ಬಳ್ಳಾರಿ / ಕಂಪ್ಲಿ : ಕಂಪ್ಲಿ ಉತ್ಸವದ ನಿಮಿತ್ತ ಇಲ್ಲಿನ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪ ಅಲಂಕಾರ ಸೇರಿ ಹಲವು ಕಾರ್ಯ ಕೈಗೊಂಡಿದ್ದು, ಪಟ್ಟಣ ನವ ವಧುವಿನಂತೆ ಸಿಂಗಾರಗೊಳ್ಳುತ್ತಿದೆ.
ಸರಕಾರ ಫೆ.11,12ರಂದು ಕಂಪ್ಲಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲು ಸಜ್ಜಾಗಿರುವುದರಿಂದ ಇಲ್ಲಿನ ನಡುಲ ಮಸೀದಿಯಿಂದ ಅಂಬೇಡ್ಕರ್ ವೃತ್ತ ಸೇರಿ ಉತ್ಸವ ಜರುಗುವ ಸ್ಥಳದವರೆಗಿನ ರಸ್ತೆ ಒಳಗೊಂಡಂತೆ ಎಲ್ಲಾ ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಗಳಿಂದ ಅಲಂಕರಿಸಿದ್ದು ರಾತ್ರಿ ವೇಳೆ ಜನರನ್ನು ವಿಶೇಷವಾಗಿ ಆಕರ್ಷಿಸುತ್ತಿದೆ.
ಸ್ವಚ್ಛವಾಗುತ್ತಿದೆ ಸೋಮಪ್ಪ ಕೆರೆ:
ಸೋಮಪ್ಪ ಕೆರೆ ಇಲ್ಲಿನ ಪುರಸಭೆ ಆಡಳಿತ ಮಂಡಳಿ ಪಟ್ಟಣದ ಎಲ್ಲಾ ವಿದ್ಯುತ್ ಕಂಬ , ಜತೆಗೆ ಸ್ಥಳಗಳಲ್ಲಿರುವ ಹೈಮಾಸ್ ದೀಪ ಅಳವಡಿಸಿದೆ. ಇಲ್ಲಿನ ಸೋಮಪ್ಪ ಕೆರೆ ಸ್ವಚ್ಛತಾ ಕಾರ್ಯ ಕೈಗೊಂಡಿದೆ. ಪ್ರಮುಖ ರಸ್ತೆಗಳ ಪಕ್ಕ ಬೆಳೆದ ಗಿಡ, ಗಂಟಿಗಳ ತೆರವು ಕಾರ್ಯ ಕೈಗೊಂಡು ರಸ್ತೆಗಳನ್ನು ಶುಭ್ರತೆ ಮಾಡುತ್ತಿದೆ.
ಫೆ.12ರಂದು ನಡೆಯುವ ವೇದಿಕೆ ಕಾರ್ಯಕ್ರಮ ಸ್ಥಳದ ಸ್ವಚ್ಛತಾ ಕಾರ್ಯದಲ್ಲಿ ನಿರತವಾಗಿದೆ. ಸರಕಾರದ ನಾನಾ ಇಲಾಖೆ ಅಧಿಕಾರಿಗಳು ಉತ್ಸವದ ಯಶಸ್ವಿಗೆ ಯತ್ನಿಸುತ್ತಿದ್ದಾರೆ. ಜತೆಗೆ ಉತ್ಸವದ ನಿಮಿತ್ತ ಪಟ್ಟಣದ ಸೇರಿ ನಾನಾ ಹಳ್ಳಿಗಳ ಜನತೆ ಭಾಗವಹಿಸಲು ಪ್ರಚಾರ ವಾಹನದ ವ್ಯವಸ್ಥೆ ಮಾಡಿದೆ.
ಕಂಪ್ಲಿ ಉತ್ಸವದ ನಿಮಿತ್ತ ಅಂಬೇಡ್ಕರ್ ವೃತ್ತದಿಂದ ವಾಲ್ಮೀಕಿ ವೃತ್ತದವರೆಗಿನ ರಸ್ತೆಗೆ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.

