ಬಳ್ಳಾರಿ / ಕಂಪ್ಲಿ : ಕಂಪ್ಲಿ-ಕೋಟೆಯ ತುಂಗಭದ್ರಾ ನದಿ ತೀರದಲ್ಲಿ ವೀರಾಜಮಾನವಾಗಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ಪಂಪಾಪತಿ ಮತ್ತು ಹಂಪಮ್ಮದೇವಿ ಮಹಾರಥೋತ್ಸವವು ಸಡಗರ ಸಂಭ್ರಮ ಶ್ರದ್ಧೆ, ಭಕ್ತಿಯಿಂದ ಜಯಘೋಷಣೆಗಳ ಮಧ್ಯೆ ವಿಜೃಂಭಣೆಯಿಂದ ಜರುಗಿತು. ಮಹಾರಥೋತ್ಸವದ ಅಂಗವಾಗಿ ಮರುದಿನದಲ್ಲಿ ಕಂಕಣಧಾರಣೆ, ರಥಕ್ಕೆ ಕಳಸಧಾರಣೆ ಹಾಗೂ ಶ್ರೀ ಪಂಪಾಪತಿ ಹಂಪಮ್ಮದೇವಿಯ ಕಲ್ಯಾಣ ಮಹೋತ್ಸವವು ವಿಜೃಂಭಣೆಯಿಂದ ಜರುಗಿದ್ದವು. ರಾತ್ರಿ ಆಕರ್ಷಕ ಹೂವಿನ ಪಲ್ಲಕ್ಕಿ ಉತ್ಸವವೂ ಸಂಭ್ರಮದಿಂದ ನಡೆದವು.
ಮಹಾರಥೋತ್ಸವದ ಅಂಗವಾಗಿ ಶ್ರೀ ಪಂಪಾಪತಿ ಸ್ವಾಮಿಯ ಶಿಲಾ ವಿಗ್ರಹಕ್ಕೆ ವಿಶೇಷ ಅಭಿಷೇಕ,ಸಹಸ್ರ ಬಿಲ್ವಾರ್ಚನೆ, ಅಲಂಕಾರ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಸಂಜೆ ರಥಕ್ಕೆ ವಿವಿಧ ಹೂಗಳು,ತಳೀರು ತೋರಣಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿದ ನಂತರ ಜಯಘೋಷಗಳೊಂದಿಗೆ ದೇವಸ್ಥಾನದ ಪದಾಧಿಕಾರಿಗಳು ಮಹಾರಥೋತ್ಸವಕ್ಕೆ ಚಾಲನೆ ನೀಡಿದರು. ಅಲಂಕೃತ ರಥವನ್ನು ಕಂಪ್ಲಿ ಗಂಗಾವತಿ ಮುಖ್ಯ ರಸ್ತೆಯಲ್ಲಿ ಎದುರು ಬಸವಣ್ಣ ದೇವಸ್ಥಾನದವರೆಗೆ ಎಳೆದು ಪುನಃ ದೇವಸ್ಥಾನಕ್ಕೆ ಎಳೆದುಕೊಂಡು ಬಂದರು. ಮಹಾರಥೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳು, ಮಂಗಳವಾದ್ಯಗಳು ಭಾಗವಹಿಸಿದ್ದವು. ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಸದ್ಭಕ್ತರು ತೇರಿಗೆ ಹೂ, ಉತ್ತತ್ತಿ ಎಸೆದು ತಮ್ಮ ಹರಕೆಯನ್ನು ತೀರಿಸಿದರು. ರಥೋತ್ಸವದಲ್ಲಿ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಕೋಟೆ, ಕಂಪ್ಲಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ಸಾವಿರಾರು ಸದ್ಭಕ್ತರು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















