
ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಯಲೀಹಡಲಗಿ ಹಾಗೂ ಅಡಹಳ್ಳಿ ಗ್ರಾಮ ಪಂಚಾಯಿತಿಗಳಲ್ಲಿ ಕಾಯಕ ಶರಣರ ಜಯಂತಿಯನ್ನು ಬೇಜವಾಬ್ದಾರಿಯುತವಾಗಿ ಮತ್ತು ಕೇವಲ ಕಾಟಾಚಾರಕ್ಕೆ ಆಚರಣೆ ಮಾಡಲಾಗಿದೆ ಎಂದು ದಲಿತ ಮುಖಂಡ ಶಿವಾನಂದ ಸೌದಗಾರ ಗಂಭೀರ ಆರೋಪ ಮಾಡಿದ್ದಾರೆ.

ಅಥಣಿ ತಾಲೂಕಿನ ಯಲಿಹಡಲಗಿ ಮತ್ತು ಅಡಹಳ್ಳಿ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ನಡೆದ ಕಾಯಕ ಶರಣರ ಜಯಂತಿ ಕಾರ್ಯಕ್ರಮವು ಸರ್ಕಾರದ ಮಾರ್ಗಸೂಚಿಗಳನ್ನು ಸಂಪೂರ್ಣವಾಗಿ ಉಲ್ಲಂಘಿಸಿ, ಕೇವಲ ಹೆಸರುಗಾಗಿ ನಡೆಸಲಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಆದೇಶದಂತೆ ಎಲ್ಲಾ ಶರಣರ ಜಯಂತಿಯನ್ನು ಸಮರ್ಪಕವಾಗಿ, ಸಾರ್ವಜನಿಕರ ಭಾಗವಹಿಸುವಿಕೆಯಿಂದ ಹಾಗೂ ಗೌರವಯುತವಾಗಿ ಆಚರಿಸಬೇಕು. ಆದರೆ ಇಲ್ಲಿ ಯಾವುದೇ ಪೂರ್ವಸಿದ್ಧತೆ ಇಲ್ಲದೆ, ಶರಣರ ಜೀವನ ಮೌಲ್ಯಗಳು ಹಾಗೂ ಸಮಾಜಕ್ಕೆ ನೀಡಿದ ಸಂದೇಶಗಳ ಬಗ್ಗೆ ಯಾವುದೇ ಭಾಷಣ, ಜಾಗೃತಿ ಕಾರ್ಯಕ್ರಮಗಳು ನಡೆಯದೇ, ಕೇವಲ ಫೋಟೋಗೆ ಹಾರ ಹಾಕಿ ಜಯಂತಿ ಕಾರ್ಯಕ್ರಮ ಮುಗಿಸಲಾಗಿದೆ ಎಂದು ಆರೋಪಿಸಿದರು.
ಇಂತಹ ನಿರ್ಲಕ್ಷ್ಯದಿಂದ ಕಾಯಕ ಶರಣರ ತತ್ವ, ಆಶಯ ಮತ್ತು ಆದರ್ಶಗಳಿಗೆ ಅಪಮಾನವಾಗಿದೆ. ಇದು ಕೇವಲ ಶರಣರಿಗೆ ಮಾತ್ರವಲ್ಲ, ಸಮಾಜದ ಮೌಲ್ಯಗಳಿಗೆ ಧಕ್ಕೆಯಾಗುವ ಸಂಗತಿಯಾಗಿದೆ ಎಂದು ಶಿವಾನಂದ ಸೌದಗಾರ ಆಕ್ರೋಶ ವ್ಯಕ್ತಪಡಿಸಿದರು.
ಸಂಬಂಧಪಟ್ಟ ಗ್ರಾಮ ಪಂಚಾಯತ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಯನ್ನು ಮರೆತು, ಸರ್ಕಾರದ ಆದೇಶಗಳನ್ನು ಲಘುವಾಗಿ ತೆಗೆದುಕೊಂಡಿದ್ದಾರೆ. ಇವರ ವಿರುದ್ಧ ಮೇಲಧಿಕಾರಿಗಳು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಈ ಕುರಿತು ಪ್ರತಿಕ್ರಿಯೆ ನೀಡಿದ ಅಥಣಿ ತಾಲೂಕ ಪಂಚಾಯತಿ ಕಾರ್ಯನಿರ್ವಹಕ ಅಧಿಕಾರಿಗಳಾದ ಶ್ರೀ ಶಿವಾನಂದ ಕಲ್ಲಾಪೂರ ಅವರು,
“ಈ ವಿಷಯದ ಬಗ್ಗೆ ಸಂಬಂಧಪಟ್ಟ ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ನೋಟಿಸ್ ಜಾರಿ ಮಾಡಿ ಮೇಲಾಧಿಕಾರಿಗಳಿಗೆ ಈ ವಿಷಯ ತಿಳಿಸಿದ್ದೇವೆ ಎಂದು ಹೇಳಿದರು.
ಸರ್ಕಾರದ ಜಯಂತಿ ಕಾರ್ಯಕ್ರಮಗಳು ಕೇವಲ ಕಾಗದದ ಮೇಲಿನ ಆದೇಶವಾಗದೇ, ಜನರಿಗೆ ಅರ್ಥಪೂರ್ಣವಾಗಬೇಕು. ಇಲ್ಲದಿದ್ದರೆ ಇಂತಹ ನಿರ್ಲಕ್ಷ್ಯ ಮುಂದುವರೆದರೆ ಸಮಾಜದ ಮೌಲ್ಯಗಳು ಕುಸಿಯುವ ಅಪಾಯವಿದೆ ಎಂದು ಶಿವಾನಂದ ಸೌದಗಾರ ಎಚ್ಚರಿಕೆ ನೀಡಿದ್ದಾರೆ.
ವರದಿ. ವಿಠ್ಠಲ ಖೋಕಾಟೆ



















