ರಾಜಕೀಯ ಷಡ್ಯಂತ್ರ ಮುಂದುವರೆದರೆ ಉಗ್ರ ಹೋರಾಟದ ಎಚ್ಚರಿಕೆ
ಗುರುಮಠಕಲ್: ಶಹಾಪುರ ತಾಲೂಕಿನ ಮಹಲ್ ರೋಜಾ ದೇವಸ್ಥಾನದ ಯುವ ಧರ್ಮಗುರು ಮಲ್ಲಿಕಾರ್ಜುನ ಮುತ್ಯಾ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ನಿರಾಧಾರವಾಗಿದ್ದು, ಇದು ರಾಜಕೀಯ ಷಡ್ಯಂತ್ರದ ಭಾಗವಾಗಿದೆ ಎಂದು ಮಲ್ಲಿಕಾರ್ಜುನ ಮುತ್ಯಾ ಭಕ್ತ ಮಂಡಳಿ ಹಾಗೂ ಕೋಲಿ ಸಮಾಜದ ಮುಖಂಡರು ಆರೋಪಿಸಿದ್ದಾರೆ.
ಪಟ್ಟಣದ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಗುರುವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಕೋಲಿ ಸಮಾಜದ ಮುಖಂಡ ಅನಂತಪ್ಪ ಯದ್ಲಾಪೂರ್ ಕೂಡಲೇ ಮಲ್ಲಿಕಾರ್ಜುನ ಮುತ್ಯಾ ಅವರನ್ನು ಆರೋಪ ಮುಕ್ತಗೊಳಿಸಿ, ಸುಳ್ಳು ಆರೋಪ ಮಾಡಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇಲ್ಲವಾದರೆ ಕೋಲಿ ಸಮಾಜ ಮತ್ತು ಮಲ್ಲಿಕಾರ್ಜುನ ಮುತ್ಯಾ ಭಕ್ತರ ವತಿಯಿಂದ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೋಲಿ ಸಮಾಜದ ಮುಖಂಡೆ ಶ್ರೀಮತಿ ಅಮೃತಮ್ಮ ಬೋರಬಂಡಾ, ಮಲ್ಲಿಕಾರ್ಜುನ ಮುತ್ಯಾರವರು ತಮ್ಮ ತಂದೆ ಹನುಮಂತರಾಯ ಮುತ್ಯಾ ಅವರ ನಂತರ ಪೀಠವನ್ನು ಅಲಂಕರಿಸಿ ಅನೇಕ ಭಕ್ತರ ನಡುವೆ ಪವಾಡ ಪುರುಷರಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ಇವರ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವು ಯಾವುದೇ ವಾಸ್ತವಾಂಶವಿಲ್ಲದೆ ಮಾಡಿರುವ ನಿರಾಧಾರ ಆರೋಪವಾಗಿದ್ದು, ಅವರ ವರ್ಚಸ್ಸನ್ನು ಕುಗ್ಗಿಸಲು ಕೆಲವರು ನಡೆಸಿರುವ ಹುನ್ನಾರ ಎಂದು ಕಿಡಿಕಾರಿದರು.
ಹಿರಿಯ ಮುಖಂಡ ಸೂರ್ಯನಾರಾಯಣ ನೀರೆಟಿ ಮಾತನಾಡಿ ಇತ್ತೀಚೆಗೆ ಹಿಂದೂ ಧರ್ಮದ ದೇವಸ್ಥಾನಗಳ ಕುರಿತು ಬೇಕಂತಲೇ ಅಪಪ್ರಚಾರ ನಡೆಸಿ ಭಕ್ತರ ನಂಬಿಕೆಯನ್ನು ಕುಂದಿಸುವ ಕಾರ್ಯಗಳು ನಡೆಯುತ್ತಿವೆ. ನಾವು ಯಾವುದೇ ಕಾರಣಕ್ಕೂ ಇಂತಹ ಷಡ್ಯಂತ್ರಗಳಿಗೆ ಬಲಿಯಾಗಬಾರದು ಎಂದು ಹೇಳಿದರು.
ಈ ವೇಳೆ ಕೋಲಿ ಸಮಾಜದ ಅಧ್ಯಕ್ಷ ಅಶೋಕ್ ಸಂಜನೊಳ ಸೇರಿದಂತೆ ಕೋಲಿ ಸಮುದಾಯದ ಮುಖಂಡರು, ಪ್ರಕರಣವನ್ನು ಸುಳ್ಳು ಎಂದು ಆರೋಪಿಸಿ ತಪ್ಪಿದಸ್ತರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು ಇಲ್ಲದಿದ್ದರೆ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನ್ಯಾಯಕ್ಕಾಗಿ ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಶರಣಪ್ಪ ಧರ್ಮಪುರ್, ತಿಮ್ಮಪ್ಪ ನಿಂಗವೊಳ್, ಕನ್ನಯ್ಯ ಪಡಿಗೆ, ಬಸ್ಸಣ್ಣ ಅರಬಿಂಜರ್, ಶ್ರೀನಿವಾಸ್ ಗಾಳ, ನರಸಿಮುಲು ಗಂಗನೊಳ, ರಾಮುಲು ಕೊಡಗಂಟಿ, ಶೇಷಪ್ಪ ಬುರ್ಜು, ಮಹೇಶ್ ಗಡ್ಡಂ, ಸಾಬಣ್ಣ ಮನ್ನೇ ಹಾಗೂ ಸಮಾಜದ ಮುಖಂಡರು ಭಾಗವಹಿಸಿದ್ದರು.
ವರದಿ: ಜಗದೀಶ್ ಕುಮಾರ್ ಭೂಮಾ




















