ಬಳ್ಳಾರಿ / ಕಂಪ್ಲಿ: ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಅತಿಥಿ ಶಿಕ್ಷಕನ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿರುವ ಘಟನೆ ಕಂಪ್ಲಿ ತಾಲೂಕಿನ ಗ್ರಾಮವೊಂದರಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿನ ಘಟನೆ ಮಾನವ ಕುಲ ತಲೆ ತಗ್ಗಿಸುವ ದುರ್ಘಟನೆ ಇದಾಗಿದ್ದು, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 11 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತಿಥಿ ಶಿಕ್ಷಕ ಜಡೆಪ್ಪ ಲೈಂಗಿಕ ಕಿರುಕುಳ ಮತ್ತು ದೌರ್ಜನ್ಯ ಎಸಗಿದ್ದಾನೆ ಎನ್ನಲಾಗುತ್ತಿದೆ. ಕಳೆದ ಸೋಮವಾರ (ಫೆ.16)ದಂದು ಬೆಳಿಗ್ಗೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದ ವಿದ್ಯಾರ್ಥಿನಿಯು ಆವರಣದಲ್ಲಿ ಸ್ವಚ್ಚತೆಯಲ್ಲಿ ನಿರತಳಿದ್ದಾಗ ಇಲ್ಲಿನ ಅತಿಥಿ ಶಿಕ್ಷಕ ನಮ್ಮ ಮನೆ ನೋಡಿಕೊಂಡು ಬರೋಣ ಎಂದು ಕರೆದುಕೊಂಡು ಹೋಗಿ ವಿದ್ಯಾರ್ಥಿನಿ ಮೇಲೆ ಕಿರುಕುಳ ಎಸಗಿದ್ದಾನೆ. ಫೆ.22ರ ಭಾನುವಾರ ಸಂಜೆ ತಮ್ಮ ಮನೆಯಲ್ಲಿದ್ದಾಗ ಪೋಷಕರು ವಿದ್ಯಾರ್ಥಿನಿಗೆ ಸೋಮವಾರ ಶಾಲೆಗೆ ಹೋಗಬೇಕು ಎಂದಾಗ ನಾನು ಶಾಲೆಗೆ ಹೋಗುವುದಿಲ್ಲ ಎಂದಿದ್ದಾಳೆ, ಪೋಷಕರು ಹೋಗಲೇಬೇಕು ಎಂದು ತಾಖೀತು ಮಾಡಿದಾಗ ಮಗು ಅಳುತ್ತಾ ಪೋಷಕರ ಮುಂದೆ ಕರಾಳ ಸತ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ಈ ಘಟನಾ ವಿಷಯ ತಿಳಿದ ಪೋಷಕರು ವಿದ್ಯಾರ್ಥಿನಿ ಮುಖೇನ ಪೊಲೀಸ್ ಠಾಣೆಗೆ ಶಿಕ್ಷಕನನ್ನು ಹಿಡಿದುಕೊಂಡು ಬಂದು ಒಪ್ಪಿಸಿ, ಫೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ಸೃಷ್ಠಿಯಾಗಿದ್ದು, ಪೊಲೀಸ್ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಠಿಕಾಣಿ ಹೂಡಿದ್ದಾರೆ. ಇನ್ನೂ ತನಿಖಾ ಕಾರ್ಯದ ಮೂಲಕ ಇನ್ನಷ್ಟು ಮಾಹಿತಿ ಹೊರ ಬರಬೇಕಾಗಿದೆ.
ಶಾಲೆ ಮುಂದೆ ಪ್ರತಿಭಟನೆ :
ಈ ಘಟನೆ ಖಂಡಿಸಿ, ಪೋಷಕರು ಹಾಗೂ ವಾಲ್ಮೀಕಿ ನಾಯಕ ಸಮಾಜದವರು ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಿ, ಅತಿಥಿ ಶಿಕ್ಷಕನಿಗೆ ಕಠಿಣ ಶಿಕ್ಷೆಯಾಗಬೇಕು. ಇದಕ್ಕೆ ಮುಖ್ಯಗುರುವಿನ ಬೇಜವಾಬ್ದಾರಿತನ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ. ಮುಖ್ಯಗುರುವನ್ನು ಸೇವೆಯಿಂದ ವಜಾಗೊಳಿಸಿ, ಕಾನೂನಾತ್ಮಕವಾಗಿ ಶಿಕ್ಷೆಯಾಗಬೇಕೆಂಬ ಒತ್ತಾಯಿಸಿದ್ದಾರೆ.
