ವಿಜಯನಗರ ಜಿಲ್ಲೆಯ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ತಾಲೂಕು ಆಡಳಿತ ವತಿಯಿಂದ ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್. ಎನ್. ಟಿ. ಅವರು ಹಾಗೂ ತಹಶೀಲ್ದಾರರು,ಕಾರ್ಯನಿರ್ವಾಹಕ ದಂಡಾಧಿಕಾರಿಗಳು, ಸಮುದಾಯ ಕುಲಬಾಂಧವರು, ಜನಪ್ರತಿನಿಧಿಗಳು, ಊರಿನ ಗಣ್ಯರು ಸೇರಿ ದಿ. 11-11-2024 ರಂದು ತಾಲೂಕು ಕಛೇರಿಯಲ್ಲಿ ವೀರವನಿತೆ ಒನಕೆ ಓಬವ್ವ 304 ನೇ ಜಯಂತ್ಯೋತ್ಸವ ನಿಮಿತ್ತ ಅವರ ಭಾವಚಿತ್ರಕ್ಕೆ ಗೌರವ ಮತ್ತು ಪೂಜ್ಯನೀಯವಾಗಿ ಪುಷ್ಪ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರು ಮಾತನಾಡುತ್ತಾ, ವೀರವನಿತೆ ಒನಕೆ ಓಬವ್ವ ನವರು ಶೌರ್ಯ, ಸಾಹಸ, ತ್ಯಾಗದಿಂದ ನಾಡಿನ ಒಳಿತಿಗಾಗಿ ಅಮರರಾದವರು. ಇಂತಹ ಮಹನೀಯರನ್ನು ಆದರ್ಶವನ್ನಾಗಿ ಇಟ್ಟುಕೊಂಡು ಸಾಮಾಜಿಕವಾಗಿ ಬದಲಾವಣೆಯ ದಾರಿಯಲ್ಲಿ ಸಾಗೋಣ ಎಂದರು. ಇಂದಿನ ತಲೆಮಾರಿನ ಮಹಿಳೆಯರು ಒನಕೆ ಓಬವ್ವನವರನ್ನು ಪ್ರೇರಣೆ ಮತ್ತು ಸ್ಪೂರ್ತಿಯಾಗಿ ತೆಗೆದುಕೊಂಡು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿ ದೇಶದ ಒಳ್ಳೆಯ ಪ್ರಜೆಗಳಾಗಿ ಬಾಳಬೇಕು ಹಾಗೂ ನಮ್ಮ ಕೂಡ್ಲಿಗಿ ತಾಲೂಕಿನ ಮನೆ ಮಗಳು ಓಬವ್ವ ಎಂದೂ ಹೇಳಿದರು. ಈ ವೇಳೆ ತಹಶೀಲ್ದಾರರಾದ ಎಂ. ರೇಣುಕಾ, ಉಪ ತಹಶೀಲ್ದಾರರಾದ ನೇತ್ರಾವತಿ, ವಿವಿಧ ಇಲಾಖೆಯ ಅಧಿಕಾರಿಗಳು, ಪ. ಪಂ. ಅಧ್ಯಕ್ಷರಾದ ಶ್ರೀ ಕಾವಲ್ಲಿ ಶಿವಪ್ಪ ನಾಯಕ, ಸರ್ವ ಸದಸ್ಯರು, ಮುಖಂಡರು, ಸಮುದಾಯ ಕುಲಬಾಂಧವರು ಉಪಸ್ಥಿತರಿದ್ದರು.
ವರದಿ : ಗುರುರಾಜ್ ಎಲ್, ಕಲ್ಲಹಳ್ಳಿ ಟಿ




















