ಬಳ್ಳಾರಿ : ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡಿದ ಬಳ್ಳಾರಿ ಬ್ಯಾನರ್ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗುಂಡೇಟಿಗೆ ಬಲಿ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಕೃತ್ಯ ನಡೆದಿದೆ.
ಹೌದು…ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಹಾಗೂ ಶ್ರೀರಾಮುಲುಗೆ ಸೇರಿದ ಸೇರಿದ ಜಿ ಸ್ಕೈರ್ ಲೇಔಟ್ನಲ್ಲಿರುವ ಮಾಡೆಲ್ ಹೌಸ್ನಲ್ಲಿ (Model House) ಬೆಂಕಿ ಅವಘಡ ಸಂಭವಿಸಿದ್ದು,, ಕಾಂಗ್ರೆಸ್ನವರೇ ಬೆಂಕಿ ಹಚ್ಚಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ. ಇದರಿಂದ ಈ ಬೆಂಕಿ ಪ್ರಕರಣ ಮತ್ತೆ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸುವ ಸಾಧ್ಯತೆಗಳಿವೆ.
ಈ ಮಾಡೆಲ್ ಹೌಸ್ ಶ್ರೀರಾಮುಲು ಹಾಗೂ ಜನಾರ್ದನ ರೆಡ್ಡಿ ಇಬ್ಬರ ಹೆಸರಿನಲ್ಲಿದ್ದು, 13-14 ವರ್ಷಗಳ ಹಿಂದೆ ಮಾಡಲಾಗಿದೆ. ಈ ಹೌಸ್ ಒಟ್ಟು 109 ಎಕರೆ ಟೋಟಲ್ G ಸ್ವ್ಕೇರ್ ಹೊಂದಿದೆ.ಈ ಘಟನೆ ಬಗ್ಗೆ ಮಾಜಿ ಶಾಸಕ ಸೋಮಶೇಖರ್ ರೆಡ್ಡಿ ಪ್ರತಿಕ್ರಿಯಿಸಿದ್ದು, ಬ್ಯಾನರ್ ಗಲಾಟೆ ವೇಳೆ ಬೆಂಕಿ ಹಚ್ಚುತ್ತೇನೆಂದು ಹೇಳಿದ್ದರು. ಅಂದಿನ ಘಟನೆಗೆ ಸಾಕ್ಷಿ ಎನ್ನುವಂತೆ ಈಗ ಬೆಂಕಿ ಹಚ್ಚಿದ್ದಾರೆ. ನಮಗೆ ಸೇರಿದ ಮಾಡೆಲ್ ಹೌಸ್ಗೆ ಬೆಂಕಿ ಹಚ್ಚಿದ್ದಾರೆ. ನೂರು ಎಕರೆ ಪ್ರದೇಶದಲ್ಲಿ ಲೇಔಟ್ ಮಾಡಲಾಗಿತ್ತು. ಖರೀದಿದಾರರಿಗೆ ತೋರಿಸಲು ಮಾಡೆಲ್ ಹೌಸ್ ನಿರ್ಮಿಸಿದ್ದೆವು. ಇಂದು ಜನವರಿ 23 ರ ಸಂಜೆ 6:30 ರ ಸುಮಾರಿಗೆ ಬೆಂಕಿ ಹಚ್ಚಲಾಗಿದೆ. ಬೆಂಕಿ ಹಚ್ಚಿದವರನ್ನ ಹಿಡಿಯಲು ಕೆಲವರು ಯತ್ನಿಸಿದ್ದಾರೆ ಎಂದು ಸ್ಫೋಟಕ ಆರೋಪ ಮಾಡಿದ್ದಾರೆ.
ಮಾಡಲ್ ಹೌಸ್ಗೆ ಪೆಟ್ರೋಲ್, ಡೀಸೆಲ್ ಹಾಕಿ ಬೆಂಕಿ ಹಚ್ಚಿದ್ದಾರೆ. ಕಾಂಗ್ರೆಸ್ ಶಾಸಕ ಭರತ್ ರೆಡ್ಡಿ ಬೆಂಬಲಿಗರೇ ಇದನ್ನ ಮಾಡಿರುವುದು. ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಕೂಡ ಬಂದಿದ್ದಾರೆ. ಇದನ್ನ ನಾವು ಬಿಡಲ್ಲ, ಪೊಲೀಸ್ ಠಾಣೆಗೆ ದೂರು ನೀಡುತ್ತೇವೆ ಎಂದರು.
ಇನ್ನು ಈ ಅಗ್ನಿ ಅವಘಡದ ಬಗ್ಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಅಧಿವೇಶನಕ್ಕಾಗಿ ಬೆಂಗಳೂರಲ್ಲಿದ್ದ ಜನಾರ್ದನ ರೆಡ್ಡಿ ಅವರು ಈಗ ಬಳ್ಳಾರಿಗೆ ಹಿಂತಿರುಗುತ್ತಿದ್ದಾರೆ. ಬ್ಯಾನರ್ ಗಲಾಟೆಯಾಗಿ ಇನ್ನೂ 15 ದಿನಗಳು ಸಹ ಆಗಿಲ್ಲ. ಆಗಲೇ ಇಂತಹ ಘಟನೆ ನಡೆದಿದೆ. ಘಟನೆ ಬಗ್ಗೆ ಬಳ್ಳಾರಿ ಎಸ್ಪಿ ಜೊತೆ ನಾನು ಮಾತಾಡಿದ್ದೇನೆ ಎಂದು ಹೇಳಿದರು.
ಒಟ್ಟಿನಲ್ಲಿ ರೆಡ್ಡಿ ನಿವಾಸದ ಮುಂದೆ ನಡೆದ ಬ್ಯಾನರ್ ಗಲಾಟೆ ಬೆನ್ನಲ್ಲೇ ಇದೀಗ ಅದೇ ರೆಡ್ಡಿಗೆ ಸೇರಿದ ಮಾಡೆಲ್ ಹೌಸ್ಗೆ ಬೆಂಕಿ ಬಿದ್ದಿದ್ದು, ಇದು ಕಾಂಗ್ರೆಸ್ನವರ ಕೃತ್ಯ ಎಂದು ಅವರ ಸಹೋದರ ಸೋಮಶೇಖರ್ ರೆಡ್ಡಿ ಆರೋಪಿಸಿದ್ದಾರೆ. ಹೀಗಾಗಿ ಈ ಬೆಂಕಿ ರಾಜ್ಯಕಾರಣವನ್ನು ಆವರಿಸುವ ಸಾಧ್ಯತೆಗಳಿವೆ.
ಸದ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುದು ತನಿಖೆಯ ನಂತರವಷ್ಟೇ ತಿಳಿಯಬೇಕಿದೆ.
ವರದಿ : ಜಿಲಾನಸಾಬ್ ಬಡಿಗೇರ್




















