
ಬಳ್ಳಾರಿ / ಕಂಪ್ಲಿ : ಪಟ್ಟಣದ ಸತ್ಯನಾರಾಯಣ ಪೇಟೆಯ ಶ್ರೀ ಶಿರಿಡಿ ಸಾಯಿಬಾಬಾ ದೇವಸ್ಥಾನದಲ್ಲಿ ಸಾಯಿಬಾಬಾ ದೇವಸ್ಥಾನದ 22ನೇ ವರ್ಷದ ವಾರ್ಷಿಕೋತ್ಸವ ಹಾಗೂ ಗುರುಪೂರ್ಣಿಮ ಅಂಗವಾಗಿ ಕಾಕಡಾರತಿ, ಕ್ಷೀರಾಭಿಷೇಕ ಸೇರಿದಂತೆ ನಾನಾ ಧಾರ್ಮಿಕ ಕೈಂಕಾರ್ಯಗಳು ಶ್ರದ್ಧಾಭಕ್ತಿಯಿಂದ ಬುಧವಾರ ನೆರವೇರಿದವು.
ಇಲ್ಲಿನ ದೇವಾಲಯದಲ್ಲಿ ಬೆಳಗಿನ ಜಾವದಲ್ಲಿ ಕಾಕಡಾರತಿ, ಸಾಯಿಬಾಬಾ ಅವರಿಗೆ ಭಕ್ತರಿಂದ 108 ಲೀ. ಕ್ಷೀರಾಭಿಷೇಕ, ಮಧ್ಯಾಹ್ನ ಆರತಿ, ಸಾಯಿಬಾಬಾಗೆ ಫಲಪುಷ್ಪಗಳ ಅಲಂಕಾರ, ವಿದ್ಯುತ್ ದೀಪಗಳ ಅಲಂಕಾರ, ಅಭಿಷೇಕ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧೆಯಿಂದ ಜರುಗಿದವು. ಭಕ್ತರು ದೇವಾಲಯಕ್ಕೆ ಆಗಮಿಸಿ, ಕಾಯಿ, ಕರ್ಪೂರ ಅರ್ಪಿಸಿ, ದೇವರ ದರ್ಶನದೊಂದಿಗೆ ಆಶೀರ್ವಾದ ಪಡೆದುಕೊಂಡರು. ಪುರೋಹಿತ ರಾಜೇಂದ್ರಸ್ವಾಮಿ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮಗಳು ಜರುಗಿದವು. ನಂತರ ಅನ್ನದಾಸೋಹ ಏರ್ಪಡಿಸಲಾಗಿತ್ತು. ಸಂಜೆ ಸಾಯಿಬಾಬಾ ಚರಿತ್ರೆಯ ನೃತ್ಯ ಸಂಯೋಜನೆ ಶ್ರೀ ಜಿಲಾನಿ ಬಾಷಾರವರ ಶ್ರೀ ನಾಟ್ಯ ಲಕ್ಷಿ ಕಲಾ ಟ್ರಸ್ಟ್ ಕಂಪ್ಲಿ ಇವರಿಂದ ನಾಟ್ಯ ಪ್ರದರ್ಶಿಸಲಾಯಿತು.
ತದ ನಂತರ ಸಂದ್ಯಾ ಆರತಿ, ವಿಶೇಷ ಪಲ್ಲಕ್ಕಿ, ಶೇಷ ಆರತಿ ನೆರವೇರಿದವು. ಇಲ್ಲಿನ ಕಾರ್ಯಕ್ರಮ ನಿಮಿತ್ಯ ಕಂಪ್ಲಿ ಸಮುದಾಯ ಆರೋಗ್ಯ ಕೇಂದ್ರ, ಬಳ್ಳಾರಿ ಸ್ವಾಮಿವಿವೇಕಾನಂದ ಚಾರಿಟೇಬಲ್ ರಕ್ತ ಕೇಂದ್ರ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ನಡೆಯಿತು. ಈ ಶಿಬಿರದಲ್ಲಿ ಯುವಕರು ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. 61 ಯೂನಿಟ್ ರಕ್ತದ ರಕ್ತಸಂಗ್ರಹವಾಗಿದೆ.
ಈ ಸಂದರ್ಭದಲ್ಲಿ ಶ್ರೀ ಶಿರಿಡಿ ಸಾಯಿಬಾಬಾ ಟ್ರಸ್ಟ್ ಉಪಾಧ್ಯಕ್ಷ ಬಟಾರಿ ದೇವೇಂದ್ರ, ಕಾರ್ಯದರ್ಶಿ ಪಿ.ಶ್ರೀನಿವಾಸಲು, ಖಜಾಂಚಿ ವೆಂಕಟೇಶರಾವ್, ನಿರ್ದೇಶಕರಾದ ಕೊಡಿದಲ್ ವೆಂಕಟೇಶ, ಭಟ್ಟ ಪ್ರಸಾದ್, ಸಿ.ಎಚ್.ವೆಂಕಟೇಶರಾವ್, ಡಿ.ವಿ.ಸತ್ಯನಾರಾಯಣ, ಜಿ.ವಿ.ಸತ್ಯನಾರಾಯಣ, ಎಂ.ಅಶೋಕ, ಸಾಯಿ ಸಾಗರ, ಸದಸ್ಯರಾದ ಸಿ.ರಾಮಬಸವೇಶ್ವರರಾವ್, ಗೋಪಿಶೆಟ್ಟಿ, ಶ್ರೀನಿವಾಸಲು, ಪವನ್ ಕುಮಾರರೆಡ್ಡಿ, ಕೆ.ನೆಹರೂ, ಕೆ.ವಿ.ಬಿ.ಚಂದ್ರಶೇಖರರಾವ್, ಜಿ.ಶ್ರೀನಿವಾಸಲು ಸೇರಿದಂತೆ ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















