ಕೊರಟಗೆರೆ: ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ಸ್ಮರಣಾರ್ಥ ಕೊರಟಗೆರೆ ತಾಲ್ಲೂಕು ಕಲಾವಿದರು, ಸಂಕಲ್ಪ ಚಾರಿಟೇಬಲ್ ಟ್ರಸ್ಟ್, ಸ್ನೇಹ ಮೆಲೋಡಿ ಆರ್ಕೆಸ್ಟ್ರಾ ಹಾಗೂ ಕುರಂಗರಾಜು ಕುಟುಂಬದವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾನುವಾರ “ಗಾಯನ ನಮನ” ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಕಲ್ಪ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ರತ್ನಮ್ಮ, ಸುಮಾರು 48 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡುವ ಮೂಲಕ ಎಸ್. ಜಾನಕಿ ಅವರು ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಜರಾಮರ ಸಾಧನೆ ಮಾಡಿದ್ದಾರೆ. ಅವರ ಗಾಯನವು ಹಲವು ತಲೆಮಾರುಗಳ ಸಂಗೀತಾಸಕ್ತರನ್ನು ರಂಜಿಸಿದ್ದು, ಅವರ ಕಲಾ ಸೇವೆ ಸದಾ ಸ್ಮರಣೀಯ ಎಂದು ಹೇಳಿದರು.
ಮಣಿಕಂಠ ಸ್ವಾಮಿ ಮಾತನಾಡಿ, ಸಂಗೀತಕ್ಕೆ ಭಾಷೆಯ ಗಡಿಗಳಿಲ್ಲ. ಎಸ್. ಜಾನಕಿ ಅವರ ಮಧುರ ಕಂಠ ಕೋಟ್ಯಂತರ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಪಡೆದಿದೆ. ಅವರ ಜೀವನ ಹಾಗೂ ಸಾಧನೆ ಯುವ ಕಲಾವಿದರಿಗೆ ಸ್ಫೂರ್ತಿದಾಯಕವಾಗಿದೆ ಎಂದು ಹೇಳಿದರು.
ಗಾಯಕಿ ರತ್ನಮ್ಮ ಮಾತನಾಡಿ, ಎಸ್. ಜಾನಕಿ ಅವರ ಹಾಡುಗಳು ಪ್ರತಿಯೊಬ್ಬ ಗಾಯಕರಿಗೂ ಮಾರ್ಗದರ್ಶಕವಾಗಿವೆ. ಅವರ ಗಾಯನ ಶೈಲಿ, ಭಾವಪೂರ್ಣ ಅಭಿವ್ಯಕ್ತಿ ಮತ್ತು ಶ್ರುತಿ ಶುದ್ಧತೆ ಸಂಗೀತ ಲೋಕಕ್ಕೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಲಾವಿದ ರಾಮಣ್ಣ ಮಾತನಾಡಿ, ಇಂತಹ ಸ್ಮರಣಾರ್ಥ ಕಾರ್ಯಕ್ರಮಗಳು ಕಲಾ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಮೂಲಕ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ನಿರಂತರವಾಗಬೇಕು ಎಂದರು.
ಬಳಿಕ ಸ್ಥಳೀಯ ಗಾಯಕ-ಗಾಯಕಿಯರು ಎಸ್. ಜಾನಕಿ ಅವರು ಹಾಡಿದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳ ಜನಪ್ರಿಯ ಗೀತೆಗಳನ್ನು ಪ್ರಸ್ತುತಪಡಿಸಿ ಸಂಗೀತಾಸಕ್ತರ ಮೆಚ್ಚುಗೆ ಗಳಿಸಿದರು.
ನಂತರ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದಂತಹ ವಿಜೇತರಿಗೆ ಪಟ್ಟಣದ ಕೊರಂಗರಾಜು ಕುಟುಂಬಸ್ಥರಿಂದ ಪ್ರಥಮ ದ್ವಿತೀಯ ತೃತೀಯ ಬಹುಮಾನಗಳನ್ನು ನೀಡಿ ಉಳಿದ ಕಲಾವಿದರಿಗೆ ಸಮಾಧಾನಕರ ಬಹುಮಾನವನ್ನು ನೀಡಿ ಸನ್ಮಾನಿಸಿ ಸತ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ನೇಹ ಮೆಲೋಡಿಸ್ ಆರ್ಕೆಸ್ಟ್ರಾ ಮಾಲೀಕರು, ಕುರಂಗರಾಜು ಕುಟುಂಬಸ್ಥರಾದ, ಹನುಮಂತಮ್ಮ, ರಾಘವೇಂದ್ರ, ಧನುಷ್ ಕುರಂಗ, ಕಾರ್ತಿಕ್ ಕುರಂಗ, ವಿಘ್ನೇಶ್, ವಿವಿಧ ಕ್ಷೇತ್ರಗಳ ಗಣ್ಯರು, ಕಲಾವಿದರು, ಸಂಗೀತಾಸಕ್ತರು ಹಾಗೂ ಸಾರ್ವಜನಿಕರು ಭಾಗವಹಿಸಿ ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಭಾವಪೂರ್ಣ ಗಾಯನ ನಮನ ಸಲ್ಲಿಸಿದರು.
ವರದಿ. ಪ್ರಸನ್ನ ಕುಮಾರ್. ಎಸ್. ಕೊರಟಗೆರೆ




















