ಬಳ್ಳಾರಿ / ಕಂಪ್ಲಿ: ಹೈಕೋರ್ಟ್ ನೇಮಕಾತಿ ಸಮಿತಿ ಇತ್ತೀಚೆಗೆ ನಡೆಸಿದ ನ್ಯಾಯಾಧೀಶರ ಆಯ್ಕೆಯಲ್ಲಿ ಕಂಪ್ಲಿ ಸಮೀಪದ ಚಿಕ್ಕಜಂತಕಲ್ ಗ್ರಾಮದ ಗ್ರಾಮೀಣ ಪ್ರತಿಭೆ ಸಂತೋಷ್ ಬಸವರಾಜ ಬೆಳಗೊಡು ಯುವಕ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಸಣಾಪುರ ಗ್ರಾಮ ಮತ್ತು ಕಂಪ್ಲಿ ಪಟ್ಟಣದಲ್ಲಿ ಕುಟುಂಬಸ್ಥರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಸಂತೋಷ್ ಬಸವರಾಜ ಬೆಳಗೋಡು ಹಾಳು ಇವರ ತಾಯಿ ಶಶಿಕಲಾ ಬಸವರಾಜ ಅವರು ಮೂಲತಃ ಸಣಾಪುರ ಗ್ರಾಮದವರಾಗಿದ್ದು, ಇವರನ್ನು ಸಮೀಪದ ಚಿಕ್ಕ ಜಂತಕಲ್ ಗ್ರಾಮದ ಬಸವರಾಜ ಬೆಳಗೋಡು ಅವರಿಗೆ ವಿವಾಹ ಮಾಡಿಕೊಟ್ಟಿದ್ದರು.
ಸಂತೋಷ್ ಬಸವರಾಜ ಬೆಳಗೊಡು ಅವರು ಪ್ರಾಥಮಿಕ ಹಂತದಿಂದಲೂ ಶಿಕ್ಷಣದ ಕಡೆಗೆ ವಿಶೇಷ ಆಸಕ್ತಿ ಹೊಂದಿದ್ದರು. ಗಂಗಾವತಿಯ ಲಿಟಲ್ ಹಾರ್ಟ್ ಶಾಲೆಯಲ್ಲಿ ಪ್ರಾಥಮಿಕ,ಹಿರಿಯ ಶಿಕ್ಷಣ ಪಡೆದು ಮಂಡ್ಯ ಜಿಲ್ಲೆಯಲ್ಲಿ ಪ್ರೌಢಶಿಕ್ಷಣ, ಚಿಕ್ಕಬಳ್ಳಾಪುರದಲ್ಲಿ ಪದವಿ ಪೂರ್ವ ಶಿಕ್ಷಣ ಪಡೆದು ಬೆಂಗಳೂರಿನ ಪ್ರತಿಷ್ಠಿತ ಬಿ.ಎಂ.ಎಸ್. ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಮುಗಿಸಿ ನಂತರ 2023ರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಾಯಿಸಿಕೊಂಡು ತಮ್ಮ ವಕೀಲಿಕೆ ವೃತ್ತಿಯನ್ನು ಬೆಂಗಳೂರಿನ ನ್ಯಾಯಾಲಯಗಳಲ್ಲಿ ಆರಂಭಿಸಿದರು. 2025 ಫೆ.10 ರಂದು ಕರ್ನಾಟಕ ಉಚ್ಛ ನ್ಯಾಯಾಲಯ ಪ್ರಕಟಿಸಿದ ಅಧಿಸೂಚನೆ ಅನ್ವಯ ಪೂರ್ವಭಾವಿ ಪರೀಕ್ಷೆ,ಮುಖ್ಯ ಪರೀಕ್ಷೆ ಮತ್ತು ಜನವರಿಯಲ್ಲಿ ನಡೆದ ಸಂದರ್ಶನದಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಆಯ್ಕೆಗೊಂಡಿರುವುದು ಕುಟುಂಬಸ್ಥರಲ್ಲಿ ಸಂತಸವನ್ನು ತಂದಿದ್ದು, ನ್ಯಾಯಾಧೀಶರಾಗಿ ಆಯ್ಕೆಯಾದ ಸಂತೋಷ್ ಬಸವರಾಜ ಬೆಳಗೋಡು ಅವರ ತಾಯಿಯ ತವರೂರಾದ ಸಣಾಪುರ ಮತ್ತು ಕಂಪ್ಲಿ ಪಟ್ಟಣದಲ್ಲಿ ಅವರ ಆಜ್ಜಿ ಕನಕಗಿರಿ ಈರಮ್ಮ,ಕನಕಗಿರಿ ರೇಣುಕಗೌಡ, ಕನಕಗಿರಿ ದೊಡ್ಡಬಸವರಾಜ ಹಾಗೂ ಕುಟುಂಬದ ಸದಸ್ಯರು ಸಿಹಿ ವಿತರಿಸುವ ಜೊತೆಗೆ ನ್ಯಾಯಾಧೀಶರಾದ ಸಂತೋಷ ಬಸವರಾಜ ಬೆಳಗೋಡು ಅವರಿಗೆ ಸಿಹಿ ತಿನ್ನಿಸಿ ಸಂಭ್ರಮಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















