
ಕೊಪ್ಪಳ: ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಹತ್ತು ಚುಟುಕು ಸಾಹಿತ್ಯ ಸಮ್ಮೇಳನಗಳನ್ನು
ಯಶಸ್ವಿಯಾಗಿ ನೆರವೇರಿಸಿ, ಹನ್ನೊಂದನೆಯ ಸಮ್ಮೇಳನ ಹಮ್ಮಿಕೊಳ್ಳಲು
ಸಿದ್ದತೆಯನ್ನು ನಡೆಸಿದೆ.
ಸಮ್ಮೇಳನಾಧ್ಯಕ್ಷರ ಪರಿಚಯ:
ವೀರಣ್ಣ ವಾಲಿಯವರು ಮೂಲತಃ ಯಲಬುರ್ಗಾ ತಾಲೂಕಿನ ಕರಮುಡಿಯವರು. ಶಾಲಾ ಶಿಕ್ಷಕರಾಗಿ ಹಲಗೇರಿ, ಹಿರೇ ಸಿಂದೋಗಿ, ಕೊಪ್ಪಳ, ಹೊಸ ಬಂಡಿಹರ್ಲಾಪುರ, ಇಂದರಗಿ, ಭಾಗ್ಯನಗರ ಊರುಗಳಲ್ಲಿ ಸೇವೆಯನ್ನು ಸಲ್ಲಿಸಿ, ವೀರಣ್ಣ ವಾಲಿಯವರು ಶಿಕ್ಷಣ ಕ್ಷೇತ್ರದಲ್ಲಿ ಹಲವಾರು ಹುದ್ದೆಗಳನ್ನು ಬಹಳ ಸಮರ್ಥವಾಗಿ ನಿಭಾಯಿಸಿದ್ದಾರೆ. ಅವರೊಬ್ಬ ಸಾಹಿತಿಯಾಗಿಯೂ ಜನರ ಮನ ಗೆದ್ದವರಾಗಿದ್ದಾರೆ. ಇದೀಗ ನಿವೃತ್ತರಾಗಿ ಭಾಗ್ಯನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿರುವ ಇವರು “ಆಷಾಢ ಭೂತಿಗಳು”,”ಮೌನ ನಿನಾದ”, “ನಮ್ಮ ನೆಲ;ನಮ್ಮ ಜನ.” ಕೃತಿಗಳನ್ನು ಪ್ರಕಟಿಸಿದ್ದಾರೆ ಹಾಗೂ ಹಲವಾರು ಲೇಖನಗಳನ್ನು ರಚಿಸುವ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಇವರನ್ನು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿಯವರು ಕೊಪ್ಪಳ ಜಿಲ್ಲೆಯ ಹನ್ನೊಂದನೆಯ ಚುಟುಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಅಧಿಕೃತವಾಗಿ ಘೋಷಿಸುವ ಮೂಲಕ ಸನ್ಮಾನಿಸಿ, ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಕೊಪ್ಪಳದ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡರ ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ, ರುದ್ರಪ್ಪ ಭಂಡಾರಿ, ಪ್ರಧಾನ ಕಾರ್ಯದರ್ಶಿ, ಡಾ. ಮಹಾಂತೇಶ ನೆಲಾಗಣಿ, ಸಂಘಟನಾ ಕಾರ್ಯದರ್ಶಿ, ಶಿವಪ್ರಸಾದ್ ಹಾದಿಮನಿ, ಮತ್ತು ಕೊಪ್ಪಳ ತಾಲೂಕಾ ಚುಟುಕು ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾದ ಪ್ರದೀಪಕುಮಾರ್ ಹದ್ದಣ್ಣವರ, ಆಕಾಶ ಮತ್ತು ಅವಿನಾಶ ಅವರು ಉಪಸ್ಥಿತರಿದ್ದರು.
ಚುಟುಕು ಸಾಹಿತ್ಯ ಸಮ್ಮೇಳನವನ್ನು 9ನೇ ನವಂಬರ್ 2025 ಭಾನುವಾರದಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ. ಮಹಾಂತೇಶ ನೆಲಾಗಣಿ ಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಕರುನಾಡ ಕಂದ




















