು ಹುಟ್ಟಿ ಬೆಳೆದು ಪವಿತ್ರ ಸಂದೇಶ ನೀಡಿ ಹೋದ ಈ ನಮ್ಮ ಕಲ್ಯಾಣ ಕರ್ನಾಟಕ ನಾಡು ಧನ್ಯ ಎಂದರು.
ಈ ಸಂದರ್ಭದಲ್ಲಿ ಚಿನ್ನವರಪ್ರಸಾದ ಹಾಗೂ ದುರ್ಗಾಕೃಷ್ಣ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















