ಬಳ್ಳಾರಿ / ಕಂಪ್ಲಿ : ಸಾಧನೆಗೆ ಅಂಗವಿಕಲತೆ ಶಾಪವಲ್ಲ, ಮಾನಸಿಕ ಸ್ಥೈರ್ಯವಿದ್ದರೆ, ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಕಂಪ್ಲಿ ತಾಲ್ಲೂಕಿನ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಸಹಾಯಕರ ನೆರವಿನಿಂದ ಹತ್ತನೇ ತರಗತಿ ಪರೀಕ್ಷೆ ಬರೆದ ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳೇ ಸಾಕ್ಷಿಯಾಗಿದ್ದಾರೆ.
2026-27ನೇ ಸಾಲಿನ ಹತ್ತನೇ ತರಗತಿ ವಾರ್ಷಿಕ ಪರೀಕ್ಷೆಗೆ ಒಟ್ಟು 12 ಜನ ವಿಶೇಷ ಚೇತನರು ಪರೀಕ್ಷೆಗೆ ನೋಂದಾಯಿಸಿದ್ದಾರೆ.
ಪ್ರಥಮ ದಿನವಾದ ಇಂದಿನ ಪರೀಕ್ಷೆಗೆ 10 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿದ್ದು, ಇದರಲ್ಲಿ 8 ಜನ ವಿದ್ಯಾರ್ಥಿಗಳು ಇಂದಿನ ಪ್ರಥಮ ದಿನದ ಪರೀಕ್ಷೆಗೆ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಹಾಜರಾಗಿದ್ದು, ಇದರಲ್ಲಿ 3 ಜನ ವಿದ್ಯಾರ್ಥಿಗಳು ಸಹಾಯಕರ ನೆರವಿನಿಂದ ಪರೀಕ್ಷೆಯನ್ನು ಬರೆದರೆ, ಇನ್ನುಳಿದ 5 ವಿದ್ಯಾರ್ಥಿಗಳು ಸ್ವತಃ ಪರೀಕ್ಷೆಯನ್ನು ಬರೆದರು.
ಪಟ್ಟಣದ ಷಾಮಿಯಾಚಂದ್ ಸರ್ಕಾರಿ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೂರು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ನಿರ್ಮಲ.ಕೆ. ಎನ್ನುವ ವಿದ್ಯಾರ್ಥಿ ಎನ್.ಕೆ.ಗಗನಶ್ರೀ ಸಹಾಯದೊಂದಿಗೆ, ಶ್ರೀನಿವಾಸ್ ಎನ್ನುವ ವಿದ್ಯಾರ್ಥಿ ಎಚ್.ಉಮಾ ಸಹಾತದೊಂದಿಗೆ, ತ್ರಿವೇಣಿ ರುದ್ರಪ್ರಸಾದ ಎನ್ನುವ ವಿದ್ಯಾರ್ಥಿನಿ ಕೆ.ಕಾವೇರಿ ಎನ್ನುವ ವಿದ್ಯಾರ್ಥಿಯ ಸಹಾಯದೊಂದಿಗೆ ಪರೀಕ್ಷೆಯನ್ನು ಬರೆದಿದ್ದಾರೆಂದು ಪರೀಕ್ಷಾ ಕೇಂದ್ರ ಮುಖ್ಯ ಅಧೀಕ್ಷಕಿ ಸುಜಾತಾ ಜತ್ತರ್ ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್

















