ಬಳ್ಳಾರಿ / ಕುರುಗೋಡು :
ಐತಿಹಾಸಿಕ ಪ್ರಸಿದ್ಧ ಶ್ರೀ ದೊಡ್ಡಬಸವೇಶ್ವರ ಮಹಾ ರಥೋತ್ಸವ ಹೋಳಿ ಹುಣ್ಣಿಮೆ ಮಾ.3ರಂದು ಚಂದ್ರಗ್ರಹಣ ಇರುವುದರಿಂದ ಮಧ್ಯಾಹ್ನ 1.05 ಗಂಟೆಯಿಂದ 3 ಗಂಟೆಯೊಳಗೆ ರಥೋತ್ಸವ ನೆರವೇರಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು ಹಾಗೂ ಈ ರಥೋತ್ಸವ ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು.
ಪಟ್ಟಣದ ಶ್ರೀದೊಡ್ಡಬಸವೇಶ್ವರ ದೇವಸ್ಥಾನದ ಪ್ರಾಂಗಣದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು
ಮತ್ತು ದತ್ತಿ ಇಲಾಖೆಯಿಂದ ಮಾ.3ರಂದು ನಡೆಯುವ ರಥೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರತಿ ವರ್ಷ ಸಂಜೆ 6:45ಕ್ಕೆ ನಡೆಯುತ್ತಿದ್ದ ರಥೋತ್ಸವ ಈ ವರ್ಷ ಮಧ್ಯಾಹ್ನ 3.19ರಿಂದ 6:48 ಗಂಟೆ ವರೆಗೆ ಖಗ್ರಾಸ ಚಂದ್ರಗ್ರಹಣ ಇರುವುದರಿಂದ, ಭಕ್ತರಿಗೂ ಸಾರ್ವಜನಿಕರಿಗೂ, ಕ್ಷೇತ್ರಕ್ಕೂ ಹಾಗೂ ಯಾರಿಗೂ ಯಾವುದೇ ಅಹಿತಕರ ಘಟನೆ ನಡೆಯದಂತೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಹಾಗಾಗಿ ಮಧ್ಯಾಹ್ನ 1.05 ಗಂಟೆಯಿಂದ 3 ಗಂಟೆಯೊಳಗೆ ರಥೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಮೂರು ದಿನ ದಾಸೋಹ ನಡೆಸಲು ಸಿದ್ದತೆ ಮಾಡಿಕೊಂಡಿದ್ದೇವೆ. ಅದಕ್ಕೆ ಮುಖಂಡರು ಹಾಗೂ ಸ್ಥಳೀಯ ಸಾರ್ವಜನಿಕರ ಸಹಕಾರ ಮುಖ್ಯ. ರಥೋತ್ಸವದಲ್ಲಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಲಕ್ಷಾಂತರ ಜನಸಮೂಹ ಸೇರುವ ನಿರೀಕ್ಷೆ ಇದೆ. ಧಾರ್ಮಿಕ ದತ್ತಿ ಇಲಾಖೆ ಸೇರಿ ತಾಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಭಕ್ತರಿಗೆ ತೊಂದರೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆ ಕಲ್ಪಿಸಬೇಕು.
ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ ಮಾತನಾಡಿ, ರಥೋತ್ಸವದ ಸಿದ್ದತೆಯನ್ನು ಅಚ್ಚಕಟ್ಟಾಗಿ ನಿರ್ವಹಿಸಲು ಪ್ರತಿವರ್ಷದಂತೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದೆ. ರಥಕ್ಕೆ ಆಗಮಿಸುವ ಭಕ್ತರಿಗೆ ದೇವರ ದರ್ಶನ ಪಡೆದುಕೊಳ್ಳಲು ಸೂಕ್ತ ಕ್ರಮ ವಹಿಸಿದೆ, ಇನ್ನೂ ಮೂರು ದಿನಗಳ ಕಾಲ ದಾಸೋಹ ಹಮ್ಮಿಕೊಂಡಿದೆ. ರಥೋತ್ಸವ ವಿಜೃಂಭಣೆಯಿಂದ ನಡೆಯಲು ಎಲ್ಲರ ಸಹಕಾರ ಮುಖ್ಯ ಎಂದರು.
