ಕಂಪ್ಲಿ ನೂತನ ನ್ಯಾಯಲಯಕ್ಕೆ ವಿದ್ಯುಕ್ತ ಚಾಲನೆ
ಬಳ್ಳಾರಿ / ಕಂಪ್ಲಿ : ನ್ಯಾಯಾಂಗ ವ್ಯವಸ್ಥೆಯು ಪ್ರಜಾಪ್ರಭುತ್ವದ ಪ್ರಮುಖ ಆಧಾರಸ್ತಂಭವಾಗಿದ್ದು, ಪ್ರತಿಯೊಬ್ಬ ನಾಗರಿಕನಿಗೂ ಸಂವಿಧಾನದ ಮೂಲಕ ಸಮಾನತೆ ಮತ್ತು ಸ್ವಾತಂತ್ರ್ಯ ಪಡೆದುಕೊಳ್ಳಲು ಅವಕಾಶವಿದೆ ಎಂದು ಬಳ್ಳಾರಿಯ ಒಂದನೇ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶ ಮತ್ತು ಕಂಪ್ಲಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಪ್ರಭಾರ ನ್ಯಾಯಾಧೀಶರಾದ ಸಿದ್ಧಲಿಂಗಯ್ಯ ಬಿ.ಗಂಗಾಧರ್ ಮಠ ಹೇಳಿದರು.
ಅವರು ಶುಭ ಶುಕ್ರವಾರದಂದು ಮೊದಲ ಬಾರಿಗೆ ಆರಂಭಗೊಂಡ ಪಟ್ಟಣದ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯದ ಕಾರ್ಯಕಲಾಪಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಕಕ್ಷಿದಾರರಿಗೆ ತುರ್ತಾಗಿ ನ್ಯಾಯ ಒದಗಿಸುವುದು ನ್ಯಾಯಾಲಯಗಳ ಕರ್ತವ್ಯವಾಗಿದೆ. ಕಾರ್ಯ ಕಲಾಪಗಳು ಆರಂಭಗೊಂಡಿದ್ದು, ವಾರದಲ್ಲಿ ಎರಡು ದಿನ ಶುಕ್ರವಾರ ಮತ್ತು ಶನಿವಾರ ನಡೆಯಲಿದೆ ಎಂದರು. ನಂತರ ನ್ಯಾಯಾಧೀಶರಿಗೆ ಸನ್ಮಾನಿಸುವ ಮೂಲಕ ಸ್ವಾಗತ ಮಾಡಿದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಬಳಗದವರು ಸೇರಿದಂತೆ ವಿವಿಧ ಇಲಾಖೆಯವರು ಉಪಸ್ಥಿತರಿದ್ದರು.
ಕಳೆದ ಏ.26ರಂದು ಹೈಕೋರ್ಟ್ ನ್ಯಾಯಮೂರ್ತಿ ಆರ್.ನಟರಾಜ್ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಕಟ್ಟಡವನ್ನು ಉದ್ಘಾಟಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















