ಬಳ್ಳಾರಿ / ಕುರುಗೋಡು: ಸೆಪ್ಟೆಂಬರ್ 6 ರಂದು ಬಳ್ಳಾರಿ ಜಿಲ್ಲೆಯ ಕುರುಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಯಲ್ಲಾಪುರ ಕ್ರಾಸ್ ಬಳಿ ನಡೆದಿದ್ದ ನರ್ಸರಿ ಮಾಲೀಕ ಎನ್. ಉಮಾಶಂಕರ್ (38) ಅವರ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಕುರುಗೋಡು ಪೊಲೀಸರು ಯಶಸ್ವಿಯಾಗಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಮುಖ್ಯ ಆರೋಪಿಗಾಗಿ ತೀವ್ರ ಹುಡುಕಾಟ ಮುಂದುವರಿದಿದೆ.
ಬಂಧಿತರು ಯಾರು ?
ಕೊಲೆ ಕೃತ್ಯಕ್ಕೆ ಸಹಕರಿಸಿದ ಕುರುಗೋಡಿನ ಯಲ್ಲಾಪುರ ಕ್ರಾಸ್ ನಿವಾಸಿಗಳಾದ ಅಂಡಿ ಜೋಗಿ ಹನುಮಂತಪ್ಪ (30) ಹಾಗೂ ಬಣಗಾರ ಮಂಜುನಾಥ (26) ಬಂಧಿತ ಆರೋಪಿಗಳಾಗಿದ್ದು, ಇವರನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆಂಧ್ರಪ್ರದೇಶದ ಕಡಪ ಜಿಲ್ಲೆಯ ಮುಖ್ಯ ಆರೋಪಿ ಪೋಲೇಪಲ್ಲಿ ಅರುಣ್ ಕುಮಾರ್ (25) ಸದ್ಯ ತಲೆಮರೆಸಿಕೊಂಡಿದ್ದಾನೆ.
ಬಂಧಿತರಿಂದ ಪೊಲೀಸರು ಕೊಲೆಗೆ ಬಳಸಿದ 1 ಮಾರಕಾಸ್ತ್ರ, 4 ಮೋಟಾರ್ ಸೈಕಲ್ಗಳು, 1 ಕಾರು ಹಾಗೂ 5 ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದಾರೆ. ಉಮಾಶಂಕರ್ ಹಾಗೂ ಮುಖ್ಯ ಆರೋಪಿ ಅರುಣ್ ಕುಮಾರ್ ನಡುವೆ ಕೋಕೋಪಿಟ್ (ನರ್ಸರಿ ಗೊಬ್ಬರ) ವ್ಯವಹಾರ ನಡೆದಿತ್ತು. ಉಮಾಶಂಕರ್ನಿಂದ 60 ಸಾವಿರ ರೂ. ಮೌಲ್ಯದ ಗೊಬ್ಬರ ಖರೀದಿಸಿದ್ದ ಅರುಣ್ ಕುಮಾರ್, 50 ಸಾವಿರ ರೂ. ನೀಡಿ ಇನ್ನುಳಿದ 10 ಸಾವಿರ ರೂ. ಬಾಕಿ ಉಳಿಸಿಕೊಂಡಿದ್ದ. ಈ ಹಣವನ್ನು ಉಮಾಶಂಕರ್ ಪದೇ ಪದೇ ವಾಪಸ್ ಕೇಳುತ್ತಿದ್ದರು. ಇದೇ ದ್ವೇಷವನ್ನು ಮನಸ್ಸಿನಲ್ಲಿಟ್ಟುಕೊಂಡ ಅರುಣ್ ಕುಮಾರ್, ಉಳಿದ ಆರೋಪಿಗಳೊಂದಿಗೆ ಸಂಚು ರೂಪಿಸಿ ಉಮಾಶಂಕರ್ನನ್ನು ಸ್ಥಳಕ್ಕೆ ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು (SP) ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















