ಬಳ್ಳಾರಿ / ಕಂಪ್ಲಿ : ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರು ಮುಂಜಾನೆಯೇ ಎದ್ದು ಮನೆಯನ್ನು ಅಲಂಕರಿಸಿ, ಅಂಗಳದಲ್ಲಿ ಆಕರ್ಷಕರ ರಂಗೋಲಿಯ ಚಿತ್ತಾರವನ್ನು ಬಿಡಿಸಿ, ಹೊಸಬಟ್ಟೆಗಳನ್ನು ತೊಟ್ಟು ಲಕ್ಷ್ಮಿ ದೇವಿಯ ಕಳಶ ಪ್ರತಿಷ್ಠಾಪಿಸಿ, ಅರಿಸಿನ–ಕುಂಕುಮದಿಂದ ಅಲಂಕರಿಸಿ, ಚಿನ್ನಾಭರಣ, ಸೀರೆ, ಹೂವು, ಬಾಳೆಕಂಬಗಳನ್ನಿಟ್ಟು ವಿಶೇಷ ಪೂಜೆ ಸಲ್ಲಿಸಿದರು.
ಶ್ರಾವಣ ಮಾಸದ ಪ್ರಮುಖ ಹಬ್ಬವಾದ ವರಮಹಾಲಕ್ಷ್ಮಿದೇವಿಯ ಪೂಜೆಯು ಮನೆಗಳಲ್ಲಿ ಲಕ್ಷ್ಮಿದೇವಿಯನ್ನು ಪ್ರತಿಷ್ಠಾಪಿಸಿ, ಪೂಜಿಸಲಾಯಿತು.
ಪೂಜೆಯ ವೇಳೆಯಲ್ಲಿ ದೇವಿಯ ನೈವೇದ್ಯಕ್ಕಾಗಿ ಐದಾರು ತರಹದ ಹಣ್ಣುಗಳು, ಹೋಳಿಗೆ, ಕಡುಬು ಸೇರಿದಂತೆ ಬಗೆ ಬಗೆಯ ಸಿಹಿ ತಿನಿಸು ತಯಾರಿಸಿ, ಪೂಜೆಗೆ ಇಡಲಾಗಿತ್ತು. ಕೆಲ ಮನೆಗಳಲ್ಲಿ ಮಹಿಳೆಯರು ಮುತ್ತೈದೆಯರನ್ನು ಮನೆಗೆ ಕರೆಯಿಸಿ ಅವರಿಗೆ ಅರಿಶಿನ– ಕುಂಕುಮ ನೀಡುವ ಶಾಸ್ತ್ರವನ್ನೂ ಮಾಡಿದ್ದು ಕಂಡುಬಂದಿತು.
ವಿಶೇಷ ಅಲಂಕಾರಿಕ:
ಮಹಾಲಕ್ಷ್ಮಿ ದೇಗುಲದಲ್ಲಿ ಲಕ್ಷ್ಮಿ ದೇವಿಗೆ ವಿಶೇಷವಾದ ಅಲಂಕಾರ ಮಾಡಲಾಗಿತ್ತು, ತುಳಜಾ ಭವಾನಿ ದೇವಸ್ಥಾನ, ಮಾರೆಮ್ಮ ದೇಗುಲ, ದುರ್ಗಮ್ಮ ದೇಗುಲ, ಲಕ್ಶ್ಮೀ ದೇವಸ್ಥಾನ ಹೀಗೆ ಪಟ್ಟಣದಲ್ಲಿನ ಬಹುತೇಕ ದೇವಿಯ ದೇಗುಲಗಳಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿ, ಪೂಜಾ ಕಾರ್ಯಕ್ರಮ ನಡೆಸುವ ಮೂಲಕ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಭಕ್ತಿ ಸಮರ್ಪಿಸಿದರು.
ಲಕ್ಷ್ಮಿ ದೇವಸ್ಥಾನದ ಪೂಜಾರಿ ಯಮುನಪ್ಪ ಪೂಜಾರಿ ಮಾತನಾಡಿ, ವರಮಹಾಲಕ್ಷ್ಮಿ ಹಬ್ಬವನ್ನು ಕಳೆದ ಹಲವಾರು ವರ್ಷಗಳಿಂದ ನಾವು ಆಚರಿಸುತ್ತಾ ಬಂದಿದ್ದೇವೆ ನೀವೆಲ್ಲರಿಗೂ ಶುಭನ್ನುಂಟುಮಾಡಲಿ ಎಂದು ಹಾರೈಸಿದರು.
ಮುಂಜಾನೆಯೇ ಲಕ್ಷ್ಮಿ ದೇವಿಯನ್ನು ಪ್ರತಿಷ್ಠಾಪಿಸಿ ಹೂವು–ಹಣ್ಣುಗಳಿಂದ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ನಂತರ ಸುತ್ತಮುತ್ತಲಿನ ಮನೆಯ ಮಹಿಳೆಯರನ್ನು ಮನೆಗೆ ಆಹ್ವಾನಿಸಿ, ಅವರಿಗೆ ಅರಿಸಿನ ಕುಂಕುಮ ನೀಡುವ ನೀಡುವ ಮೂಲಕ ಉಡಿತುಂಬುವ ಶಾಸ್ತ್ರವನ್ನೂ ಮಾಡಲಾಯಿತು ಇದೊಂದು ಮಹಿಳೆಯರಿಗೆ ವಿಶೇಷ ದಿನ ಎನ್ನುತ್ತಾರೆ ಮಹಿಳೆಯರು.
ವರದಿ : ಜಿಲಾನಸಾಬ್ ಬಡಿಗೇರ್




















