ಗದಗ: ಇಲ್ಲಿನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಸರ್ಕಾರಿ ಅಭಿಯೋಜಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸವಿತಾ ಎಂ. ಶಿಗ್ಲಿ ಅವರು ನ್ಯಾಯದ ಪರ ಗಟ್ಟಿಯಾಗಿ ನಿಲ್ಲುವ ಮೂಲಕ ನೊಂದಿರುವ ಹಲವಾರು ಮಂದಿ ಕಕ್ಷಿದಾರರ ಜೀವನಕ್ಕೆ ಬೆಳಕಾಗಿದ್ದಾರೆ.
ವಕೀಲರೆಂದರೆ ಸತ್ಯವನ್ನು ಸುಳ್ಳು ಮಾಡುವರು, ಸುಳ್ಳನ್ನು ಸತ್ಯ ಎಂದು ಬಿಂಬಿಸುವವರು ಎಂಬ ಕುರುಡು ನಂಬಿಕೆ ಜನರ ಮನಸ್ಸಿನಲ್ಲಿ ಇಂದಿಗೂ ಬೇರೂರಿದೆ.
ಆದರೆ, ಈ ನಂಬಿಕೆಯನ್ನು ಒಡೆದು ಹಾಕಿ, ಸತ್ಯದ ಪರ, ನ್ಯಾಯದ ಪರ ನಿಲ್ಲುವ ಮೂಲಕ ನೊಂದವರ ಕಣ್ಣೀರು ಒರೆಸುತ್ತಿದ್ದಾರೆ. ಹಾಗಾಗಿ, ಗದಗ ಜಿಲ್ಲೆಯಲ್ಲಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರ ಪೈಕಿ ಮುಂಚೂಣಿಯಲ್ಲಿರುವ ಹೆಸರು ಸವಿತಾ ಶಿಗ್ಲಿ ಅವರದ್ದು.
ಸಾಕಷ್ಟು ಪ್ರಕರಣಗಳಲ್ಲಿ ಎದುರು ಪಾರ್ಟಿಯಿಂದ ಪ್ರಾಣ ಬೆದರಿಕೆಗಳನ್ನು ಎದುರಿಸಿದರೂ, ‘ನ್ಯಾಯರೇಖೆ’ಯನ್ನು ದಾಟಿ ಆಚೀಚೆ ಬಂದವರಲ್ಲ. ಇವರು, ಈವರೆಗೆ ನಿಭಾಯಿಸಿರುವ ಕೇಸುಗಳಲ್ಲಿ ಬಡವರಿಗೆ ನ್ಯಾಯ ಸಿಕ್ಕಿದೆ. ಈ ಕಾರಣಕ್ಕೆ ಸವಿತಾ ಶಿಗ್ಲಿ ಅವರು ಇಂದಿನ ಭ್ರಷ್ಟ ವ್ಯವಸ್ಥೆಯಲ್ಲಿ ಭರವಸೆ ಕೋಲ್ಮಿಂಚಿನಂತೆ ಗೋಚರಿಸುತ್ತಾರೆ ಎಂಬುದು ಕಕ್ಷಿದಾರರ ಮೆಚ್ಚುಗೆಯ ಮಾತುಗಳಾಗಿವೆ.
ಕೊಲೆ ಪ್ರಯತ್ನ, ಸುಲಿಗೆ, ಒಂಟಿ ಮಹಿಳೆ ಕೊಲೆ ಮತ್ತು ದರೋಡೆ, ಅತ್ಯಾಚಾರ ಹಾಗೂ ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುವಲ್ಲಿ ಗರಿಷ್ಠ ಪ್ರಯತ್ನ ಮಾಡಿದ್ದಾರೆ. ಎರಡು ವಿರಳಾತಿ ವಿರಳ ಗಂಭೀರ ಕೊಲೆ ಪ್ರಕರಣಗಳಲ್ಲಿ ಐವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡಿದ್ದು ಸವಿತಾ ಎಂ.ಶಿಗ್ಲಿ ಅವರ ಸಾಧನೆಗಳಲ್ಲಿ ಮುಖ್ಯವಾದುದು.
ಸವಿತಾ ಶಿಗ್ಲಿ ಅವರು ವಕೀಲಿಕೆಗೆ ಮಾತ್ರ ಸೀಮಿತಗೊಳ್ಳದೇ ಸಮಾಜಮುಖಿ ಕೆಲಸಗಳಲ್ಲೂ ತೊಡಿಗಿಸಿಕೊಂಡಿದ್ದಾರೆ. ಕಾಲೇಜು ಯುವತಿಯರಲ್ಲಿ ಜಾಗೃತಿ ಮೂಡಿಸುವುದರ ಜತೆಗೆ ಲೈಂಗಿಕ ಕಿರುಕುಳ ವಿರೋಧಿ ಕಾನೂನು ಕುರಿತು ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಕಾನೂನು ಪರಿವಾರ :
ಈಗಿನ ಕಲಬುರಗಿ ಜಿಲ್ಲೆ ಸುರಪುರ ತಾಲ್ಲೂಕಿನ ನಾರಾಯಣಪುರದಲ್ಲಿ ಜನಿಸಿದ ಸವಿತಾ ಎಂ. ಶಿಗ್ಲಿ ಅವರು ಬಿಎಸ್ಸಿ ಪದವಿ ಜತೆಗೆ ಎಲ್ಎಲ್ಬಿ ಪದವೀಧರರು. ಧಾರವಾಡದ ಖ್ಯಾತ ವಕೀಲ ಕೆ.ಬಿ.ನಾವಲಗಿಮಠ ಅವರ ಬಳಿ ಮೂರು ವರ್ಷಗಳ ಕಾಲ ವಕೀಲ ವೃತ್ತಿ ಮಾಡಿದ್ದರು. ಬಳಿದ ಎಂ.ಐ.ಶಿಗ್ಲಿ ಅವರನ್ನು 1997ರಲ್ಲಿ ವಿವಾಹವಾದರು. 2004ರಲ್ಲಿ ಮುಂಡರಗಿ ನ್ಯಾಯಾಲಯದಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ವೃತ್ತಿ ಆರಂಭ. 2014ರಲ್ಲಿ ಪದೋನ್ನತಿ ಹೊಂದಿದರು. ಈ ನಡುವೆ ಧಾರವಾಡ, ಕೊಪ್ಪಳದಲ್ಲೂ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಇವರು ಗದಗ ಪ್ರಧಾನ ಜಿಲ್ಲಾ ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಧಾನ ಸರ್ಕಾರಿ ಅಭಿಯೋಜಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸವಿತಾ ಶಿಗ್ಲಿ ಅವರ ಪತಿ ಪ್ರಸ್ತುತ ಬೆಳಗಾವಿಯಲ್ಲಿ ಗ್ರಾಹಕವ್ಯಾಜ್ಯ ಪರಿಹಾರ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಇಬ್ಬರು ಮಕ್ಕಳು ಸಹ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಇವರ ಕುಟುಂಬವನ್ನು ಕಾನೂನು ಪರಿವಾರ ಎನ್ನಲು ಅಡ್ಡಿ ಇಲ್ಲ.
ವರದಿ: ಹನಮಂತ ದಾಸರ




















