ನಮ್ಮ ತಂದೆತಾಯಿಗಳು ಬಿಟ್ಟುಹೋದ ಆಸ್ತಿಗಳು.
ಅವಮಾನಗಳು- ( 18 ನೇ ವಯಸ್ಸಿನಲ್ಲಿ) ಒಂದು ವರ್ಷ ನಮ್ಮ ತಂದೆಯವರು ಚಡಚಣದಲ್ಲಿ ಕೆಲಸ ಮಾಡಿದ ಮೇಲೆ ಅವರಿಗೆ ಸಿಂದಗಿಗೆ ( ಬಿಜಾಪುರ- ಈಗಿನ ವಿಜಯಪುರ ಜಿಲ್ಲೆ). ಸಹಜವಾಗಿ ಅವರಿಗೆ ಇದು ಹರ್ಷದಾಯಕ ಸಂಗತಿಯಾಗಿತ್ತು. ಯಾಕೆಂದರೆ ಅವರು ಹಳ್ಳಿ ಹಳ್ಳಿ ಓಡಾಡುವದಕ್ಕಿಂತ ತಾಲೂಕು ಪೋಸ್ಟ್ ಮ್ಯಾನ್ ಆಗಿ ಬರೀ ಬರಿ ಸಿಂದಗಿಯಲ್ಲಿ ಮಾತ್ರ ಅಂಚೆ ಬಟವಾಡೆ ಮಾಡಿದರೆ ಸಾಕಿತ್ತು. ಅವರ ಬೆನ್ನ ಹಿಂದೆ ಚಡಚಣದಲ್ಲಿ ದೂರ ದೂರದ ಸ್ಥಳಗಳನ್ನು ಬರಿಗಾಲಿನಿಂದ ಓಡಾಡಿದ ಅನುಭವವಿತ್ತು.
ಸಿಂದಗಿಯಲ್ಲಿ ಪೋಸ್ಟ್ ಮಾಸ್ಟರರ ನಿವಾಸವು ಪೋಸ್ಟಾಫೀಸಿಗೆ ಹತ್ತಿರವೇ ಇತ್ತು. ನಮ್ಮ ತಂದೆಯವರು ರಾತ್ರಿ 9.30 ಕ್ಕೆ ಸಿಂದಗಿ ತಲುಪಿ, ಪೋಸ್ಟ್ ಮಾಸ್ಟರರ ನಿವಾಸದ ಕದ ತಟ್ಟಿದರು. ಪೋಸ್ಟ್ ಮಾಸ್ಟರ್ ರಿಗೆ ತಾವು ಹೊಸದಾಗಿ ವರ್ಗವಾಗಿ ಬಂದ ಪೋಸ್ಟ್ ಮ್ಯಾನ್ ಎಂದು ಪರಿಚಯಿಸಿಕೊಂಡರು. ಪೋಸ್ಟ್ ಮಾಸ್ಟರರು ಇವರನ್ನು ಕಾಲಿನಿಂದ ತಲೆಯವರೆಗೆ ಸಿಟ್ಟಿನಿಂದ ನೋಡಿ” ನಾನು ಈಗ ರಾತ್ರಿ ಹೊತ್ತಿನಲ್ಲಿ ಏನು ಮಾಡಲಿ?. ನಾಳೆ ಪೋಸ್ಟ್ ಆಫೀಸಿನ ಕೆಲಸದ ಸಮಯದಲ್ಲಿ ಬಾ, ಹೋಗು” ಎಂದು ನುಡಿದು ಬಾಗಿಲನ್ನು ರಪ್ಪನೆ ಹಾಕಿಕೊಂಡು ಒಳ ನಡೆದುಬಿಟ್ಟರು.
ಸಿಂದಗಿಯಲ್ಲಿ ನಮ್ಮ ತಂದೆಯವರನ್ನು ಬರಮಾಡಿಕೊಳ್ಳುವರು ಯಾರೂ ಇರಲಿಲ್ಲ. ಅವರು ಇಡೀ ರಾತ್ರಿಯನ್ನು ಪೋಸ್ಟ್ ಆಫೀಸಿನ ವರಾಂಡದಲ್ಲಿ ಕಳೆದರು. ಅವರಿಗೆ ಆ ಭಯಾನಕ ರಾತ್ರಿಯನ್ನು ಕಳೆದುದನ್ನು ವಿವರಿಸಲು ಅವರ ಹತ್ತಿರ ಶಬ್ದಗಳು ಇರಲಿಲ್ಲ. ಅವರ ಮನದಲ್ಲಿ ಒಂದು ವಿಚಾರ ಸರಣಿ ಶುರುವಾಯಿತು. ತಾವು ಜಗತ್ತನ್ನು ಎದುರಿಸಬೇಕೇ ಅಥವಾ ಸುಮ್ಮನೇ ರಾಜೀನಾಮೆ ಕೊಟ್ಟು ಹೊರಟು ಬಿಡಬೇಕೇ ಎಂಬುದು. ಕೊನೆಗೆ ಅವರು ಜಗತ್ತನ್ನು ಎದುರಿಸಲು ತೀರ್ಮಾನಿಸಿದರು.
ಅವರು ತಮ್ಮ ಜೀವನದಲ್ಲಿ ಇಂತಹ ಎಷ್ಟೋ ಅವಮಾನಗಳನ್ನು ಎದುರಿಸಬೇಕಾಯಿತು. ಅವರು ಅವಮಾನಗಳನ್ನು ಧೈರ್ಯದಿಂದ ಎದುರಿಸುವ ಛಲ ಬೆಳೆಸಿಕೊಳ್ಳುವ ದೊಡ್ಡ ಆಸ್ತಿಯನ್ನು ಮುಂದಿನ ಪೀಳಿಗೆಗೆ ಕೊಟ್ಟು ಹೋಗಿದ್ದಾರೆ.
- ಪ್ರಮೋದ್ ಕುಲಕರ್ಣಿ




















