ಆಗಸದಲ್ಲಿ ಮೂಡುತಿದೆ ರವಿಯ ಹೊಂಗಿರಣ
ಮುಂಭಾಗಿಲಲ್ಲಿ ಕಂಗೊಳಿಸುತ್ತಿದೆ ತಳಿರು ತೋರಣ
ಎಲ್ಲರ ಮನೆಯಲ್ಲೂ ಸಂತಸದ ವಾತಾವರಣ
ನಮಗಿಂದು ಹೊಸ ವರುಷದ ಉಲ್ಲಾಸದ ಕ್ಷಣ
ಯುಗಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ
ಬಾಳಿನ ತಮವ ಕಳೆದು ನವ ಚೈತನ್ಯವ ತರುತಿದೆ
ಬೇವು ಬೆಲ್ಲವ ಮೆಲ್ಲುತ ಸಮಾನತೆಯ ಸಾರುತಿದೆ
ಋತುಚಕ್ರದ ನಿಯಮಕ್ಕೆ ಸಿದ್ದನಾಗು ಎನ್ನುತಿದೆ
ಮರಗಿಡಗಳಲಿ ಚೈತ್ರಮಾಸದಿ ಹೊಸಚಿಗುರು ಮೂಡುತಿದೆ
ಇಂಪಾದ ರಾಗದಲಿ ಕೋಗಿಲೆಗಳು ಹಾಡುತಿವೆ
ಹೊಸ ವಸ್ತ್ರವ ಧರಿಸಿ ಮುಗ್ದ ಮಕ್ಕಳು ನಲಿದಾಡುತಿವೆ
ಮೃಷ್ಟಾನ್ನವ ಸವಿಯುತ ಮನೆಮಂದಿಯೆಲ್ಲ ನಗುವ ಸೂಸುತಿವೆ
ಹಿಂದುಗಳಲಿ ಹೊಸದಿಗಂತದ ಆರಂಭ
ಬದುಕಿನಲಿ ಕಷ್ಟ ಸುಖಗಳ ಸಿಹಿಕಹಿಯ ಪ್ರಾರಂಭ
ದ್ವೇಷ ಕೇಡು-ಕಿಚ್ಚು ಮದ-ಮತ್ಸರವ ಮರೆತು ಬಾಳೋಣ
ನಮ್ಮೊಳಗಿನ ಅಜ್ಞಾನವೆಂಬ ಅಂಧಕಾರವ ಕಳೆಯೋಣ
ಜೀವನದಿ ಕಷ್ಟಗಳು ಕರಗಿ ಸುಖ ನೆಮ್ಮದಿ ಪ್ರಾಪ್ತಿಯಾಗಲಿ
ಹೆಜ್ಜೆಯಿಡಿ ಧೈರ್ಯದಿ ಸಾಧನೆಯ ಪಥದಲಿ
ಹೆದರದೆ ಮುಂದೆ ಸಾಗಿ ಕಲ್ಲುಮುಳ್ಳಿನ ಹಾದಿಯಲಿ
ಬೇವು ಬೆಲ್ಲದಂತೆ ಸಮನಾಗಿರಲಿ ನೋವುನಲಿವು ಎಲ್ಲರ ಬಾಳಲಿ.
✍️ಪ್ರಿತುನ್ ಪೂವಣ್ಣ, (ವಿರಾಜಪೇಟೆ), ಜಿ. ಕೊಡಗು

















