ಯಾದಗಿರಿ/ಗುರುಮಠಕಲ್ : ಹಳೆಯ ಸ್ಮೃತಿಗಳ ಮೌನ ಮುದ್ರಿಯಲ್ಲಿ, 600 ವರ್ಷಗಳ ಪವಿತ್ರ ಐತಿಹಾಸ್ಯದಿಂದ ಮಿಂಚುತ್ತಿರುವ ಗುರುಮಠಕಲ್ ಖಾಸಮಠ ಇಂದು ಅಪರೂಪದ ಭಕ್ತಿ ಮಹೋತ್ಸವವನ್ನು ನೋಡಿತು. ಮಾನವೀಯ ಮೌಲ್ಯಗಳ ಪ್ರಜ್ವಲನೆಯಾಗಿದ್ದ ಲಿಂಗೈಕ್ಯ ಶ್ರೀ ಮನಿಪ್ರ ಸಂಗಮೇಶ್ವರ ಸ್ವಾಮಿಗಳ 26ನೇ ಪುಣ್ಯಸ್ಮರಣೆಯಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡರು.
ಮಠದ 9ನೇ ಪೀಠಾಧಿಪತಿಗಳಾಗಿ ಜನಪದ ಪ್ರೀತಿ ಮತ್ತು ಸರಳತೆಯ ಮಾದರಿಯಾಗಿದ್ದ ಶ್ರೀಗಳು, ಬದುಕಿನ ಎಲ್ಲಾ ಹಂತದಲ್ಲಿಯೂ ಅಧ್ಯಾತ್ಮ ಮತ್ತು ಕೃಷಿ ಕಾಯಕ, ಸಮಾಜ ಸೇವೆಯನ್ನೇ ಆಳವಾಗಿ ಆರಾಧಿಸಿದರು. ಸುಮಾರು 40 ವರ್ಷಗಳ ಕಾಲ ಖಾಸಮಠದ ಸೇವೆಯಲ್ಲಿ ತೊಡಗಿ, ಗಡಿಭಾಗದಲ್ಲಿ ವಿದ್ಯಾಸಂಸ್ಥೆ ಪ್ರಾರಂಭಿಸಿ ಕನ್ನಡದ ವೈಭವ ಎಲ್ಲೆಡೆ ಹರಡಿಸಿದ ಶ್ರೀಗಳ ವಿಚಾರಧಾರೆ, ಪ್ರತಿ ದಿನ ತ್ರಿಕಾಲ ಪೂಜೆಗೆ ಜೀವನ ಅರ್ಪಿಸಿದ್ದ ಶ್ರೀಗಳ ಆದರ್ಶಗಳು ಇಂದಿಗೂ ಜೀವಂತ ಎಂದು ಖಾಸಮಠದ ಈಗಿನ ಶ್ರೀಗಳಾದ ಶ್ರೀ ಮನಿಪ್ರ ಶಾಂತವೀರ ಗುರುಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು. .
ತದ ನಂತರ ನೂತನ ವೀರಶೈವ ಲಿಂಗಾಯತ ಸಮಾಜದ ಪದಾಧಿಕಾರಿಗಳು ಸೇರಿದಂತೆ ಶ್ರೀಮಠಕ್ಕೆ ಸೇವೆ ನೀಡಿದವರನ್ನು, ಸಾಮಾಜಿಕ ಸೇವೆ ನೀಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಬೆನಕನಹಳ್ಳಿ ಕೇದಾರ ಶ್ರೀಗಳು, ವಿವಿಧ ಸಮಾಜದ ಮುಖಂಡರು ಹಾಗೂ ಗ್ರಾಮೀಣ ಭಾಗದ ನೂರಾರು ಭಕ್ತರು ಇಂದಿನ ಪವಿತ್ರ ಪುಣ್ಯಸ್ಮರಣೆಯಲ್ಲಿ ಭಾಗಿಯಾದರು.
ವರದಿ: ಜಗದೀಶ್ ಕುಮಾರ್ ಭೂಮಾ



















