ಚಿಟಗುಪ್ಪಾ : ಪಾನಮುಕ್ತರು ಹೊಸ ಬದುಕನ್ನು ರೂಪಿಸಿಕೊಂಡು ನೆಮ್ಮದಿಯ ಜೀವನ ಸಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡ ಬೇಕು ಎಂದು ಕರ್ನಾಟಕ ಚುಟುಕು ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷ, ಸಾಹಿತಿ ಸಂಗಮೇಶ ಎನ್ ಜವಾದಿ ಹೇಳಿದರು.
ಪಟ್ಟಣದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಛೇರಿಯಲ್ಲಿ ಆಯೋಜಿಸಿದ್ದ ನವಜೀವನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜವಾದಿ ರವರು ಮಹಾನ್ ವ್ಯಕ್ತಿಗಳು ನೀಡಿರುವ ತತ್ತ್ವಗಳನ್ನು ತಪ್ಪದೇ ಪಾಲಿಸಬೇಕು. ಪೋಷಕರು ತಮ್ಮ ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ದುಶ್ಚಟಗಳಿಗೆ ಮಾರು ಹೋಗುವುದನ್ನು ತಪ್ಪಿಸುವ ಕೆಲಸ ಮಾಡಬೇಕು. ಯುವಶಕ್ತಿ ಕಂಡು ಕಾಣದಂತೆ ಮಾದಕ ವ್ಯಸನಕ್ಕೆ ದಾಸರಾಗುತ್ತಿದ್ದಾರೆ. ಇದನ್ನು ತಡೆಯುವಲ್ಲಿ ಪಾಲಕರು ಮತ್ತು ಸಮುದಾಯ ನಿಯಂತ್ರಿಸುವಲ್ಲಿ ಕಡಿವಾಣ ಹಾಕಬೇಕು. ಪಾನಮುಕ್ತರು ಶುದ್ಧರಾಗಿ ಮತ್ತೆ ಯಾವತ್ತೂ ಮದ್ಯದ ಅಂಗಡಿಗಳಿಗೆ ಹೋಗದಂತೆ ತಮ್ಮ ಪಂಚೇಂದ್ರಿಯಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಾನಮುಕ್ತ ರಾಷ್ಟ್ರವಾಗಿ ಮಾಡುವಲ್ಲಿ ಪಣ ತೊಟ್ಟಿದೆ. ಇಂತಹ ಕಾರ್ಯಕ್ರಮಗಳಿಗೆ ಸರ್ವರೂ ಸಹಕಾರ ನೀಡಬೇಕು ಎಂದರು.
ಪ್ರಾದೇಶಿಕ ಕಚೇರಿಯ ಜನಜಾಗೃತಿಯ ಯೋಜನಾಧಿಕಾರಿಗಳಾದ ರಾಜೇಶ್ ರವರು ಸಂಸ್ಕಾರವಂತರ ನಾಡಿನಲ್ಲಿ ಮದ್ಯವ್ಯಸನಿಗಳ ಸಂಖ್ಯೆ ಶೇ.65ರಷ್ಟಿದೆ. ಇದು ಕಳವಳಕಾರಿ ಸಂಗತಿ. ಮದ್ಯಪಾನದಿಂದಾಗಿ ಕುಟುಂಬಗಳು ಬೀದಿಪಾಲಾಗುವುದರ ಜೊತೆಗೆ ಸಾಮರಸ್ಯ ಕಡಿಮೆಯಾಗುತ್ತಿದೆ. ಹೀಗಾಗಿ ಪಾನಮುಕ್ತರಾಗಿ ನವಜೀವನ ಪ್ರಾರಂಭಿಸಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ
ಆಯೋಜಿಸಲಾಗಿರುವ ಶಿಬಿರಗಳಲ್ಲಿ ಶೇ.70 ರಷ್ಟು ಮಂದಿ ಅಮಲಿನಿಂದ ಮುಕ್ತರಾಗಿ ಹೊಸಜೀವನ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಜನಜಾಗೃತಿಯ ವೇದಿಕೆಯ ಸದಸ್ಯರಾದ
ಅಸ್ಲಾಂಮಿಯಾ ಮಾತನಾಡಿ ಒಮ್ಮೆ ಕುಡಿತ ಬಿಟ್ಟ ನಂತರ ಜೀವನ ಪರ್ಯಂತ ಇದನ್ನು ರಕ್ಷಣೆ ಮಾಡುವಲ್ಲಿ ತಾವು ಮತ್ತು ತಮ್ಮ ಕುಟುಂಬದವರು ಸದಾ ಚಿಂತಿಸಬೇಕು.
ಪ್ರತಿಯೊಬ್ಬರೂ ಮದ್ಯ ವ್ಯಸನ ಚಟದಿಂದ ದೂರ ಉಳಿಯಬೇಕು. ಕುಡಿತದಿಂದ ಕುಟುಂಬ, ಸಮಾಜದ ಸ್ವಾಸ್ಥ್ಯ ಹಾಳಗುತ್ತದೆ. ಈ ಹಿನ್ನೆಲೆ ಮದ್ಯ ಸೇವನೆ ಮಾಡದೆ ನೆಮ್ಮದಿ ಜೀವನ ನಡೆಸಬೇಕೆಂದು ಸಲಹೆ ನೀಡಿದರು.
ತಾಲೂಕಿನ ಯೋಜನಾಧಿಕಾರಿಗಳಾದ ವೀರೇಶ್ ರವರು ಮದ್ಯವರ್ಜನ ಶಿಬಿರದಿಂದ ಬಹಳ ಕುಟುಂಬಗಳು ನೆಮ್ಮದಿ ಜೀವನ ನಡೆಸಲು ಅವಕಾಶವಾಗಿದೆ. ಪಾನಮುಕ್ತ ಸದಸ್ಯರು ಜೀವನದಲ್ಲಿ ಆರ್ಥಿಕವಾಗಿ ಸದೃಢರಾಗಬೇಕು. ಮಕ್ಕಳ ಓದಿಗೆ ಹೆಚ್ಚು ಒತ್ತು ನೀಡಬೇಕು. ಕಷ್ಟಪಟ್ಟು ದುಡಿದ ಹಣವನ್ನು ಸದ್ಬಳಕೆ ಮಾಡಿಕೊಂಡು ಕುಟುಂಬದ ಜತೆ ಸುಖ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.
ಇದೆ ಸಮಯದಲ್ಲಿ ಪಾನಮುಕ್ತ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕಚೇರಿಯ ಪ್ರಬಂಧಕರು ವೀರೇಶ್, ಕೃಷಿ ಮೇಲ್ವಿಚಾರಕರು ಸಿದ್ದು ಪೂಜಾರಿ, ಮಹಿಳಾ ಅಧಿಕಾರಿ ಶೋಭಾ ಸೇರಿದಂತೆ ಸೇವಾ ಪ್ರತಿನಿಧಿಗಳು, ಪಾನಮುಕ್ತ ಸದಸ್ಯರು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ



















