ಬಳ್ಳಾರಿ / ಕಂಪ್ಲಿ : ಹಿಂದೂಗಳ ಪವಿತ್ರ ಆಚರಣೆಗಳಲ್ಲಿ ಒಂದಾದ ಹೋಳಿ ಹುಣ್ಣಿಮೆ ಹಬ್ಬದ ಅಂಗವಾಗಿ ಪಟ್ಟಣದ ವಿವಿಧೆಡೆಗಳಲ್ಲಿ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕಾಮಣ್ಣ ರತಿ ಮನ್ಮಥರ ಗೊಂಬೆಗಳನ್ನು ಪ್ರತಿಷ್ಠಾಪಿಸಿದ್ದು, ರಂಗು, ರಂಗಿನ ಹೋಳಿ ಹಬ್ಬದ ಆಚರಣೆಗಳು ಗರಿಗೆದರಿವೆ.
ತಾಲ್ಲೂಕಿನ ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಶುಕ್ರವಾರದಿಂದ ಐದು ದಿನಗಳ ಕಾಮ ರತಿ ಗೊಂಬೆಗಳನ್ನು ಪ್ರತಿಷ್ಠಾಪಿಸಿದ್ದು, ಹಬ್ಬದ ಹಾಸ್ಯದ ಪ್ರಸಂಗಗಳನ್ನು ಪ್ರದರ್ಶನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮತ್ತು ಸಾರ್ವಜನಿಕರ ಮನೆಗಳ ಮುಂದೆ ಪ್ರದರ್ಶನ ಮಾಡುತ್ತಾ ಬಾಯಿ, ಬಾಯಿ ಬಡಿದುಕೊಳ್ಳುತ್ತಿರುವ ದೃಶ್ಯಗಳು ಸಾಮಾನ್ಯವಾಗಿ ಕಂಡು ಬರುತ್ತಿವೆ.
ಸಾಮಾನ್ಯವಾಗಿ ಪೌರಾಣಿಕ ಕಾಮನೊಂದಿಗೆ (ಮನ್ಮಥ) ಪೌರಾಣಿಕ ರತಿಯನ್ನು ಪ್ರತಿಷ್ಠಾಪಿಸುವುದಂಟು. ಆದರೆ ಕಂಪ್ಲಿಯಲ್ಲಿ ವಿದೇಶಿ ಮಹಿಳೆಯೊಬ್ಬರು ರೈತನ ಸಂದರ್ಶನ ಮಾಡುವ ಕಾಮ ಮತ್ತು ರತಿಯನ್ನು ಪಟ್ಟಣದ ಕುರಹೀನಶೆಟ್ಟಿ ಸಮಾಜದ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ನೀಲಕಂಠೇಶ್ವರ ಕಾಮಣ್ಣ ಸೇವಾ ಸಮಿತಿಯವರು ಪ್ರತಿಷ್ಠಾಪಿಸಿರುವುದು ಪಟ್ಟಣವೂ ಸೇರಿದಂತೆ ಗ್ರಾಮೀಣ ಪ್ರದೇಶದ ಜನರನ್ನು ಆಕರ್ಷಿಸುತ್ತಿರುವುದರ ಜೊತೆಗೆ ಸಾರ್ವಜನಿಕರಲ್ಲಿ ನಗೆಯನ್ನು ತರಿಸುತ್ತಿದೆ.
ವಿದೇಶಿ ಮಹಿಳೆ ಕೊರಳಲ್ಲೊಂದು ಬ್ಯಾಗನ್ನು ಹಾಕಿಕೊಂಡು ಗ್ರಾಮೀಣ ಪ್ರದೇಶದ ರೈತನಾದ ಕಾಮಣ್ಣನ್ನು ಸಂದರ್ಶನ ಮಾಡುತ್ತಿರುವುದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಬೆಂಗಳೂರಿನ ರತಿ ಗೊಂಬೆಜೊತೆಗೆ ಆಧುನಿಕ ಉಡುಗೆಯನ್ನು ಖರೀದಿಸಲಾಗಿದೆ. ಹೋಳಿ ಹುಣ್ಣಮೆಯ ದಿನ ಅಂದರೆ ಮಾ.3ರಂದು ಬೇರೆ ಉಡುಗೆ ತೊಡುಗೆಯಲ್ಲಿ ಇದೇ ರತಿ ಕಾಮಣ್ಣರು ಕಂಗೊಳಿಸಲಿದ್ದಾರೆ. ನೀಲಕಂಠೇಶ್ವರ ದೇವಸ್ಥಾನ ಸಮಿತಿಯವರು ಈ ಹೋಳಿ ಹಬ್ಬದ ಆಚರಣೆಗೆ ಸಹಾಯ ನೀಡಿದ್ದಾರೆಂದು ಕಾಮಣ್ಣ ಸೇವಾ ಸಮಿತಿಯ ಸದಸ್ಯರಾದ ಜಿ.ಎಚ್.ಶ್ರೀಧರಗೌಡ ಬೂದಗುಂಪಿ ಶಿವರಾಜ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ್, ಕೆ.ವಿ. ಸಂದೀಪ ಸೇರಿದಂತೆ ಇತರೆ ಸದಸ್ಯರು ತಿಳಿಸಿದರು.
ವಿವಿಧೆಡೆಗಳಲ್ಲಿ ಕಾಮ ರತಿ ಪ್ರತಿಷ್ಠಾಪನೆ : ಪಟ್ಟಣದ ದೇವಾಂಗ ಪೇಟೆಯ ಮಡ್ಡಿಕಟ್ಟೆ, ವೀರತ್ ಪೇಟೆಯ ಬಸವೇಸ್ವರ ಗುಡಿ, ಮೇಲ್ಗಡೆ ಪೇಟೆ ಬನಶಂಕರಿ ದೇವಸ್ಥಾನ, ಪೇಟೆ ಬಸವೇಶ್ವರರ ತೇರಿನ ಮನೆ,ಕೋಟೆ ವೀರಭದ್ರೇಶ್ವರ ಗುಡಿ, ಅಮೃತಶಿಲಾ ರಾಮಚಂದ್ರ ದೇವಸ್ಥಾನ, ಆದೋನಿ ಮಸೀದಿ ಬಳಿಯ ಗುಗ್ರಿಕಟ್ಟೆ ಬಸವೇಶ್ವರ, ಸಕ್ಕರೆ ಕಾರ್ಖಾನೆ ಪ್ರದೇಶದಲ್ಲಿ ಕಾಮ ರತಿದೇವಿಯರ ಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗುತ್ತದೆ.
ಮಾ.3ರಂದು ರಾತ್ರಿ ಹೋಳಿ ಹುಣ್ಣಿಮೆ ದಿನ ಖಗ್ರಾಸ ಚಂದ್ರಗ್ರಹಣ ಇರುವುದರಿಂದ ಕಾಮ ರತಿಯರನ್ನು ದಹನ ಮಾಡುವುದಾಗಿ ಹಬ್ಬದ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಹುಣ್ಣಿಮೆಯ ಮರು ದಿನವಾದ ಮಾ.4ರಂದು ಹೋಳಿ ಹಬ್ಬದ ಪ್ರಮುಖ ಅಂಗವಾದ ಓಕಳಿ ಅಂದರೆ ರಂಗು ರಂಗಿನ ಬಣ್ಣದ ಹಬ್ಬ ಆರಂಭವಾಗುತ್ತದೆ.
ವರದಿ : ಜಿಲಾನಸಾಬ್ ಬಡಿಗೇರ್



