ಬಿಸಿಲು ಹೆಚ್ಚಾಗಿರುವುದರಿಂದ ಜಾತ್ರೆಗೆ ಬರುವ ಭಕ್ತರಿಗೆ ನೀರಿನ ವ್ಯವಸ್ಥೆಗೆ ಆದ್ಯತೆ ನೀಡಬೇಕು ಎಂದರು.
ತಹಶೀಲ್ದಾರ್ ನರಸಪ್ಪ ಮಾತನಾಡಿ ಭಕ್ತರಿಗೆ ಕುಡಿಯುವ ನೀರಿನ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಹೆಚ್ಚುವರಿ ಟ್ಯಾಂಕರ್ಗಳ ವ್ಯವಸ್ಥೆ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗದ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗೆ ಪೊಲೀಸ್ ಇಲಾಖೆ
ಸೂಕ್ತ ವ್ಯವಸ್ಥೆ ಮತ್ತು ಜಾತ್ರೆಯಲ್ಲಿ ಶಾಂತತೆ ಕಾಪಾಡಲು ಸೂಕ್ತ ಕ್ರಮ ಕೈಗೊಳ್ಳಬೇಕು. ತೇರು ಬೀದಿಯ ರಸ್ತೆಯಲ್ಲಿ ಕುಣಿ ಬಿದ್ದಿರುವುದನ್ನು ಮುಚ್ಚುವ ಕಾರ್ಯ ಪಿಡಬ್ಲ್ಯುಡಿ ಇಲಾಖೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆ ಪ್ರಥಮ ಚಿಕಿತ್ಸೆಗೆ ಹಾಗೂ ಆಂಬ್ಯುಲೆನ್ಸ್ ವ್ಯವಸ್ಥೆ, ಎರಡು ದಿನ ಯಾವುದೇ ಕಾರಣಕ್ಕೆ ವಿದ್ಯುತ್ ವ್ಯತ್ಯಯ ಉಂಟಾಗದಂತೆ ಜೆಸ್ಕಾಂ ಅಧಿಕಾರಿಗಳು ನೋಡಿಕೊಳ್ಳಬೇಕು. ರಥೋತ್ಸವ ಯಶಸ್ವಿಯಾಗಿ ನಡೆಸಲು ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಪಟ್ಟಣದ ಮುಖಂಡರು ಸಹಕಾರ ನೀಡಬೇಕು ಎಂದು ತಿಳಿಸಿದರು.
ಪೊಲೀಸ್ ಬಂದೋಬಸ್ತ್:
ಬಾಳನಗೌಡ ಮಾತನಾಡಿ, ‘ರಥೋತ್ಸವದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆಯು ಬಂದೋಬಸ್ತ್ ಮಾಡಿರುತ್ತದೆ. ರಥದ ರಸ್ತೆಯಲ್ಲಿ ಯಾವುದೇ ಅಂಗಡಿಗಳನ್ನು ಹಾಕದಂತೆ ನೋಡಿಕೊಳ್ಳುತ್ತೇವೆ. ಅದಕ್ಕೆ ಗ್ರಾಮದ ಮುಖಂಡರು ಹಾಗೂ ಭಕ್ತರು ಸಹಕರಿಸಬೇಕು ಮತ್ತು ಸುತ್ತಲಿನ ಗ್ರಾಮದಿಂದ ಬರುವ ಭಕ್ತರ ವಾಹನ ನಿಲುಗಡೆಗೆ ಸೂಕ್ತ ಪಯಾರ್ಯ ವ್ಯವಸ್ಥೆ ಮಾಡುತ್ತೇವೆ ಎಂದರು.
ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ ಪಿಎಸ್ಐ ಸುಪ್ರಿತ್ ವಿರೂಪಾಕ್ಷಪ್ಪ, ದೇವಸ್ಥಾನದ ಅಧ್ಯಕ್ಷ ಚಾನಾಳ್ ಆನಂದ, ಸದಸ್ಯರು, ಪುರಸಭೆ ಸದಸ್ಯರು, ನಾನಾ ಇಲಾಖೆಯ ತಾಲೂಕು ಅಧಿಕಾರಿಗಳು, ಪಟ್ಟಣದ ಮುಖಂಡರು, ನಾನಾ ಸಂಘ ಸಂಸ್ಥೆಗಳ ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















