ಕೊಟ್ಟೂರು : ಪಟ್ಟಣದ ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಇಂದು ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿದ್ದ ಶ್ರೀ ಪರಮಪೂಜ್ಯ ಯೋಗಿ ರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು, ಕೊಟ್ಟೂರು ಕಟ್ಟಿಮನಿ ಹಿರೇಮಠ ಇವರು ವಚನಕಾರರಲ್ಲಿ ಆದ್ಯ ವಚನಕಾರರಾದ ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ಸಾಮಾಜಿಕ ಬದಲಾವಣೆಗೆ ಪ್ರಯತ್ನಿಸಿದರು. ಹೆಣ್ಣು-ಗಂಡು ಭೇದವನ್ನು ಎಣಿಸದೇ ಎರಡರಲ್ಲೂ ಇರುವ ಆತ್ಮವು ಒಂದೇ ಎನ್ನುವ ಮೂಲಕ ಸಮಾನತೆಯನ್ನು ತಂದಿದ್ದರು. ಸತಿ-ಪತಿಗಳು ಒಂದಾದ ಭಕ್ತಿ ಹಿತವಾಗಿಪ್ಪುದು ಎನ್ನುವ ಮೂಲಕ ಕೌಟುಂಬಿಕದಲ್ಲಿ ಹೇಗೆ ಬದುಕಬೇಕೆನ್ನುವ ಸಂದೇಶವನ್ನು ನೀಡಿದ್ದಾರೆ. ದೇವಾಂಗ ಸಮುದಾಯಕ್ಕೆ ಸೇರಿದ ಫ. ಗು. ಹಳಕಟ್ಟೆಯವರು ವಚನಗಳನ್ನು ಸಂಗ್ರಹಿಸಿ ಮುದ್ರಿಸಿ ಪ್ರಚಾರ ಮಾಡುವ ಮೂಲಕ ವಚನಕಾರರನ್ನು ಬೆಳಕಿಗೆ ತಂದರು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರರಾದ ಎಂ. ಪ್ರತಿಭಾ ಇವರು ದೇವರ ದಾಸಿಮಯ್ಯನವರು ತಮ್ಮ ವಚನಗಳ ಮೂಲಕ ನೀಡಿದ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಉತ್ತಮ ಬದುಕು ನಮ್ಮದಾಗುತ್ತದೆ ಎಂದರು.
ಮುಖಂಡರಾದ ರಾಂಪುರ ಬಸವರಾಜ, ಹಳ್ಳಿ ಕೊಟ್ರೇಶ್ ಇವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ತಾಲೂಕು ದೇವಾಂಗ ಸಮುದಾಯದ ಮುಖಂಡರಾದ ಬಾಚಿನಲ್ಲಿ ಗುರುಬಸವರಾಜ, ಗಂಜಿ ಪ್ರಶಾಂತ, ಬಂಟನಹಳ್ಳಿ ಗುರುಬಸಪ್ಪ, ಮತ್ತಿಹಳ್ಳಿ ಮಂಜಣ್ಣ, ಹರಪನಹಳ್ಳಿ ಅಜ್ಜಪ್ಪ, ಮಾಮನಿ ಕೊಟ್ರೇಶಿ, ಉಪತಹಶೀಲ್ದಾರ್, ಅನ್ನದಾನೇಶ ಬಿ ಪತ್ತಾರ್, ಕಂದಾಯ ನಿರೀಕ್ಷಕ ಡಿ ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿ ಹರೀಶ್ ಹಾಗೂ ಇತರರು ಹಾಜರಿದ್ದರು. ಸಿ. ಮ. ಗುರುಬಸವರಾಜ ಸ್ವಾಗತಿಸಿ ನಿರೂಪಿಸಿದರು.
- ಕರುನಾಡ ಕಂದ ಪತ್ರಿಕೆ




