ಗಮನ ಸೆಳೆಯುತ್ತಿದೆ ಕೋಟೆ ಚಿತ್ರ:
ಬಾಣದ ದೀಪಕ್ ಅವರು ಕಂಪ್ಲಿ ಉತ್ಸವದ ಲಾಂಛನದಲ್ಲಿ ಹೊಸಪೇಟೆ ಕಲಾವಿದನಿಂದ ಲಾಂಛನ ರಚನೆ ಕಂಪ್ಲಿ ಉತ್ಸವದ ಲಾಂಛನವನ್ನು ಹೊಸಪೇಟೆ ಬಾಣದಕೇರಿ ಚಿತ್ರ ಕಲಾವಿದ ಬಾಣದ ದೀಪಕ್ ರಚಿಸಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಬಾಣದ ರಾಮಣ್ಣ, ಸುಜಾತ ಪುತ್ರರಾದ ಇವರು ಧಾರವಾಡ ಭಾರತೀಯ ಕಲಾ ಕೇಂದ್ರದಲ್ಲಿ ಡಿಪ್ಲೊಮಾ ಇನ್ ಪೇಂಟಿಂಗ್, ಕರ್ನಾಟಕ ವಿವಿಯಲ್ಲಿ ಎಂ.ಎಫ್.ಎ. ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಭಾವಚಿತ್ರ, ಕ್ರಿಯೆಟೀವ್ ಲ್ಯಾಂಡ್ ಸ್ಟೇಪ್, ಅಮೂರ್ತ ಕಲಾ ಪ್ರಕಾರಗಳಲ್ಲಿ ನಿಸರ್ಗ ಚಿತ್ರಗಳು, ಕಂಪ್ಯೂಟರ್ ಗ್ರಾಫಿಕ್ ಚಿತ್ರಗಳು, ನಾನಾ ಸಾಹಿತ್ಯ ಕೃತಿಗಳಿಗೆ, ಅಭಿನಂದನಾ ಗ್ರಂಥ, ಸ್ಮರಣ ಸಂಚಿಕೆಗಳಿಗೆ ಮುಖಪುಟ ರಚಿಸಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ರಾಜ್ಯ ಸರಕಾರ ಏರ್ಪಡಿಸುವ ಹಂಪಿ, ಬಳ್ಳಾರಿ, ಆನೆಗೊಂದಿ, ಕಂಪ್ಲಿ ಉತ್ಸವಕ್ಕೆ ಸುಂದರವಾದ ಲಾಂಛನ ರಚಿಸಿರುವುದು ವಿಶೇಷ. ಸತತ ನಾಲ್ಕು ಬಾರಿ ಹಂಪಿ ಉತ್ಸವಕ್ಕೆ ಇವರ ಲಾಂಛನ ಆಯ್ಕೆಯಾಗುವುದು ಹೆಮ್ಮೆಯ ಸಂಗತಿ, ದೀಪಕ್ ಏಕವ್ಯಕ್ತಿ ಕಲಾಪ್ರದರ್ಶನವನ್ನು ಧಾರವಾಡ, ಹೊಸಪೇಟೆ, ಬೆಳಗಾವಿ, ಹುಬ್ಬಳ್ಳಿ, ಕೊಪ್ಪಳ, ಸಿಂಧನೂರು, ಗದಗ, ಬೆಂಗಳೂರು, ಗೋವಾ ಸೇರಿ ರಾಜ್ಯ, ಹೊರರಾಜ್ಯಗಳಲ್ಲಿ ಚಿತ್ರಕಲಾ ಪ್ರದರ್ಶನ ನೀಡಿದ್ದಾರೆ.
ಕುಮಾರರಾಮನ ಕೋಟೆಯನ್ನ ಪೂರ್ಣವಾಗಿ ಬಳಸಿಕೊಂಡಿದ್ದಾರೆ. ಕೋಟೆ ಮೇಲೆ ಇಲ್ಲಿನ ಆರಾಧ್ಯ ದೈವ ಸೋಮೇಶ್ವರ ಮೂರ್ತಿಯನ್ನು ಸೂರ್ಯ ರಶ್ಮಿ ಯಿಂದ ಅಲಂಕರಿಸಲಾಗಿದೆ. ಮುಂಭಾಗದಲ್ಲಿ ಇಲ್ಲಿ ಹೇರಳವಾಗಿರುವ ವೀರಗಲ್ಲು ಚಿತ್ರಿಸಲಾಗಿದೆ. ಇಲ್ಲಿನ ಸಾಂಸ್ಕೃತಿಕ ವೈಭವ ಸಾರುವ ಮಹಿಳೆಯ ಭರತ
ನಾಟ್ಯ ಭಂಗಿ ಹಾಗೂ ಗಂಡುಗಲಿ ಕುಮಾರರಾಮ ಖಡ್ಗ ಸಮೇತ ಕುದುರೆ ಸವಾರಿ ಮಾಡುವ ಚಿತ್ರ ರಚಿಸಲಾಗಿದೆ. ಕೆಳ ಭಾಗದಲ್ಲಿ ಇಲ್ಲಿನ ಕೃಷಿ ಸಂಪತ್ತಿನ ಸಿರಿ ನೆನಪಿಸುವ ಬಾಳೆ ತೋಟ ಚಿತ್ರಿಸಿದ್ದಾರೆ. ಇಲ್ಲಿನ ಸಾಮ್ರಾಜ್ಯದ ಸಿರಿವಂತಿಕೆಯನ್ನು ಸಾಂಕೇತಿಕವಾಗಿ ಚಿತ್ರಿಸಿರುವುದು ಎಲ್ಲರ ಮನ ಸೂರೆಗೊಂಡಿದೆ.
ವರದಿ : ಜಿಲಾನಸಾಬ್ ಬಡಿಗೇರ್




















