
ಬಳ್ಳಾರಿ / ಕಂಪ್ಲಿ: ಪಟ್ಟಣದ ಅನೇಕ ಸಾರ್ವಜನಿಕ ಸ್ಥಳಗಳಲ್ಲಿ ಗಣೇಶನ ಮಂಡಳಿ, ಸಮಿತಿಯವರು ಹಾಗೂ ಯುವಕರು ಪ್ರತಿಷ್ಠಾಪಿಸಿದ್ದ ವಿವಿಧ ರೂಪಗಳ ಗಣಪತಿ ಮೂರ್ತಿಗಳ ಸ್ಥಳಗಳಿಗೆ ಶಾಸಕ ಜೆ. ಎನ್. ಗಣೇಶ ಶನಿವಾರ ಸಂಜೆ ಭೇಟಿ ನೀಡಿ, ಗಣಪನ ದರ್ಶನದೊಂದಿಗೆ ಆಶೀರ್ವಾದ ಪಡೆದರು.
ಇಲ್ಲಿನ ಬಿ. ಆರ್. ಅಂಬೇಡ್ಕರ್ ವೃತ್ತದ ಬಳಿ ಲಯನ್ಸ್ ಗ್ರೂಪ್ ಯುವಕ ಸಂಘದಿಂದ ಪ್ರತಿಷ್ಠಾಪಿಸಿದ ಚಾಮುಂಡಿದೇವಿಯ ಗಣೇಶ ಮೂರ್ತಿ ಸ್ಥಳಕ್ಕೆ, ವರಲಕ್ಷಿ ಬ್ಯಾಂಕ್ ಮುಂಭಾಗ, 5ನೇ ವಾರ್ಡಿನ ಇಂದಿರಾ ನಗರದ ಗಣಪನ ಸ್ಥಳಗಳಿಗೆ ಶಾಸಕ ಗಣೇಶ ಭೇಟಿ ನೀಡಿ, ವಿವಿಧ ಆಕರ್ಷಣೆಯ ಗಣಪತಿಗಳನ್ನು ವೀಕ್ಷಿಸಿದರು. ತದನಂತರ ಪಟ್ಟಣದ ಸೋಮೇಶ್ವರ ದೇವಸ್ಥಾನದ ಹತ್ತಿರ ವೀರ ಕಂಪಿಲರಾಯ ವಿನಾಯಕ ಮಂಡಳಿಯವರ ಪ್ರತಿಷ್ಠಾಪನೆಯ ಕಂಪ್ಲಿ ಕಾ ಮಹಾರಾಜ್ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಭೇಟಿಯ ನಂತರ ಶಾಸಕ ಗಣೇಶ ಮಾತನಾಡಿ, ಯಾವುದೇ ಒಳ್ಳೆಯ ಕೆಲಸ ಪ್ರಾರಂಭಿಸುವ ಮೊದಲು ವಿಘ್ನ ನಿವಾರಕ ಗಣೇಶನನ್ನು ಪೂಜಿಸುವುದು ಪದ್ಧತಿ. ಇಂತಹ ಪವಿತ್ರ ಪೂಜಾ ಸ್ಥಾನ ಪಡೆದುಕೊಂಡಿರುವ ಗಣಪತಿಯನ್ನು ಪ್ರತಿಷ್ಠಾಪಿಸಿ ದೇಶದ ಆಚಾರ-ವಿಚಾರ, ಸಂಸ್ಕೃತಿ ಮುಂದುವರಿಸುತ್ತಿರುವುದು ಸಂತಸದ ಸಂಗತಿಯಾಗಿದೆ. ಕಂಪ್ಲಿ ಸೇರಿದಂತೆ ಕ್ಷೇತ್ರಾದ್ಯಂತ ಜನರು ಮೆಚ್ಚುವಂತಹ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಾ ಪ್ರತಿ ವರ್ಷದಂತೆ ಈ ವರ್ಷವು ಕೂಡ ಆಚರಣೆ ಮಾಡಿದ್ದಾರೆ. ಜನತೆಗೆ ಆರೋಗ್ಯ, ಆಯಸ್ಸು, ಐಶ್ವರ್ಯ, ಶಾಂತಿ, ನೆಮ್ಮದಿ ನೀಡಿ ದೇವರು ಕಾಪಾಡಲಿ. ಉತ್ತಮ ಮಳೆ, ಬೆಳೆ ಆಗಿ ರೈತರಲ್ಲಿ ಸಂತೋಷ ಉಂಟು ಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸದಸ್ಯ ಸಿ. ಆರ್. ಹನುಮಂತ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಕಂಪ್ಲಿ ಕ್ಷೇತ್ರ ಯೂತ್ ಕಾಂಗ್ರೆಸ್ ಅಧ್ಯಕ್ಷ ರಿಯಾಜ್ ಅಹಮ್ಮದ್, ಮುಖಂಡರಾದ ಬಿ. ಸಿದ್ದಪ್ಪ, ಕೆ.ಷಣ್ಮುಕಪ್ಪ, ರವಿಕಿರಣ್ ಡೆಕೊರೇಷನ್ ನ ನಾಗರಾಜ, ಗೋಪಾಲ, ಆಟೋ ರಘು, ಎನ್. ಕೆ. ಗಿರೀಶ್, ಎಲ್.ರಾಜೇಶ, ಎಸ್.ರುದ್ರಮುನಿ, ಯು.ಖಾಜಾ ಹುಸೇನ, ಶಶಿಕುಮಾರ, ವಾಸು, ಜಗದೀಶ, ಬಳ್ಳಾರಿ ಪ್ರಶಾಂತ, ಎನ್.ಮೋಹನ್ ಡೆಕೊರೇಷನ್, ಮಹೇಶ ಸೇರಿದಂತೆ ಅನೇಕರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















