
ಬಳ್ಳಾರಿ / ಕಂಪ್ಲಿ : ಕಂಪ್ಲಿ ಉತ್ಸವ 2026 ವೈಭವದಿಂದ ನಡೆಯುತ್ತಿದ್ದು ಐತಿಹಾಸಿಕ ಇತಿಹಾಸವಿರುವ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಕಂಪ್ಲಿ ಪಟ್ಟಣದಲ್ಲಿ ಎರಡು ದಿನಗಳ ಕಾಲ ಮಾಡುತ್ತಿರೋ ಕಂಪ್ಲಿ ಉತ್ಸವದ ಮೊದಲ ದಿನದ ಕಲಾತಂಡಗಳ ಮೆರವಣಿಗೆ ಜನಮನ ಸೆಳೆಯಿತು.

ಜಿಲ್ಲಾ ವಿಭಜನೆ ಬಳಿಕ ಇದೀಗ ಉತ್ಸವ ಎರಡನೇ ಬಾರಿಗೆ ಸಾಕಾರಗೊಂಡಿದೆ.
ಕಂಪ್ಲಿ ಉತ್ಸವ 2026 ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ವೈಭವ ಮೆರವಣಿಗೆಯು ಪಟ್ಟಣದ ಸಾಂಸ್ಕೃತಿಕ ಕಲಾ ವೈಭವವನ್ನು ಮರುಕಳಿಸಿತು.

ಕಂಪ್ಲಿ ಉತ್ಸವದ ಮೆರವಣಿಗೆಗೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಪಟ್ಟಣದ ಕೋಟೆಯ ಐತಿಹಾಸಿಕ ಶ್ರೀ ಪಂಪಾಪತಿ ದೇವಸ್ಥಾನದ ಪ್ರದೇಶದ ಗಂಡುಗಲಿ ಕುಮಾರರಾಮ ಮೂರ್ತಿಗೆ ಪುಷ್ಪಾರ್ಚನೆ ಮಾಡುವುದರ ಚಾಲನೆ ನೀಡಿದರು.

ಅದ್ಧೂರಿಯಾಗಿ ನಡೆದ ಮೆರವಣಿಗೆ:
ಕಲಾ ತಂಡದೊಂದಿಗೆ ಮೆರವಣಿಗೆಯು ಪಟ್ಟಣದ ಕೋಟೆ ಪ್ರದೇಶದಿಂದ ಆರಂಭವಾಗಿ, ನಡುವಲ ಮಸೀದಿ ಮೂಲಕ ಸಾಗಿ ಡಾ.ರಾಜ್ ಕುಮಾರ್ ರಸ್ತೆಯ ಮಾರ್ಗವಾಗಿ ಅಂಬೇಡ್ಕರ್ ವೃತ್ತದಿಂದ ಸೋಮೇಶ್ವರ ದೇವಸ್ಥಾನದವರೆಗೆ ಅದ್ಧೂರಿ ಉತ್ಸವ ಮೆರವಣಿಗೆ ಜರುಗಿತು.
ಗಮನ ಸೆಳೆದ ವಿವಿಧ ಕಲಾತಂಡಗಳು: ಮೆರವಣಿಗೆಯಲ್ಲಿ ಹಗಲುವೇಷ, ವೀರಗಾಸೆ, ತಾಷರಂಡೋಲ್, ಹುಲಿವೇಷ, ಡೊಳ್ಳು ಕುಣಿತ, ಕಹಳೆ ವಾದನ, ಮಹಿಳಾ ಡೊಳ್ಳು ಕುಣಿತ, ನಾದಸ್ವರ, ನಂದಿಧ್ವಜ, ಕಂಸಾಳೆ, ಮರುಗಾಲು ಕುಣಿತ, ಛತ್ರಿ ಚಾಮರಾ, ಸೋಮನ ಕುಣಿತ, ಭದ್ರಕಾಳಿ, ಸಿಂದೂಳ್ ಕುಣಿತ, ಕಂಚಿಮೇಳ, ಪಟ ಕುಣಿತ, ಸುಗ್ಗಿ ಕುಣಿತ, ಹಲಗೆ ವಾದನ, ಮಹಿಳಾ ಕೋಲಾಟ, ಹಕ್ಕಿಪಿಕ್ಕಿ ನೃತ್ಯ, ಚಂಡೆವಾದ್ಯ, ಗಾರಡಿ ಗೊಂಬೆ, ಗೊಂಬೆ ಕುಣಿತ, ಚಿಟ್ಟಿನೃತ್ಯ, ಪೂಜಾ ಕುಣಿತ, ಕಥಕ್ಕಳಿ, ಮಹಿಳಾ ವೀರಗಾಸೆ, ನಗಾರಿ ವಾದನ, ಸತ್ತಿಗೆ ಕುಣಿತ, ಕೀಲು ಕುದುರೆ-ನವೀಲು ಕುಣಿತ, ಗೊಂಬೆ ಕುಣಿತ, ಸಿಂದೋಳ್ ಕುಣಿತ, ಕಂಚಿಮೇಳ, ಕಲಾತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡು ಉತ್ಸವವದ ಮೆರಗನ್ನು ಇನ್ನಷ್ಟು ಹೆಚ್ಚಿಸಿದವು.
ವರದಿ : ಜಿಲಾನಸಾಬ್ ಬಡಿಗೇರ್




















