
ಬಳ್ಳಾರಿ / ಕಂಪ್ಲಿ : ಸ್ಥಳೀಯ ಪುರಸಭೆ ಸಭಾಂಗಣದಲ್ಲಿ ಶಾಸಕ ಜೆ.ಎನ್.ಗಣೇಶ್ ಅಧ್ಯಕ್ಷತೆಯಲ್ಲಿ ಹಾಗೂ ಅಧ್ಯಕ್ಷ ಭಟ್ಟ ಪ್ರಸಾದ್ ಅವರ ಸಮ್ಮುಖದಲ್ಲಿ ಸೋಮವಾರ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಬಿಎಸ್ವಿ ಶಾಲೆ ತೆರವಿಗೆ ಏಳು ತಿಂಗಳು ಗಡುವು ನೀಡಲಾಯಿತು.
ಹಲವು ವರ್ಷಗಳಿಂದ ಪುರಸಭೆಗೆ ಒಳಪಡುವ ಜಾಗದಲ್ಲಿ ಬಿಎಸ್ವಿ ಶಾಲೆ ನಡೆಸಿಕೊಂಡು ಬಂದಿದ್ದು, ಈಗ ಪಟ್ಟಣ ಹಾಗೂ ಪುರಸಭೆಯ ಅಭಿವೃದ್ಧಿಯ ದೃಷ್ಠಿಯಿಂದ ಬಿಎಸ್ವಿ ಶಾಲೆಯವರು ಸ್ಥಳವನ್ನು ಪುರಸಭೆಗೆ ಬಿಟ್ಟುಕೊಡಬೇಕಾಗಿದೆ. ಆದರೆ, ಬಿಟ್ಟುಕೊಡದ ಹಿನ್ನಲೆ ಪುರಸಭೆಯಿಂದ ಮೇ.1ರಂದು ಶಾಲೆ ಬಳಿಯ ಕಾಂಪೌಂಡ್ ಗೋಡೆ ತೆರವುಗೊಳಿಸಲಾಯಿತು. ಈ ವೇಳೆ ಶಾಲಾ ಆಡಳಿತ ಮಂಡಳಿಯವರು ಕೋರ್ಟ್ಯಿಂದ ತೆರವು ಮಾಡದಂತೆ ತಡೆಯಾಜ್ಞೆ ತಂದಿದ್ದು, ಇಲ್ಲಿನ ಪುರಸಭೆ ಆಡಳಿತ ಮಂಡಳಿಯವರು ವಿಶೇಷ ಸಭೆ ಕರೆಯಬೇಕಾಯಿತು ಈಗಾಗಲೇ ಹಲವು ಬಾರಿ ಬಿಎಸ್ವಿ ಶಾಲಾ ಜಾಗವನ್ನು ಖಾಲಿ ಮಾಡುವಂತೆ ಸೂಚಿಸಿದರೂ, ನಿರ್ಲಕ್ಷ್ಯ ವಹಿಸಿದ ಪರಿಣಾಮ ಈಗಿನ ಪುರಸಭೆ ಆಡಳಿತ ಮಂಡಳಿಯವರು ಶಾಲಾ ತೆರವಿಗೆ ದೃಢ ಸಂಕಲ್ಪ ಮಾಡಿದ್ದಾರೆ. ಆದ್ದರಿಂದ ಮಕ್ಕಳ ಶಿಕ್ಷಣದ ಹಿತದೃಷ್ಠಿಯಿಂದ ಏಳು ತಿಂಗಳು ಕಾಲಾವಕಾಶ ಮಾಡಿಕೊಟ್ಟಿದ್ದು, ಅಷ್ಟರೊಳಗಾಗಿ ಶಾಲೆಯನ್ನು ತಮ್ಮ ಜಾಗಕ್ಕೆ ಸ್ಥಳಾಂತರಿ, ಇಲ್ಲಿನ ಜಾಗವನ್ನು ಪುರಸಭೆಯ ಸುಪದ್ರಿಗೆ ಒಪ್ಪಿಸಬೇಕು ಎಂದು ಶಾಸಕ ಜೆ.ಎನ್.ಗಣೇಶ್ ಖಡಕ್ಕಾಗಿ ತಿಳಿಸಿದರು.
