
ಬೆಂಗಳೂರು: ಬೆಂಗಳೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ ಇದರ ಲೆಕ್ಕಾಧಿಕಾರಿಗಳ ಸಂಘದ ಭವನದಲ್ಲಿ ಹಲವು ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗಳಿಸಿ ಭಾರತಕ್ಕೆ ಕೀರ್ತಿ ತಂದ ದೀಪಾ ಅಜಯ್ ಹಾಗೂ ಪ್ರಕಾಶಕಿ, ಪರಿಸರ ಹೋರಾಟಗಾರ್ತಿ ಅವಳ ತಾಯಿ ವಿಶಾಲಕ್ಷಿ ಶರ್ಮ, ಹಿಂದೂಸ್ತಾನದ ಏಕೈಕ ಮಹಿಳಾ ಜಲ ತರಂಗ ಕಲಾವಿದೆ ಶಶಿಕಲಾ ದಾನಿ ಹಾಗೂ ಭರತನಾಟ್ಯ ಕಲಾವಿದೆ ಅವರ – ಸೊಸೆ ವಂದನ ರಾಣಿ ಹಾಗೂ ಖ್ಯಾತ ಗಾಯಕಿ-ಲೆಕ್ಕ ಪರಿಶೋಧಕಿ ಸಹೋದರಿಯರಾದ ಅಂಜನಾ ಶೆಣೈ – ಅನುಪಮಾ ಶೆಣೈ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ನಾಡಿನ ಶ್ರೇಷ್ಠ ಸಂಸ್ಕೃತ ಹಾಗೂ ಸಂಗೀತ ವಿದ್ವಾಂಸೆ ಡಾ. ಟಿ ಎಸ್ ಸತ್ಯವತಿ ಅವರು ಯೋಗ ಹಾಗೂ ಸಂಗೀತ ಕುರಿತು ಪಾಂಡಿತ್ಯಪೂರ್ಣ ಉಪನ್ಯಾಸ ನೀಡಿದರು. ಖ್ಯಾತ ವಿಜ್ಞಾನಿ, ಲೇಖಕಿ ನೇಮಿಚಂದ್ರ ಅವರು ಮುಟ್ಟು ನಿಂತ ಮೇಲೆ… ಹೆಣ್ಣು ಮಕ್ಕಳಿಗಾಗಿ, ಅವರ ದೈಹಿಕ ಸಮಸ್ಯೆಗಳ ಕುರಿತು, ಔಷಧಿಗಳ ದುಷ್ಪರಿಣಾಮಗಳ ಕುರಿತು ವಿಶ್ಲೇಷಣಾ ಪೂರ್ವಕ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶ್ರೇಷ್ಠ ವಿಜ್ಞಾನಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಡಾ. ಶುಭಾ ವಿ. ಅವರು ತಮ್ಮ ಸ್ವಾರಸ್ಯಕರವಾದ ಅನುಭವಗಳನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಜರುಗಿದ ಗಮಕವಾಚನ- ಸತ್ಯರೂಪಕಗಳು ಜನಮನ ಸೂರೆ ಗೊಂಡವು.
ಕಾರ್ಯಕ್ರಮದಲ್ಲಿ ಲೆಕ್ಕ ನಿಯಂತ್ರಣಾಧಿಕಾರಿ ಬಿ ಕೆ ಗಾಯತ್ರಿ, ಲೆಕ್ಕಾಧಿಕಾರಿ ಭಾಗ್ಯ ಎ. ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ, ಶಿವಮೊಗ್ಗ




















