ಒಬ್ಬಾವ ಸತ್ತು ನರಕಕ್ಕ ಹೋದ.ಅಲ್ಲಿ ನೋಡ್ತಾನ ಭೂಮಿ ಮ್ಯಾಲಿರೊ ಪ್ರತಿಯೊಂದು ದೇಶದ ಹೆಸರಿನ ಮೇಲೆ ಒಂದೊಂದು ನರಕ ಇದ್ವು.ಸತ್ತು ನರಕಕ್ಕ ಹೋದವರು ಯಾವ ದೇಶದ ನರಕವನ್ನಾದ್ರೂ ಆರಿಸಿಕೊಂಡು ಅದರೊಳಗ ಹೋಗಬಹುದು ಅನ್ನುವ ನಿಯಮ ಇತ್ತು.
ಇವನ ಕಣ್ಣಿಗೆ ಅಮೇರಿಕಾದ ನರಕ ಅಂತ ಬರೆದಿದ್ದ ಬೋರ್ಡ್ ಕಾಣಿಸ್ತು.ಅಮೇರಿಕಾ ದೇಶಕ್ಕಂತೂ ಹೋಗಲಿಕ್ಕಾಗಲಿಲ್ಲ ಕೊನಿಗೆ ಆ ದೇಶದ ನರಕದೊಳಗಾದ್ರೂ ಹೋಗೋಣಂತ್ಹೇಳಿ,ಅದರ ದ್ವಾರದ ಮುಂದಿದ್ದ ದ್ವಾರಪಾಲಕನಿಗೆ ಹೋಗಿ ‘ನಾನು ಈ ನರಕದೊಳಗ ಹೋಗಬಹುದಾ?’
ದ್ವಾ.ಪಾ: ಓ ಅವಶ್ಯವಾಗಿ
ಇವಾ:ಏನೇನ್ ಶಿಕ್ಷೆ ಕೊಡತಾರಪ ಈ ಅಮೇರಿಕಾದ ನರಕದೊಳಗ?
ದ್ವಾ ಪಾ: ಅಂಥಾ ಖಾಸ ಏನೂ ಇಲ್ರಿ.ಮೊದಲಿಗೆ ನಿಮಗ ಇಲೆಕ್ಟ್ರಿಕ್ ಕುರ್ಚಿ ಮ್ಯಾಲೆ ಕುಂದರಸಿ ಒಂದು ತಾಸು ಕರೆಂಟ್ ಶಾಕ್ ಹೊಡಿಸ್ತಾರ.ಅದಾದ ಮ್ಯಾಲೆ ಒಂದು ತಾಸು ಚೂಪನ ಮೊಳೆ ಇರೊ ಹಾಸಿಗಿ ಮ್ಯಾಲ ನಿಮ್ಮನ್ನ ಮಲಗಿಸ್ತಾರ.ಇದು ಮುಗದ ಮ್ಯಾಲೆ ಒಂದು ತಾಸು ಒಬ್ಬಾವ ದೈತ್ಯನಂತಾವ ಬಂದು ನಿಮ್ಮ ಮೊಳೆ ಚುಚ್ಚಿ ಗಾಯ ಆದ ನಿಮ್ಮ ಬೆನ್ನಿನ ಮ್ಯಾಲೆ ಐವತ್ತು ಛಡಿ ಏಟು ಕೊಡ್ತಾನ..
ಇದಿಷ್ಟು ಕೇಳಿ ಆ ಮನುಷ್ಯ ಗಾಬರಿಯಾಗಿ ಇಲ್ಲಿ ಬ್ಯಾಡ ರಷ್ಯಾದ ನರಕದೊಳಗ ಹೋಗಿ ನೋಡೋಣ ಅಂತ ಅಲ್ಲಿಗೆ ಹೋಗಿ ಅಲ್ಲಿಯ ದ್ವಾರಪಾಲಕನಿಗೆ,ಇಲ್ಲಿ ಏನೇನು ಶಿಕ್ಷೆ ಕೊಡತಾರಪ್ಪ ಅಂತ ಕೇಳಿದ್ದಕ್ಕ,ಅಲ್ಲಿಯೂ ಅಮೇರಿಕಾದ ನರಕದಲ್ಲಿದ್ದಂತೆಯೇ ಶಿಕ್ಷೆಗಳಿದ್ದವು.
ಈ ಮನುಷ್ಯ ಹಿಂಗ ಒಂದೊಂದ ದೇಶದ ನರಕದ ಮುಂದೆ ನಿಂದರೋದು ಅವಾ ದ್ವಾರಪಾಲಕ ಹೇಳಿದ್ದು ಕೇಳೋದು ಮತ್ತ ಮುಂದ ಹೋಗೋದು ಮಾಡತಿದ್ದ.
ಎಲ್ಲಾ ಕಡೆಯೂ ಒಂದೇ ರೀತಿಯ ಶಿಕ್ಷೆಗಳಿದ್ವು.
ಸ್ವಲ್ಪ ದೂರದಾಗ ತಿರುಪತಿ ತಿಮ್ಮಪ್ಪನ ಗುಡಿ ಮುಂದ ಹೆಂಗ ಸರತಿ ಸಾಲು ಇರತದೊ ಹಂಗ ದೊಡ್ಡದಾದ ಜನರ ಸರತಿ ಸಾಲು ನಿಂತಿತ್ತು.
