ಸಮೃದ್ಧ ಭಾರತದ ಬೆನ್ನೆಲುಬು
ನಮ್ಮಅನ್ನದಾತರು
ವಿಶ್ವದಲ್ಲಿ ಜೀವಸಂಕುಲಕೆ ಅನ್ನ
ನೀಡುವ ಭೂಮಿಪುತ್ರರು//
ಕೋಟಿ ವಿದ್ಯೆಗಳಲಿ ಮೇಟಿವಿದ್ಯೆ
ಮೇಲೆಂದರು ಸರ್ವಜ್ಞ
ಕೃಷಿಕರ ಹೊಡೆದಾಟ ಹೋರಾಟ
ತಿಳಿದುಕೊ ಅಲ್ಪಜ್ಞ //
ಕೈಮುಗಿದು ಕೇಳಿಕೊಳ್ಳುತ್ತೇನೆ
ಆತ್ಮಹತ್ಯೆ ಸಲ್ಲದು
ಕಳಕಳಿಯ ವಿನಂತಿ ರೈತರಿಗೆ
ಆತ್ಮವಿಶ್ವಾಸ ಇರಲೆಂದು//
ಸರಕಾರದ ಸೌಕರ್ಯ ಸೌಲಭ್ಯ
ಉಪಯೋಗಿಸಿಕೊಳ್ಳಿ
ಹಸಿರು ಕ್ರಾಂತಿಯ ಅನ್ನದಾತರು
ಎಲ್ಲ ನಿಮ್ಮದಾಗಿಸಿಕೊಳ್ಳಿ//
ಮಳೆ ಇಳೆಗೆ ಹರಿದು ನದಿ ತುಂಬಿ
ಹಸುರಿನ ಪೈರು ಬಂದಾಗ
ಜೋಳ ಗೊಂಜಾಳ ತಲೆಬಾಗಿ
ಅನ್ನದಾತನ ಕರೆದಾಗ//
ಕರಿಯ ಎರಿಹೊಲ ಹೊನ್ನಿನಂತೆ
ಹೊಳೆದು ಬೆಳೆಬಂದಾಗ
ಇಳೆಯು ಮಳೆಮುತ್ತಿನ ಹನಿಗಳಿಗೆ
ಮುಗುಳ್ನಗುತ ನಾಚಿದಾಗ//
ರವಿ ರಶ್ಮಿಗಳಿಗೆ ವಸುಂಧರೆ ನಕ್ಕಾಗ
ತೆನೆ ಮುತ್ತಿನ ರಾಶಿಯಲ್ಲಿ
ಚಂದ್ರ ಶೀತಲತೆಯನು ಸುರಿಸಿದಾಗ
ಬೆಳೆದ ಪೈರು ತೋಷದಲ್ಲಿ//
ಸರ್ಜಾರಾಜಾ ಬಿಳಿ ಜೋಡೆತ್ತುಗಳ
ಗಂಟೆಗಳು ಬಾರಿಸುತಲಿ
ನೇಗಿಲಯೋಗಿ ಹಾಡುತ ಕೈಮುಗಿದು
ಬರುವ ತುಂಬಿದ ಬಂಡಿಯಲಿ//
ಕಾಯಕಯೋಗಿಯ ಕಾಯಕಕೆ
ನಾವೆಲ್ಲ ನಮಿಸುವೆವು
ಅನ್ನಪೂರ್ಣೆಯ ಪುತ್ರ ತಮಗೆ
ಕೃತಜ್ಞತೆ ಸಲ್ಲಿಸುವೆವು//
- ಅನ್ನಪೂರ್ಣ ಸಕ್ರೋಜಿ




















