
ಬಳ್ಳಾರಿ / ಕಂಪ್ಲಿ : ಸಮಾಜದಲ್ಲಿ ಸಂಸ್ಕೃತಿ ಎಂಬುವುದು ಜೀವಂತವಾಗಿರಬೇಕೆಂದರೆ ಇಂತಹ ವೇದಪಾಠಶಾಲೆಗಳು ನಿರಂತರವಾಗಿ ನಡೆಯಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಹಸುವಿನ ಕೊಡುಗೆ ಅಪಾರವಾಗಿದೆ ಎಂದು ಮಹರಾಷ್ಟ್ರದ ಕನ್ನೇರಿಮಠದ ಅದೃಶ್ಯಕಾಡಸಿದ್ದೇಶ್ವರ ಮಹಾಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ತಾಲೂಕಿನ ದೇವಸಮುದ್ರ ಕ್ರಾಸ್ ಬಳಿಯ ಹೊರವಲಯದಲ್ಲಿರುವ ಕಲ್ಯಾಣಚೌಕಿಮಠದ ಕಾಮಧೇನು ಗೋಶಾಲಾ ಸೇವಾ ಟ್ರಸ್ಟಿನ ಗೋಶಾಲಾ ಆವರಣದ ಚನ್ನವೀರ ಚೇತನ ಮರಳಸಿದ್ಧಸ್ವಾಮಿ ಮಹಾಮಂಟಪ ವೇದಿಕೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಕಾಮಧೇನು ಗೋಶಾಲೆ, ಕಲ್ಯಾಣ ಕೃಷಿ ಆಶ್ರಮ ಮತ್ತು ಗುರುಕುಲ ಶಿಕ್ಷಣ ಉದ್ಘಾಟಿಸಿ ಮಾತನಾಡಿ, ಈ ಮಠವು ಸನ್ಯಾಸಿ ಮತ್ತು ಮಠಧೀಶರಿಗೂ ಮಿಗಿಲಾಗಿ ಈ ಸಮಾಜದ ದೀಪಸ್ತಂಬವಾಗಿ ಕೃಷಿ ಆಶ್ರಮ, ಗೋಶಾಲೆ, ವೇದಾ ಪಾಠಶಾಲೆಯ ಮೂಲಕ ಸೇವೆ ಮಾಡುತ್ತಿರುವ ಕಾರ್ಯ ದೊಡ್ಡದಾಗಿದೆ. ದೇಶದಲ್ಲಿ 8-10 ಕೋಟಿ ಕುಟುಂಬಗಳು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಮನುಷ್ಯನ ದಾಹ ಮತ್ತು ಅಭಿಲಾಷೆಯನ್ನ ತೃಪ್ತಿಗೊಳಿಸುವ ನಿಟ್ಟಿನಲ್ಲಿ ಆಧ್ಯಾತ್ಮಕ ಗ್ರಂಥಗಳ ಪಾತ್ರ ಅತಿ ಮುಖ್ಯವಾಗಿದೆ. ಇಂದಿನ ದಿನಮಾನದಲ್ಲಿ ಪೋಷಕರ ಪಾಲನೆ ಪೋಷಣೆ ಅಗತ್ಯವಾಗಿದೆ. ಮಣ್ಣು, ನೀರು, ಜಾನುವಾರು ಮತ್ತು ಜೀವಾಳುಗಳು ಇದ್ದಾಗ ಮಾತ್ರ ರೈತರಿಗೆ ನೆಲೆ ಸಿಗಲು ಸಾಧ್ಯ. ವೇದಸುಳ್ಳಾದರೂ ಗಾದೆ ಸುಳ್ಳಾಗದು ಎಂಬಂತೆ ರೈತರು ಹಸುವಿನ ಮೂಲಕ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಗೋಮಾತೆ ಆರೋಗ್ಯದ ಸಂಕೇತ, ಇದರಿಂದ ಜನರು ಆರೋಗ್ಯವಂತರಾಗಿರಲು ಸಾಧ್ಯವಾಗಿದೆ. ಸಮಾಜದ ಆರೋಗ್ಯವೇ ಹಸುವಾಗಿದೆ. ಪ್ರತಿಯೊಬ್ಬರೂ ಹಸುವಿನ ಪ್ರಯೋಜನೆ ಪಡೆದು ಉತ್ತಮ ಜೀವನ ನಡೆಸಬೇಕು. ಸಮಾಜದ ಒಳಿತಿಗೆ ಗೋವುಗಳು ಅತಿಮುಖ್ಯವಾಗಿದೆ. ಅಳವಿನಂಚಿನಲ್ಲಿರುವ ಕತ್ತೆಗಳನ್ನು ಉಳಿಸಬೇಕಾಗಿದೆ. ಈ ಭಾಗದ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಮುಚ್ಚುವ ಹಂತಕ್ಕೆ ಬಂದಿದೆ. ಆದರೆ, ಭೂಮಿಗೆ ಹಸುವಿನ ಗೊಬ್ಬರ ಬಳಕೆ ಮಾಡಿದರೆ, ಜಲಾಶಯಗಿಂತ ಅತಿ ಹೆಚ್ಚಿನ ಮಟ್ಟದಲ್ಲಿ ನೀರು ಸಂಗ್ರಹಿಸಬಹುದಾಗಿದೆ. ವೇದ ಪಾಠಶಾಲೆಯಿಂದ ಸಮಾಜದ ಬದಲಾವಣೆಯಾಗುತ್ತದೆ. ಧರ್ಮದಿಂದ ಸಮಾಜ ಮತ್ತು ದೇಶ ಉಳಿಯಲು ಸಾಧ್ಯ ಎಂದರು.