ಇವಾ ಹೋಗಿ ನೋಡಿದ.ಬೋರ್ಡಿನ ಮ್ಯಾಲೆ ಭಾರತದ ನರಕ ಅಂತ ಬರೆದಿತ್ತು.
ಇವಾ ಅಲ್ಲಿ ದ್ವಾರಪಾಲಕನಿಗೆ, ನಮ್ ಭಾರತದ ನರಕದೊಳಗ ಏನೇನ್ ಶಿಕ್ಷೆ ಕೊಡತಾರ ಅಂತ ಕೇಳಿದ.
ದ್ವಾ ಪಾ:ಮೊದಲಿಗೆ ನಿಮಗ ಎಲೆಕ್ಟ್ರಿಕ್ ಕುರ್ಚಿ ಮ್ಯಾಲೆ ಕೂಡಿಸಿ ಒಂದು ತಾಸು ಕರೆಂಟ್ ಶಾಕ್ ಹೊಡಸ್ತಾರ್ರಿ.ಆಮೇಲ ಚೂಪಾದ ಮೊಳೆ ಇರೊ ಹಾಸಿಗಿ ಮ್ಯಾಲೆ ಒಂದು ತಾಸು ನಿಮ್ಮನ್ನ ಮಲಗಿಸ್ತಾರ.ಅದಾದ ಮ್ಯಾಲೆ ಒಬ್ಬ ದೈತ್ಯಾಕಾರದವ ಬಂದು ಗಾಯ ಆಗಿರೊ ನಿಮ್ಮ ಬೆನ್ನಿನ ಮ್ಯಾಲೆ ಐವತ್ತು ಛಡಿ ಏಟು ಕೊಡ್ತಾನ..
ಇವಾ:ಅಲ್ಲೋ ಮಾರಾಯ ಎಲ್ಲಾ ದೇಶದ ನರಕದೊಳಗೂ ಸೇಮ್ ಟು ಸೇಮ್ ಶಿಕ್ಷೆಗಳದಾವ.ಆದರೆ ಆ ದೇಶಗಳ ನರಕಗಳ ಮುಂದೆ ಒಬ್ರೂ ಇಲ್ಲ.ಆದರ ನಮ್ ಭಾರತದ ನರಕದ ಮುಂದ ನೋಡಿದರ ಯಾಪರಿ ಜನ ಐತಲ್ಲೋ ಮಾರಾಯ?ಏನಿದರ ಗುಟ್ಟು?
ದ್ವಾ ಪಾ: ಓ ಅದಾ.ನೋಡ್ರೀ ಎಲೆಕ್ಟ್ರಿಕ್ ಕುರ್ಚಿ ಮ್ಯಾಲೆ ಕೂಡಿಸಿ ಕರೆಂಟ್ ಹೊಡಿಸಬೇಕಂದ್ರ ಕರೆಂಟೇ ಇರೋದಿಲ್ರಿ.ಒಂದು ಕ್ಷಣ ಬಂದ್ರ ತಾಸುಗಟ್ಲೇ ಕರೆಂಟ್ ಇರೋದಿಲ್ಲ.
ಮೊಳೆ ಹಾಸಿಗ ಮ್ಯಾಲಿದ್ದ ಮೊಳೆಗಳನ್ನೆಲ್ಲಾ ಯಾರ್ಯಾರೋ ಕದ್ಕೊಂಡ್ ಹೋಗಿಬಿಟ್ಟಾರ.ಇನ್ನ ಛಡಿ ಏಟು ಹೊಡೆಯೊ ಮನುಷ್ಯಾ ಮೊದಲು ಸರಕಾರಿ ನೌಕರಿ ಮಾಡತಿದ್ದ.ಮುಂಜಾನೆ ಹತ್ತು ಗಂಟೆಗೆ ಬಂದು ಹಾಜರಿ ಪುಸ್ತಕದೊಳಗ ಸಹಿ ಹಾಕಿದವನ ಚಹಾ ಕುಡಿಯೋದಕ್ಕೊ,ನಾಷ್ಟಾ ಮಾಡೋದಕ್ಕೋ ಹೋಗಿ ಬಿಡತಾನ.ಹೊಳ್ಳಿ ಬರೋದರೊಳಗ ಊಟದ ಟೈಮಾಗಿರತಾದ ಮತ್ತ ಊಟಕ್ಕಂತ ಹೋಗಿಬಿಡತಾನ.ಛಡಿ ಏಟ ಹೊಡಿಬೇಕಾದರ ಎರಡು ಏಟು ಹೊಡದು ಐವತ್ತು ಅಂತ ರಿಜಿಸ್ಟರ್ ಬುಕ್ಕಿನೊಳಗ ಲೆಕ್ಕ ಬರೀತಾನ..
ಅವಾ ಇಷ್ಟ ಹೇಳಿದ್ದೇ ತಡ ಇವಾ ಹೋಗಿ ಅಲ್ಲಿ ನಿಂತವರ ಹಿಂದ ಪಾಳೆ ಹಚ್ಚಿದ…




















