ಬಳ್ಳಾರಿ / ಕಂಪ್ಲಿ : 2025-26ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಗುರುವಾರ ಯಶಸ್ವಿಯಾಗಿ ಮುಗಿದಿದ್ದು, ಶಿಕ್ಷಣ ಇಲಾಖೆ ಸೇರಿದಂತೆ ಅಧಿಕಾರಿಗಳು ಹಾಗೂ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಸುಗ್ಗೇನಹಳ್ಳಿ ಗ್ರಾಮದ ವಿದ್ಯಾಭಾರತಿ ಪರೀಕ್ಷಾ ಕೇಂದ್ರದಲ್ಲಿ ಮುಖ್ಯ ಅಧೀಕ್ಷಕ ನಂದ ಕಿಶೋರ್ ನೇತೃತ್ವದಲ್ಲಿ ಪರೀಕ್ಷೆಗಳು ಅಚ್ಚುಕಟ್ಟಾಗಿ ನಡೆದವು. ಕೊನೆಯ ಪರೀಕ್ಷೆಯನ್ನು ಬರೆದು ಮುಗಿಸಿ ಪರೀಕ್ಷಾ ಕೇಂದ್ರದಿಂದ ಹೊರಗಡೆ ಬರುವಾಗ ಎಲ್ಲಾ ವಿದ್ಯಾರ್ಥಿಗಳ ಮುಖದಲ್ಲಿ ನಗುಮುಖ ಕಂಡು ಬಂತು. ಶಿಕ್ಷಣ ಇಲಾಖೆಯ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳ ನಡುವೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಕೂಡ ನಿರಾಳರಾಗಿದ್ದಾರೆ. ಯುದ್ಧವನ್ನು ಗೆದ್ದ ಸಂಭ್ರಮದಲ್ಲಿ ಅವರಿದ್ದಾರೆ. ಸರ್ಕಾರದ ಸೂಚನೆಯಿಂದ ಜಿಲ್ಲಾಡಳಿತ ಆದೇಶದಂತೆ ತಾಲೂಕು ಮಟ್ಟದ ಪರೀಕ್ಷೆಗೆ ಎಲ್ಲ ಸಿದ್ಧತೆಗಳನ್ನು ನಡೆಸಿತ್ತು. ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಿದ್ದು, ಪರೀಕ್ಷೆ ಅಡೆತಡೆ ಇಲ್ಲದೆ ಮುಕ್ತಾಯವಾಗಲು ನೆರವಾಯಿತು.
ಮೊದಲನೆಯ ದಿನ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಭಯವಿತ್ತು. ಎಚ್ಚರಿಕೆ ವಹಿಸಿ ಪರೀಕ್ಷೆ ಎದುರಿಸಿದ್ದೇವೆ. ಚೆನ್ನಾಗಿ ಬರೆದಿದ್ದೇವೆ’. ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ ಎಂದು ವಿದ್ಯಾಭಾರತಿ ಶಾಲೆಯ ವಿದ್ಯಾರ್ಥಿನಿ ನೂರ್ ಎ ತಸ್ಲೀಂ ಹೇಳಿದರು.
ಕೊನೆಯ ಪರೀಕ್ಷೆಗೆ ಶೇ.97 ಮಕ್ಕಳು ಹಾಜರು : ಪಟ್ಟಣದಲ್ಲಿ ತಾಲೂಕಿನ ಆರು ಪರೀಕ್ಷಾ ಕೇಂದ್ರದಲ್ಲಿ ನಡೆದ ಕೊನೆಯ ಪರೀಕ್ಷೆಗೆ ಶೇ.97ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದಾರೆ.
ಕೊನೆಯ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಗೆ ಒಟ್ಟು 1923 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು.
ಈ ಪೈಕಿ 1868 ಮಂದಿ ಹಾಜರಾಗಿದ್ದಾರೆ.
55 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಒಟ್ಟಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಶಾಂತಿಯುತವಾಗಿ ಮುಕ್ತಾಯಗೊಂಡವು.
ಸುಗ್ಗೇನಹಳ್ಳಿಯ ವಿದ್ಯಾಭಾರತಿ ಪ್ರೌಢಶಾಲಾ ಪರೀಕ್ಷಾ ಕೇಂದ್ರದಲ್ಲಿ 327 ವಿದ್ಯಾರ್ಥಿಗಳು ಹಾಜರಾಗಿದ್ದು,
20 ವಿದ್ಯಾರ್ಥಿಗಳು ಗೈರಾದರು. ಷಾಮಿಯಾಚಂದ್ ಬಾಲಕರ ಪ್ರೌಢಶಾಲಾ ಕೇಂದ್ರದಲ್ಲಿ 254 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ 316 ವಿದ್ಯಾರ್ಥಿಗಳು, ಓದ್ಸೋ ಜಡೆಮ್ಮ ಗುರುಸಿದ್ದಯ್ಯನವರ ಪ್ರೌಢಶಾಲೆಯಲ್ಲಿ 358 ವಿದ್ಯಾರ್ಥಿಗಳು, ವಿಜಯನಗರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ 353 ವಿದ್ಯಾರ್ಥಿಗಳು, ಎಮ್ಮಿಗನೂರು ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 260 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















