ಬಳ್ಳಾರಿ / ಕಂಪ್ಲಿ : ಪೌತಿಯಾದ ಕುಟುಂಬದ ಸದಸ್ಯರಿಗೆ ಖಾತೆಯಾಗದಿರುವುದನ್ನು ಗಮನಿಸಿ ಸರ್ಕಾರವೇ ಪೌತಿ ಖಾತೆ ಆಂದೋಲನದ ಮೂಲಕ ಅನುಕೂಲ ಕಲ್ಪಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್ ಜೂಗಲ್ ಮಂಜುನಾಯಕ ಹೇಳಿದರು.
ಅವರು ತಾಲೂಕಿನ ಮೆಟ್ರಿಯ ಗ್ರಾ ಪಂ. ಕಛೇರಿಯಲ್ಲಿ ಕಂದಾಯ ಇಲಾಖೆ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಇ-ಪೌತಿ ಆಂದೋಲನ ಹಾಗೂ ಪಿಂಚಣಿ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಫಲಾನುಭವಿಗಳು ಗ್ರಾಮ ಲೆಕ್ಕಾಧಿಕಾರಿಗಳೊಂದಿಗೆ ಸ್ಪಂದಿಸಿ ಕೆಲಸ ಮಾಡಿಸಿಕೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ಭೂದಾಖಲೆಗಳ ನಿರ್ವಹಣೆ ಸಂಬಂಧ ಸಾರ್ವಜನಿಕ ಸೇವೆ ಪಾರದರ್ಶಕವಾಗಿಡಲು ಮುಂದಾಗಿದೆ. ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಡಲು ಪೌತಿ ಖಾತೆ ಆಂದೋಲನ ಮಾಡಲಾಗುತ್ತಿದೆ. ಜಮೀನಿನ ಅನುಭವದಲ್ಲಿ ಇದ್ದರೂ ಪಿತ್ರಾರ್ಜಿತ ಆಸ್ತಿಯ ಹಕ್ಕು ಪಡೆಯಲು ಸಾಕಷ್ಟು ಜನರಿಗೆ ಸಾಧ್ಯವಾಗಿಲ್ಲ. ಹಿರಿಯರ ಮರಣ ಪ್ರಮಾಣ ಪತ್ರ ಇಲ್ಲದೆ ಜಮೀನಿನ ಖಾತೆ ವರ್ಗಾವಣೆ ಸಾಧ್ಯವಾಗುತ್ತಿಲ್ಲ. ಪೂರ್ವಿಕರ ಮರಣ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗುವಂತೆ ಕಾನೂನಾತ್ಮಕ ನೆರವನ್ನು ನೀಡಲಾಗುವುದು ಎಂದರು.
ನಂತರ ಗ್ರಾಮ ಆಡಳಿತಾಧಿಕಾರಿ ಶಿವಪುತ್ರ ಪ್ರಾಸ್ತಾವಿಕವಾಗಿ ಮಾತನಾಡಿ, ಸರ್ಕಾರ ಈ ಪೌತಿ ಮೂಲಕ ಪಿತ್ರಾರ್ಜಿತ ಆಸ್ತಿಯ ಹಕ್ಕನ್ನು ರೈತರ ಹೆಸರಿಗೆ ವರ್ಗಾವಣೆ ಮಾಡಿಸಿಕೊಡಲು ಅನುವು ಮಾಡಿಕೊಟ್ಟಿದೆ. ಈ ಯೋಜನೆಯ ಸದ್ಭಳಕೆಯೊಂದಿಗೆ ಆಸ್ತಿ ಹಕ್ಕನ್ನು ಪಡೆದುಕೊಳ್ಳಬೇಕು. ಇ ಪೋತಿಯಲ್ಲಿ 11 ಅರ್ಜಿಗಳು ಬಂದಿದ್ದು, ಮರಣಕ್ಕೆ ಸಂಬಂಧಿಸಿದಂತೆ 18 ಅರ್ಜಿಗಳು ಸ್ವೀಕೃತಗೊಂಡಿದ್ದು, ಇನ್ನಷ್ಟು ಅರ್ಜಿಗಳು ಬರಲಿವೆ ಎಂದರು.
ನಂತರ ರೈತ ಮುಖಂಡ ಹೊನ್ನಳ್ಳಿ ಗಂಗಾಧರ ಮಾತನಾಡಿ, ಗ್ರಾಮದಲ್ಲಿರುವ ಸರ್ವೆ ನಂ-175g ಎ/1ರಲ್ಲಿ ಸುಮಾರು 2.61 ಎಕರೆ ಭೂಮಿ ಇದ್ದು, ಪಹಣಿಯ ಅಂಕಣ(6)ರಲ್ಲಿ ಇನಾಮು ಎಂದು ನಮೂದಾಗಿದೆ. 20-07-2001ರಲ್ಲಿ ಹಿಂದಿನ ಹೊಸಪೇಟೆಯ ತಹಶೀಲ್ದಾರರು ಇನಾಂ ರದ್ದು ಮಾಡಿ ರೈತವಾರಿ ಪಟ್ಟಾ ಫಾರಂ-2 ನೀಡಿದ್ದಾರೆ. ಆದರೆ, ಇಲ್ಲಿವರೆಗೂ ಪಹಣಿಯಲ್ಲಿ ಇನಾಂ ರದ್ದು ಮಾಡಿಲ್ಲ. ಜನಸ್ಪಂದನ, ಗ್ರಾಮ ವಾಸ್ತವ್ಯ ಸೇರಿದಂತೆ ಇನ್ನಿತರದಲ್ಲಿ ಹಲವು ಬಾರಿ ಮನವಿ ಪತ್ರ ಸಲ್ಲಿಸಿದರೂ ಏನು ಪ್ರಯೋಜನ ಆಗಿಲ್ಲ. ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸುತ್ತಾರೋ ಇಲ್ಲವೋ ಎಂಬುದು ತಿಳಿಯದಂತಾಗಿದೆ. ಈಗಲಾದರೂ ತಹಶೀಲ್ದಾರ್ ರೈತರ ಸಂಕಷ್ಟವನ್ನು ಅರಿತು, ಇನಾಂ ರದ್ದು ಮಾಡಿ ಪಟ್ಟಾ ನೀಡಬೇಕೆಂದು ಮನವಿ ಪತ್ರದ ಮೂಲಕ ಆಗ್ರಹಿಸಿದರು.
ಗ್ರಾಮದ ಜನಸಂಖ್ಯೆ ಹೆಚ್ಚಿಗೆ ಇದ್ದು, ಇನ್ನೊಬ್ಬ ಗ್ರಾಮ ಆಡಳಿತಾಧಿಕಾರಿಯನ್ನು ನೇಮಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಹಾಗೂ ಇನ್ನಿತರ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಾಗಮ್ಮ, ಸೊಸೈಟಿ ಅಧ್ಯಕ್ಷ ಹೊಸಕೋಟೆ ಜಗದೀಶ, ವೀರಶೈವ ಸಮಾಜದ ತಾಲೂಕು ಉಪಾಧ್ಯಕ್ಷ ಹೊನ್ನಳ್ಳಿ ಶಿವಪುತ್ರಪ್ಪ ಮೆಟ್ರಿ, ಕಂದಾಯ ಇಲಾಖೆಯ ಆರ್ಐ ಜಗದೀಶ, ಮುಖಂಡರಾದ ಸಿ.ಡಿ.ಮಹಾದೇವ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