ನಂತರ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ಪುರಸಭೆ ಅಭಿವೃದ್ಧಿಗಾಗಿ ಸುಮಾರು 7.50 ಕೋಟಿ ಅನುದಾನ ಬಂದಿದ್ದು, ಬಿಎಸ್ವಿ ಶಾಲೆಯವರು ಜಾಗ ಖಾಲಿ ಮಾಡಿದರೆ, ಅಭಿವೃದ್ಧಿಗೆ ಅನುಕೂಲವಾಗುತ್ತದೆ. ಆದ್ದರಿಂದ ಏಳು ತಿಂಗಳೊಳಗಾಗಿ ಜಾಗ ಖಾಲಿ ಮಾಡಬೇಕು ಎಂದರು.
ಇಲ್ಲಿನ ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಕಲ್ಗುಡಿ ವಿಶ್ವನಾಥ ಇವರು ಒಂದು ವರ್ಷ ಕಾಲಾವಕಾಶ ನೀಡಬೇಕೆಂದು ಕೇಳಿಕೊಂಡಾಗ, ಎಲ್ಲಾ ಸದಸ್ಯರೂ ರೊಚ್ಚಿಗೆದ್ದು, ಇಷ್ಟು ವರ್ಷ ಕಾಲಾವಕಾಶ ಕೊಟ್ಟರೂ, ತೆರವು ಮಾಡದೇ, ಮತ್ತೇ ಮತ್ತೇ ಹದೇ ರಾಗ ಹಾಡುತ್ತಿದ್ದೀರಲ್ಲ. ಆದ್ದರಿಂದ ಯಾವುದೇ ಕಾಲಾವಕಾಶ ನೀಡದಂತೆ ಸದಸ್ಯರು ಹೇಳಿದರು. ಆದರೆ, ಅಂತಿಮವಾಗಿ ಮಕ್ಕಳ ಹಿತದೃಷ್ಠಿಯಿಂದ ಏಳು ತಿಂಗಳಲ್ಲಿ ಪುರಸಭೆ ಆಸ್ತಿ ಬಿಟ್ಟುಕೊಡುವಂತೆ ಸರ್ವ ಸದಸ್ಯರ ಮೂಲಕ ಶಾಸಕರು ತಿಳಿಸಿದ ಹಿನ್ನಲೆ ಶಾಲಾ ಆಡಳಿತ ಮಂಡಳಿಯವರು ಏಳು ತಿಂಗಳಲ್ಲಿ ಶಾಲೆಯ ಸ್ಥಳವನ್ನು ಬಿಟ್ಟಿಕೊಡುವುದಾಗಿ ಒಪ್ಪಿಕೊಂಡರು. ಮತ್ತು ಕೋರ್ಟ್ ತಡೆಯಜ್ಞಾನೆ ವಾಪಸ್ಸು ತೆಗೆದುಕೊಂಡು, ಜಾಗ ಖಾಲಿ ಮಾಡಿ, ಪುರಸಭೆ ವಶಕ್ಕೆ ಬಿಟ್ಟಿಕೊಡಬೇಕೆಂದು ತೀರ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಕೆ.ದುರುಗಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸದಸ್ಯರಾದ ಎಸ್.ಎಂ.ನಾಗರಾಜ, ರಾಮಾಂಜನೇಯ, ಡಾ.ವಿ.ಎಲ್.ಬಾಬು, ವೀರಾಂಜನೇಯ, ಲಡ್ಡು ಹೊನ್ನೂರವಲಿ, ಟಿ.ವಿ.ಸುದರ್ಶನರೆಡ್ಡಿ, ಮೌಲಾ, ಗುಡುದಮ್ಮ, ನಾಗಮ್ಮ, ಶಾಂತಲಾ, ಹೇಮಾವತಿ ಪೂರ್ಣಚಂದ್ರ ಸೇರಿದಂತೆ ನಾಮನಿರ್ದೇಶನ ಸದಸ್ಯರು, ಸಿಬ್ಬಂದಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















