
ಯಾದಗಿರಿ/ ಗುರುಮಠಕಲ್: ಡಿ.23 ಮಂಗಳವಾರ ಪಟ್ಟಣದ ಪುರಸಭೆ ಆವರಣದಲ್ಲಿ 2025-26 ರ ಆರ್ಥಿಕ ವರ್ಷದ ಆಯವ್ಯಯ ತಯಾರಿಕೆ ಸಿದ್ಧತಾ ಸಭೆ ಜರುಗಿತು.
ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಅವರ ನೇತೃತ್ವದಲ್ಲಿ ಜರುಗಿದ ಸಭೆಯಲ್ಲಿ ಮಾಜಿ ಸದಸ್ಯರು, ನಾಮ ನಿರ್ದೇಶನ ಸದಸ್ಯರು, ಸಂಘ ಸಂಸ್ಥೆಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದರು.
2026-27ನೇ ಸಾಲಿನ ಆರ್ಥಿಕ ವರ್ಷದ ಆಯವ್ಯಯ (ಮುಂಗಡ ಪತ್ರ) ತಯಾರಿಕಾ ಪೂರ್ವಭಾವಿ ಸಭೆ ಸಹಾಯಕ ಆಯುಕ್ತರ ಅನುಪಸ್ಥಿತಿಯಲ್ಲಿ ಮುಖ್ಯಾಧಿಕಾರಿಗಳ ಹಾಗೂ ಆಡಳಿತ ಅಧಿಕಾರಿಗಳ ಉಪಸ್ಥಿತಿಯಲ್ಲಿ ಆಯವ್ಯಯದ ಕುರಿತು ಸುಮಾರು ವರ್ಷಗಳಿಂದ ಇರುವ ಹತ್ತು ಹಲವು ಸಮಸ್ಯೆಗಳ ಕುರಿತು ಅಧಿಕಾರಿಗಳಿಗೆ ಸಾರ್ವಜನಿಕರಿಂದ ನೆನಪಿಸಲಾಯಿತು.
ಆಯವ್ಯಯ ಮಂಡನೆ ಸಭೆ ಪ್ರತಿ ಬಾರಿಯಂತೆ ಸಮಸ್ಯೆಗಳು ಕೇಳುವುದಕ್ಕೆ ಮಾತ್ರ ಸೀಮಿತವಾಗದೆ, ಸಮಸ್ಯೆ ಅಧಿಕಾರಿಗಳಿಗೆ ಸೂಚನೆ ನೀಡಿ ಬಗೆಹರಿಸುವ ಪ್ರಯತ್ನ ಮಾಡುವದಾಗಿ ಮುಖ್ಯಾಧಿಕಾರಿ ಶರಣಪ್ಪ ಮಡಿವಾಳ ಸಭಾ ಮೂಲಕ ಭರವಸೆ ನೀಡಿದರು.
ಸಭೆಯಲ್ಲಿ ಕುಡಿಯುವ ನೀರಿನ ಸರಬರಾಜು, ತರಕಾರಿ ಮಾರುಕಟ್ಟೆ ಅಭಿವೃದ್ಧಿ, ಸಾರ್ವಜನಿಕ ರುದ್ರಭೂಮಿ ಸ್ವಚ್ಛತೆ, ಬೀದಿ ಬದಿ ವ್ಯಾಪಾರಿಗಳ ಸ್ಥಳಾಂತರ, ಅಂಬೇಡ್ಕರ್ ಭವನ ಅಭಿವೃದ್ಧಿ, ತಮ್ಮಣ್ಣ ಬಾವಿ ಸ್ವಚ್ಛತೆ, ಸಾರ್ವಜನಿಕ ಶೌಚಾಲಯ, ಉದ್ಯನವನಗಳ ನಿರ್ವಹಣೆ, ಬ್ಲೀಚಿಂಗ್ ಪೌಡರ್ ವಿಲೇವಾರಿ, ಪುರಸಭೆ ಸಹಾಯವಾಣಿ ಪ್ರಾರಂಭ, ಟ್ರಾಫಿಕ್ ಸಮಸ್ಯೆ, ಇನ್ನೂ ಮುಕ್ತಾಯಗೊಳ್ಳದ ಕಾಮಗಾರಿಗಳು, ಹತ್ತು ಹಲವು ಸಮಸ್ಯೆಗಳ ಅನಾವರಣಗೊಂಡು ಆಯ ವ್ಯಯ ಮಂಡನೆ ಸಭೆ ಕುಂದು ಕೊರತೆಗಳ ಸಭೆಯಾಗಿ ಮಾರ್ಪಟ್ಟಿತು.
ಹಲವು ದಿನಗಳಿಂದ ಇರುವ ಸಮಸ್ಯೆಗಳನ್ನು ಹಂತ ಹಂತವಾಗಿ ಬಜೆಟ್ ಅನುಗುಣವಾಗಿ ಬಗೆಹರಿಸುವ ಪ್ರಯತ್ನ ಮಾಡುವ ಭರವಸೆಯೊಂದಿಗೆ ಇಂದಿನ ಸಭೆ ಮುಕ್ತಾಯ ಗೊಂಡಿತು.
ಸಭೆಯಲ್ಲಿ ಪುರಸಭೆ ಅಧಿಕಾರಿಗಳು ಸಿಬ್ಬಂದಿ, ಮಾಜಿ ಸದಸ್ಯರು, ನಾಮನಿರ್ದೇಶಕ ಸದಸ್ಯರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ನಾಗರಿಕರು ಭಾಗವಹಿಸಿದ್ದರು.
ವರದಿ : ಜಗದೀಶ್ ಕುಮಾರ್ ಭೂಮಾ



















