ಶಿವಮೊಗ್ಗ: ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದಿಕ್ಕಿನಲ್ಲಿ ಶಿಕ್ಷಣ ಸಂಸ್ಥೆಗಳು ಹಾಗೂ ಶಿಕ್ಷಕರು ಚಿಂತನೆ ಮಾಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿ ನಿರ್ದೇಶಕಿ ಎಂ.ಆರ್.ಸೀತಾಲಕ್ಷ್ಮಿ ಹೇಳಿದರು. ಸಹ್ಯಾದ್ರಿ ವಿಜ್ಞಾನ ಕಾಲೇಜು ಮತ್ತು ಅಲ್ಲಿನ ಹಿರಿಯ ವಿದ್ಯಾರ್ಥಿಗಳ ಅಸೋಸಿಯೇಷನ್ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಶನಿವಾರ ನಡೆದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ವೈಜ್ಞಾನಿಕ ಕ್ಷೇತ್ರದಲ್ಲಿ ಇಂದು ಹೆಚ್ಚಿನ ಆವಿಷ್ಕಾರಗಳು ನಡೆಯುತ್ತಿದ್ದರೂ, ಸಾಧಿಸುವುದು ನಿರಂತರವಾಗಿದೆ. ಸರ್.ಸಿ.ವಿ.ರಾಮನ್ ಅವರ ಕೊಡುಗೆ ಅಪಾರವಾದದ್ದು, ಭಾರತಕ್ಕೆ ವಿಜ್ಞಾನ ಕ್ಷೇತ್ರದಲ್ಲಿ ನೋಬೆಲ್ ಪುರಸ್ಕಾರ ತಂದುಕೊಟ್ಟ ಅವರ ಸ್ಮರಣಾರ್ಥ ಇಡೀ ದೇಶದಲ್ಲಿ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ. ಈ ಆಚರಣೆಯ ಮೂಲಕ ರಾಮನ್ ಅವರ ಸಾಧನೆಯನ್ನು ಸ್ಮರಿಸುವ ಮತ್ತು ಅಧ್ಯಯನ ಮಾಡಲು ಮಕ್ಕಳಲ್ಲಿ ಪ್ರೇರಣೆಯಾಗಬೇಕು. ಇಂದಿನ ಯುವ ಪೀಳಿಗೆಯೂ ಮೂಢನಂಬಿಕೆಗಳಿಗೆ ಸೋಲುವುದನ್ನು ಕಾಣುತಿದ್ದೇವೆ. ಶಾಲಾ ಹಂತದಲ್ಲಿಯೇ ಅವರಲ್ಲಿ ವೈಜ್ಞಾನಿಕ ಅರಿವು ಮೂಡಿಸುವ ಅಗತ್ಯವಿದೆ ಎಂದು ಹೇಳಿದರು.
ಹೆಣ್ಣುಮಕ್ಕಳು ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧಿಸಲು ವಿಪುಲ ಅವಕಾಶಗಳಿವೆ. ಕೃಷಿ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ಮನುಷ್ಯ ಎದುರಿಸುತ್ತಿರುವ ಸವಾಲುಗಳಿಗೆ ವಿಜ್ಞಾನದಿಂದ ಮಾತ್ರ ಉತ್ತರ ಸಾಧ್ಯ ಈ ದಿಸೆಯಲ್ಲಿ ನಾವೆಲ್ಲಾ ಯೋಚಿಸಬೇಕಾಗಿದೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ನಿರ್ದೇಶಕ ನಾಗರಾಜ್ ನೇರಿಗೆ ಮಾತನಾಡಿ, ಯುವಜನತೆ ವಿಜ್ಞಾನ ಮತ್ತು ಮೌಢ್ಯಗಳ ನಡುವಿನ ತಾಕಲಾಟದಲ್ಲಿದ್ದಾರೆ. ನಮ್ಮ ಪರಿಸರದಲ್ಲಿ ವೈಜ್ಞಾನಿಕ ಚಿಂತನೆಗಳಿಗಿಂತ ಮೌಢ್ಯಗಳೇ ಹೆಚ್ಚು ವಿಜೃಂಭಿಸುತ್ತಿದೆ. ವಿಜ್ಞಾನ ಓದು ವಿದ್ಯಾರ್ಥಿಗಳು ಮೌಢ್ಯಗಳಿಗೆ ಮರುಳಾಗಬಾರದು. ಸೋಷಿಯಲ್ ಮೀಡಿಯಾದಲ್ಲಿ ಮೌಢ್ಯಗಳನ್ನು ಉತ್ತೇಜಿಸುವ ಪ್ರಚಾರ ಹೆಚ್ಚಾಗಿಯೇ ಇದೆ. ಈ ಎಲ್ಲಾ ಮಿಥ್ಯಗಳಿಂದ ದೂರ ಉಳಿದು ವೈಚಾರಿಕ ನೆಲೆಗಟ್ಟಿನಲ್ಲಿ ವಿದ್ಯಾರ್ಥಿಗಳು ಗಟ್ಟಿ ವ್ಯಕ್ತಿತ್ವ ರೂಢಿಸಿಕೊಳ್ಳಬೇಕೆಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಬಾರ ಪ್ರಾಚಾರ್ಯರಾದ ಪ್ರೊ.ಕೃಷ್ಣಸ್ವಾಮಿ ಕೆ ಅವರು ಮಾತನಾಡಿ, ಸಿ.ವಿ.ರಾಮನ್ ಸಾಧನೆ ಮತ್ತು ಸಂಶೋಧನೆಯ ಮಾಹಿತಿ ನೀಡಿ, ವಿಜ್ಞಾನ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ರಾಜ್ಯ ಮತ್ತು ಹೊರರಾಜ್ಯಗಳಲ್ಲಿ ಇರುವ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಹೇಳಿದರು.
ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ, ಪ್ರಬಂಧ, ವೈಜ್ಞಾನಿಕ ಚಿತ್ತಾರ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರೊ.ಪ್ರಭಾಕರ್ ಬಿ.ಟಿ.ಅವರು ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು. ಐಕ್ಯೂಎಸಿ ಸಂಚಾಲಕ ಪ್ರೊ.ಜಿ.ಕೃಷ್ಣಮೂರ್ತಿ, ಪ್ರೊ.ಶ್ರೀಕಂಠ, ಡಾ.ವೆಂಕಟೇಶ್ ಉಪಸ್ಥಿತರಿದ್ದರು. ಹಿರಿಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿ ಡಾ.ಪರಿಸರ ನಾಗರಾಜ್ ಸ್ವಾಗತಿಸಿದರು. ಕುಮಾರಿ ಸುಮಿತ ಎನ್.ಎಸ್. ಪ್ರಾರ್ಥಿಸಿದರು. ಗಣಿತ ಶಾಸ್ತ್ರ ಮುಖ್ಯಸ್ಥೆ ಡಾ.ಪವಿತ್ರ ವಂದಿಸಿದರು. ವಿದ್ಯಾರ್ಥಿ ವರುಣ್ ಕಾರ್ಯಕ್ರಮ ನಿರೂಪಿಸಿದರು.
ವರದಿ: ಕೊಡಕ್ಕಲ್ ಶಿವಪ್ರಸಾದ್



















