ಬಳ್ಳಾರಿ / ಕಂಪ್ಲಿ : ಪಟ್ಟಣದ ಹೊರವಲಯದಲ್ಲಿ ಕಳೆದ ಮೂರು ದಿನಗಳ ಹಿಂದೆ ಹೊಸ ಬಡಾವಣೆಯೊಂದರಲ್ಲಿ ನಡೆದ ನಿಗೂಢ ಸ್ಪೋಟದ ಹಿನ್ನೆಲೆಯಲ್ಲಿ ಶನಿವಾರ ಬಳ್ಳಾರಿಯ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ತಂಡಗಳು ಭೇಟಿ ನೀಡಿ ಪರಿಶೀಲಿಸಿದರು.
ಕಳೆದ ಮೂರು ದಿನಗಳ ಹಿಂದೆ ಪಟ್ಟಣದ ಹೊಸಪೇಟೆ ಬೈಪಾಸ್ ರಸ್ತೆಯ ಶಿವಶಕ್ತಿ ಅಕ್ಕಿಗಿರಣಿ ಮುಂಭಾಗ ಗಾಯತ್ರಿ ಬಡಾವಣೆ ಪಕ್ಕದಲ್ಲಿ ಜನವಸತಿ ಇರುವ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣ ಮಾಡುತ್ತಿರುವ ನೂತನ ಬಡಾವಣೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಕುಣಿ ಆಗೆಯಲು ಯಾವುದೊ ವಸ್ತುವನ್ನು ಪರವಾನಿಗೆ ಇಲ್ಲದೆ ಉಪಯೋಗಿಸಿರುವುದು ಕಂಡು ಬಂದಿದ್ದು, ಬೃಹತ್ ಸ್ಪೋಟದಿಂದಾಗಿ ನಿವೇಶನದಲ್ಲಿ ಬೃಹತ್ ಗುಂಡಿ ಬಿದ್ದಿದ್ದು, ಸ್ಪೋಟದ ಶಬ್ಧಕ್ಕೆ ಅಕ್ಕಪಕ್ಕದ ನಿವಾಸಿಗಳು ಬೆಕ್ಕಸ ಬೆರಾಗಿದ್ದಾರೆ.
ಈ ಅನಿರೀಕ್ಷಿತ ಸ್ಪೋಟಕ್ಕೆ ಹೆದರಿದ ಸ್ಥಳೀಯರು ನೀಡಿದ ದೂರಿನ ಮೇರೆ ಬಳ್ಳಾರಿಯಿಂದ ಬಾಂಬ್ ನಿಷ್ಕ್ರಿಯ ದಳ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಾಯದ ಅಧಿಕಾರಿಗಳು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ಹೊರವಲಯದಲ್ಲಿ ಸುಮಾರು 2.46 ಎಕರೆ ಜಮೀನಿನಲ್ಲಿ ಸೈಯದ್ ಇಮ್ರಾನ್ ಮತ್ತು ರೇವಂತಕುಮಾರ್ ಜಂಟಿಯಾಗಿ ಬಡಾವಣೆ ಅಭಿವೃದ್ಧಿಗೊಳಿಸುವ ಸಮಯದಲ್ಲಿ ಜಿಲೆಟಿನ್ ಕಡ್ಡಿಗಳನ್ನು ಟ್ಯಾಕ್ಟರ್ ಬ್ಯಾಟರಿಯನ್ನು ಉಪಯೋಗಿಸಿ ಸ್ಪೋಟಿಸಿರುವುದರಿಂದ ಭಾರಿ ಪ್ರಮಾಣದ ಶಬ್ಧ ಉಂಟಾಗಿ ಬೃಹತ್ ಗುಂಡಿ ಬಿದ್ದಿದೆ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ. ಬಡಾವಣೆ ಅಭಿವೃದ್ಧಿಗೊಳಿಸುತ್ತಿರುವರು ಯಾವುದೇ ಪರವಾನಿಗೆ ಪಡೆಯದೇ ಈ ರೀತಿ ಸ್ಪೋಟಕ ಬಳಸಿದ್ದಾರೆಂದು ತಿಳಿದು ಬಂದಿದ್ದು, ಕಂಪ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಪೋಟಕ್ಕೆ ಬಳಸಿದ ಟ್ರಾಕ್ಟರ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಸಮಯದಲ್ಲಿ ಕಂಪ್ಲಿ ಪಿ. ಐ ಕೆ.ಬಿ.ವಾಸುಕುಮಾರ್, ಪಿಎಸ್ಐ ಅವಿನಾಶ್ ಕಾಂಬಳೆ, ವಿಧಿ ವಿಜ್ಞಾನ ಪ್ರಯೋಗಾಲಾಯ ಮತ್ತು ಬಾಂಬ್ ನಿಷ್ಕ್ರಿಯ ದಳ ಹಾಗೂ ಪೊಲೀಸ್ ಸಿಬ್ಬಂದಿಗಳು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