ಕಲ್ಯಾಣಚೌಕಿಮಠದ ಚನ್ನಮಲ್ಲಯ್ಯ ಶಾಸ್ತ್ರಿ , ಕೆ.ಎಂ.ಬಸವರಾಜ ಶಾಸ್ತ್ರಿಪ್ರಾಸ್ತಾವಿಕವಾಗಿ ಮಾತನಾಡಿ, ಕಲ್ಯಾಣಚೌಕಿ ಮಠವು ಬ್ರಿಟಿಷರ ಕಾಲದಿಂದಲೂ ಗುರುಕುಲ ಶಿಕ್ಷಣ ಸಂಸ್ಥೆ ನಡೆಸಿಕೊಂಡು ಬಂದಿದೆ. ಈ ಮಠಕ್ಕೆ ಐತಿಹಾಸಿಕ ಹಿನ್ನಲೆ ಇದೆ. ದಾನದಿಂದ ದಾಸೋಹ ಮಾಡಿಕೊಂಡು ಬರಲಾಗಿದೆ. ಇಂದಿನ ಆಧುನಿಕತೆಯಲ್ಲಿ ರಾಸಾಯನಿಕ ಗೊಬ್ಬರ ಬಳಕೆ ಬಿಟ್ಟು, ರೈತರು ಸಾವಯವ ಗೊಬ್ಬರದಿಂದ ನೆಮ್ಮದಿಯ ಬದುಕಿನ ಕಡೆಗೆ ಮುಖ ಮಾಡಬೇಕಾಗಿದೆ ಎಂದರು.
ಇಲ್ಲಿನ ವೇದಿಕೆಯಲ್ಲಿ ಸಂಗಮೇಶ್ವರ ದೇಶಿ ಉತ್ಪನ್ನಗಳ ಕೇಂದ್ರದ ಪ್ರೊ. ಸಿರಿನ ಭಾನು ಅವರು ಹಸುವಿನ ಸೆಗಣಿಯಿಂದ ತಯಾರಿಸಿ ಉತ್ಪನ್ನಗಳ ಪ್ರಯೋಜನದ ಬಗ್ಗೆ ಅದೃಶ್ಯಕಾಡಸಿದ್ದೇಶ್ವರ ಮಹಾಸ್ವಾಮಿ ಒಂದೊಂದಾಗಿ ತೋರಿಸುವ ಮೂಲಕ ಆರೋಗ್ಯದ ಗುಟ್ಟು ಬಿಚ್ಚಿಟ್ಟರು.
ಈ ಸಂದರ್ಭದಲ್ಲಿ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ, ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿ, ಮಲ್ಲಯ್ಯ ಶಾಸ್ತ್ರಿ , ಹೆಚ್.ವೀರಾಪುರದ ಜಡೇಶತಾತ, ಮಾಜಿ ಶಾಸಕ ಪರಣ್ಣ ಮುನ್ನವಳ್ಳಿ, .ಪುರಸಭೆ ಮಾಜಿ ಅಧ್ಯಕ್ಷ ಎಂ. ಸುಧೀರ್, ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಪಿ.ಮೂಕಯ್ಯಸ್ವಾಮಿ, ಮುಖಂಡರಾದ ಹೊಸಕೋಟೆ ಜಗದೀಶ, ಎನ್.ಎಂ.ಪತ್ರಯ್ಯಸ್ವಾಮಿ, ಬಿ.ನಾರಾಯಣಪ್ಪ, ಹೊನ್ನಳ್ಳಿ ಗಂಗಾಧರ ಸೇರಿದಂತೆ ಸ್ವಾಮಿಗಳು ಹಾಗೂ ಭಕ್ತರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















