ಶಿವಮೊಗ್ಗ: ಲೋಕಸಭೆ ಹಾಗು ರಾಜ್ಯಸಭೆಯಲ್ಲಿ ವಕ್ಫ್ ತಿದ್ದುಪಡಿ ಮಸೂದೆ-2025 ಅಂಗೀಕಾರವಾಗುತ್ತಿದ್ದಂತೆ, ಅನಿಯಂತ್ರಿತ ಭೂ ಕಬಳಿಕೆ ಯುಗ ಮುಗಿದಿದೆ. ಹೊಸ ದಿಕ್ಕಿನಲ್ಲಿ ನಡೆಯುತ್ತಿರುವ ನ್ಯಾಯಯುತ ಭಾರತವೊಂದರ ಹಾದಿಯ ಆರಂಭವಾಗಿದೆ.
ಖುಷಿಯ ಸಂಗತಿ ಏನಂದರೆ, ಅತೀವ ಸಂಕಷ್ಟ ಅನುಭವಿಸುತ್ತಿದ್ದ ಸಾವಿರಾರು ರೈತ ಕುಟುಂಬಗಳಿಗೆ ಮತ್ತು ಧಾರ್ಮಿಕ ಪರಂಪರೆಯ ಉಸ್ತುವಾರಿ ಹೊತ್ತಿರುವ ಮಠಗಳು ಹಾಗೂ ದೇವಸ್ಥಾನಗಳಿಗೆ ಈ ತಿದ್ದುಪಡಿ ಒಂದು ಹೊಸ ಆಶಾಕಿರಣವನ್ನು ತಂದಿದ್ದು, ಇದರ ಜೊತೆಯಲ್ಲಿ ವಕ್ಫ್ ಬೋರ್ಡಿನ ಅವ್ಯವಸ್ಥಿತ, ಕಾನೂನು ಬಾಹ್ಯ ಚಟುವಟಿಕೆಗಳನ್ನು ನಿಯಂತ್ರಿಸಿ, ಎಲ್ಲ ಭೂ ಮಾಲೀಕರಿಗೂ ಸಮಾನತೆ ಹಾಗೂ ನ್ಯಾಯವನ್ನು ಪುನಸ್ಥಾಪಿಸುವ ಮಹತ್ತರ ಹೆಜ್ಜೆಯಾಗಿದೆ.
ಇದು ಕೇವಲ ಒಂದು ಕಾನೂನು ಬದಲಾವಣೆ ಅಲ್ಲ — ಇದು ಸತ್ಯ ಮತ್ತು ನ್ಯಾಯಕ್ಕೆ ನಮ್ಮ ನಂಬಿಕೆಗೆ ದೊರೆತ ಜಯ ಹಾಗೂ ಸಾಂವಿಧಾನಿಕವಾಗಿ ಬದಲಾದ ಈ ಕಾನೂನನ್ನು ಇಡೀ ಭಾರತವೇ ಒಪ್ಪುವಂತ ಈ ಕಾನೂನಿಗೆ ಹಾಗೂ ಈ ಐತಿಹಾಸಿಕ ಪ್ರಜಾಪ್ರಭುತ್ವದ ಗೆಲುವು ಅಭಿನಂದನಾರ್ಹವಾಗಿದೆ.
ಶ್ರೀಯುತ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರದ ಎನ್ ಡಿಎ ಸರ್ಕಾರದ ಸಾಮೂಹಿಕ ಪ್ರಯತ್ನಗಳಿಗೆ ಹಾಗೂ ಈ ತಿದ್ದುಪಡಿ ಮಸೂದೆಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ನಾನು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಶಿವಮೊಗ್ಗ ಶಾಸಕ ಶ್ರೀ ಎಸ್. ಎನ್. ಚನ್ನಬಸಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಕೊಡಕ್ಕಲ್ ಶಿವಪ್ರಸಾದ್, ಶಿವಮೊಗ್ಗ




