ನಂತರ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕು ಅಧ್ಯಕ್ಷ ನೀರ್ಗಂಟಿ ವಿರೇಶ ಮಾತನಾಡಿ ಮಾನವ ಕುಲವೇ ತಲೆ ತಗ್ಗಿಸುವಂತಹ ಘಟನೆಯಾಗಿದೆ. ನಿರ್ಭಯ ಮತ್ತು ನಿರ್ಭೀತಿಯಿಂದ ಮಕ್ಕಳು ಶಾಲೆಗೆ ಹೋಗಬೇಕೆಂದರೆ, ಇಂತಹವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹಿಳಾ ಮತ್ತು ಮಕ್ಕಳ ಆಯೋಗವು ಸ್ವಯಂ ಪ್ರೇರಿತವಾಗಿ ಕೇಸ್ ದಾಖಲಿಸಿಕೊಂಡು, ಶಿಕ್ಷಿಸಬೇಕು. ಉನ್ನತ ಮಟ್ಟದಲ್ಲಿ ತನಿಖೆಯಾಗಬೇಕು. ಇದನ್ನು ಇಲ್ಲಿಗೆ ಬಿಡುವು ಮಾತೇ ಇಲ್ಲ ಎಂದರು.
ಬೇರೆ ಕಡೆ ನಿಯೋಜನೆ :
ತಾಲೂಕಿನ ದೇವಸಮುದ್ರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಿಇಒ ಸಿದ್ಧಲಿಂಗಮೂರ್ತಿ ಇವರು ಸೋಮವಾರ ಭೇಟಿ ನೀಡಿದ ಸಂದರ್ಶನ ವೇಳೆ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಡಿ.ಬಿ.ದೊಡ್ಡಬಸಪ್ಪ ಇವರು ಶಾಲೆ ಕರ್ತವ್ಯಕ್ಕೆ ಸಮಯಕ್ಕೆ ಸರಿಯಾಗಿ ಹಾಜರಾಗದೇ, ಪಾಠ ಪ್ರವಚನಗಳನ್ನು ನಿರ್ವಹಿಸದೇ ಇರುವುದರಿಂದ ಕೂಡಲೇ ಬೇರೆಡೆಗೆ ವರ್ಗಾಯಿಸಬೇಕು. ಇಲ್ಲದಿದ್ದಲ್ಲಿ ಶಾಲೆಗೆ ಬೀಗ ಹಾಕಿ ಧರಣಿ ಮಾಡುವುದಾಗಿ ಸಾರ್ವಜನಿಕರು ತಿಳಿಸಿದ ಹಿನ್ನಲೆಯಲ್ಲಿ ದೊಡ್ಡಬಸಪ್ಪ ಇವರನ್ನು ತಾತ್ಕಾಲಿಕವಾಗಿ ಅವರ ಮೇಲಿನ ಆರೋಪಗಳ ಮೇಲಿನ ವಿಚಾರಣೆ ಬಾಕಿ ಇಟ್ಟು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ರಾಜು ಕ್ಯಾಂಪ್ ಇಲ್ಲಿಗೆ ತಕ್ಷಣದಿಂದ ಬೋಧನಾ ಕಾರ್ಯ ಹೊಂದಾಣಿಕೆ ಮಾಡಿ, ಇವರನ್ನು ಕೂಡಲೇ ಶಾಲಾ ಕರ್ತವ್ಯದಿಂದ ಬಿಡುಗಡೆಗೊಳಿಸಲು ಮುಖ್ಯ ಶಿಕ್ಷಕರಿಗೆ ಸೂಚಿಸಿ ಆದೇಶಿಸಿದರು. ಇಲ್ಲಿನ ಶಾಲೆಗೆ ಮುಖ್ಯ ಶಿಕ್ಷಕರ ಕಾರ್ಯ ಭಾರವನ್ನು ಹಿರಿಯ ಶಿಕ್ಷಕ ರಂಗಪ್ಪ ಕಟ್ಟಿಮನಿ ಇವರಿಗೆ ವಹಿಸಿಕೊಡಲು ಕಾರ್ಯ ನಿರ್ವಹಿಸಲು ಸೂಚಿಸಿದೆ.
ವರದಿ : ಜಿಲಾನಸಾಬ್ ಬಡಿಗೇರ್



















