ಬಳ್ಳಾರಿ / ಕಂಪ್ಲಿ : ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳೊಂದಿಗೆ ಅಚ್ಚುಮೆಚ್ಚಿನ ನಾಯಕರಾಗಿರುವ ಶಾಸಕ ಜೆ.ಎನ್.ಗಣೇಶಗೆ ಇಡೀ ರಾಜ್ಯದ ಅಭಿವೃದ್ಧಿ ದೃಷ್ಠಿಯಿಂದ ಸಚಿವ ಸ್ಥಾನ ನೀಡಲೇಬೇಕು ಎಂದು ಪುರಸಭೆ ಮಾಜಿ ಸದಸ್ಯ ಲೊಡ್ಡು ಹೊನ್ನೂವರಲಿ ಒತ್ತಾಯಿಸಿದರು.
ಪಟ್ಟಣದ ಗಂಗಾವತಿ ರಸ್ತೆಯ ಹಜರತ್ ಬಡೇಸಾಹೇಬ್ ದರ್ಗಾದಲ್ಲಿ ಕಂಪ್ಲಿ-ಕೋಟೆ ಯುವ ನಾಯಕ ಇಮ್ರಾನ್ ಬಳಗದ ಸಹಕಾರದೊಂದಿಗೆ ಶುಕ್ರವಾರ ಹಮ್ಮಿಕೊಂಡಿದ್ದ ಶಾಸಕ ಜೆ.ಎನ್.ಗಣೇಶ ಅವರ ಹೆಸರಿನಲ್ಲಿ ವಿಶೇಷ ಪೂಜೆಯೊಂದಿಗೆ ಪ್ರಾರ್ಥನೆ ಸಲ್ಲಿಸಿ, ನಂತರ ಭಕ್ತರಿಗೆ ಅನ್ನಸಂತಾರ್ಪಣೆ ವಿತರಿಸಿ ಮಾತನಾಡಿ, ರೈತ, ಕಾರ್ಮಿಕರ ಸೇರಿದಂತೆ ಕ್ಷೇತ್ರದ ಜನರ ಸೇವೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ರಸ್ತೆ, ಕುಡಿಯುವ ನೀರು, ಬೀದಿ ದೀಪ ಸೇರಿ ನಾನಾ ಅಭಿವೃದ್ಧಿ ಕಾರ್ಯಗಳನ್ನು ಸಾಕಷ್ಟು ಅನುದಾನದಲ್ಲಿ ಕೆಲಸ ಮಾಡಿದ್ದಾರೆ. ನಿರಂತರವಾಗಿ ಜನರ ಮಧ್ಯದಲ್ಲಿದ್ದು, ಜನರಿಗೋಸ್ಕರ ಸೇವೆ ಮಾಡುವ ಏಕೈಕ ನಾಯಕ ಶಾಸಕ ಜೆ.ಎನ್.ಗಣೇಶರಾಗಿದ್ದಾರೆ. ಆದ್ದರಿಂದ ಸಿಎಂ ಡಿ.ಕೆ.ಶಿವಕುಮಾರ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ವರಿಷ್ಠರು, ಹೈಕಮಾಂಡ್ ಹೆಚ್ಚಿನ ಮುತುವರ್ಜಿಯಿಂದ ಗಣೇಶಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದಲ್ಲಿ ಬರುವ ದಿನದಲ್ಲಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದರು.
ಯುವ ನಾಯಕ ಇಮ್ರಾನ್ ಮಾತನಾಡಿ, ಜನ ಸೇವೆಯೇ ಜನಾರ್ದನ ಸೇವೆ ಎಂಬಂತೆ ಪ್ರತಿ ಹಂತದಲ್ಲಿ ಜನಪರ ಸೇವೆ ಸಲ್ಲಿಸುವ ಮೂಲಕ ಶಾಸಕ ಗಣೇಶ ಜನಮೆಚ್ಚಿನ ನಾಯಕರಾಗಿದ್ದಾರೆ. ಇಂತಹ ನಾಯಕ ಗಣೇಶಗೆ ಸಚಿವ ಸ್ಥಾನ ನೀಡಲೇಬೇಕು ಎಂದರು.
ನಂತರ ಆಪ್ತ ಸಹಾಯಕ ಧನ್ರಾಜ್ ಮಾತನಾಡಿ, ಕಂಪ್ಲಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಮರಿಚಿಕೆಯಾಗಿದ್ದವು. ಇಂತಹ ಸಮಯದಲ್ಲಿ ಶಾಸಕರಾಗಿ ಹೊರಹೊಮ್ಮಿದ ದಿನದಿಂದಲೂ ಕಳೆದ ಏಳೆಂಟು ವರ್ಷದಲ್ಲಿ ಶಾಸಕ ಜೆ.ಎನ್.ಗಣೇಶ ಅವರು ಕಂಪ್ಲಿ ಕ್ಷೇತ್ರಕ್ಕೆ ರಾಜ್ಯವೇ ತಿರುಗಿ ನೋಡುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಈಗಾಗಲೇ ಕ್ಷೇತ್ರ ಸೇರಿದಂತೆ ಜಿಲ್ಲೆ, ರಾಜ್ಯ ಮಟ್ಟದಲ್ಲಿ ಅಭಿವೃದ್ಧಿ ಹರಿಕಾರ ಮತ್ತು ಜನರ ಆಪತ್ಭಾಂಧವ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ ಪದಗ್ರಹಣ ಮಾಡಿದ ಮೊದಲ ಸಚಿವ ಸಂಪುಟದಲ್ಲಿ ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ ಇವರಿಗೆ ಸಚಿವ ಸ್ಥಾನ ಸಿಗುವ ಅಭಿಲಾಷೆಯನ್ನು ಹೊಂದಿದ್ದೇವು. ಆದರೆ, ಸಚಿವ ಸ್ಥಾನ ದೊರಕಿಲ್ಲ. ಆದ್ದರಿಂದ ಎರಡನೇ ಹಂತದ ಸಚಿವ ಸಂಪುಟದಲ್ಲಿ ಕಡ್ಡಾಯವಾಗಿ ಶಾಸಕ ಗಣೇಶ ಇವರಿಗೆ ಸಚಿವ ಸ್ಥಾನ ನೀಡಿದರೆ, ಕ್ಷೇತ್ರ, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಜನಪರ ಸೇವೆ ಜೊತೆಗೆ ಅಭಿವೃದ್ಧಿ ಕಾರ್ಯಗಳೊಂದಿಗೆ ಇಡೀ ರಾಜ್ಯದಲ್ಲಿ ಮಾದರಿಯಾಗಲಿದ್ದಾರೆ ಎಂದರು.
ನಂತರ ಪುರಸಭೆ ಮಾಜಿ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಜನ್ಮದಿನವನ್ನು ಕೇಕ್ ಕತ್ತರಿಸಿ, ಸಿಹಿ ಹಂಚುವ ಮೂಲಕ ವಿಜೃಂಭಣೆಯಿಂದ ಆಚರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಇಮ್ರಾನ್, ಅಕ್ಕಿ ಜಿಲಾನ್, ಆಟೋ ಮೈನುದ್ದೀನ, ಬೆಳಗೋಡ್ ಜಾವೀದ್, ಬಿ.ಬಾಷಾ, ಬಿ.ಹಸನ್, ಬಾಲಕೃಷ್ಣ, ಆದಿಶೇಷಯ್ಯ, ಶ್ರೀಧರ್ ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















