
ಹೊನ್ನಾವರ : ಪಟ್ಟಣದ ಹೃದಯ ಭಾಗದಲ್ಲಿರುವ ಬಸ್ ನಿಲ್ದಾಣದಿಂದ ಕಿಂತಾಲ್ ಕೇರಿ ಮಾರ್ಗವಾಗಿ ಸಾಗುವ ಸಿ.ಸಿ. ರಸ್ತೆ ವರ್ಷಗಳಿಂದ ದುರಸ್ತಿ ಕಾಣದೆ ಸಂಪೂರ್ಣ ಕುಸಿದು, ಇದೀಗ ನೇರವಾಗಿ ಸಾರ್ವಜನಿಕರ ಜೀವ ಕಸಿಯುವ ‘ಮರಣ ಬಲೆ’ಯಾಗಿ ಪರಿಣಮಿಸಿದೆ. ಕುಸಿದ ಮೇಲ್ಮೈ, ಇವುಗಳೆಲ್ಲವೂ ದಿನನಿತ್ಯ ಅಪಘಾತಗಳಿಗೆ ಕಾರಣವಾಗುತ್ತಿದ್ದು, ಬೈಕ್ ಸವಾರರು ಮತ್ತು ಪಾದಚಾರಿಗಳು ಪ್ರತಿ ಕ್ಷಣವೂ ಜೀವಭಯದಲ್ಲಿ ಸಂಚರಿಸುವಂತಾಗಿದೆ.
ಸಮಸ್ಯೆ ಗಂಭೀರತೆಯ ತುದಿಗೆ ತಲುಪಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ‘ನೋಡಿದಂತೆ ಕಾಣಿಸಿ, ಮಾಡದಂತೆ ಇರುವ’ ಧೋರಣೆ ಮುಂದುವರಿಸಿರುವುದು ಜನರ ಕೋಪವನ್ನು ಉಕ್ಕಿಸಿಸಿದೆ. 2022ರಲ್ಲಿ ಸಲ್ಲಿಸಿದ ಮನವಿ ಬಳಿಕವೂ ಯಾವುದೇ ಶಾಶ್ವತ ಕ್ರಮ ಕೈಗೊಳ್ಳಲಾಗಿಲ್ಲ. ತಾಲೂಕು ದಂಡಾಧಿಕಾರಿಗಳಾದ ಪ್ರವೀಣ್ ಕಾರಂಡೆ ಸ್ಥಳಕ್ಕೆ ಭೇಟಿ ನೀಡಿ ಸೂಚನೆ ನೀಡಿದರೂ, ಆ ಆದೇಶಗಳು ಕಡತಗಳ ಗುಂಡಿಯಲ್ಲಿ ಹೂತು ಹೋಗಿ, ನೆಲಮಟ್ಟದಲ್ಲಿ ಶೂನ್ಯ ಕಾರ್ಯವೇ ಕಂಡುಬಂದಿದೆ.
ಕರುನಾಡ ವಿಜಯ ಸೇನೆಯ ಜಿಲ್ಲಾಧ್ಯಕ್ಷ ವಿನಾಯಕ ಆಚಾರಿ ಸೇರಿದಂತೆ ಸ್ಥಳೀಯರು ಅನೇಕ ಬಾರಿ ಅಧಿಕಾರಿಗಳ ಕಚೇರಿ ಬಾಗಿಲು ತಟ್ಟಿದರೂ, ಪ್ರತಿಕ್ರಿಯೆಯಿಲ್ಲದ ಆಡಳಿತ ಜನರನ್ನು ನಿರಾಶೆಯ ಅಂಚಿಗೆ ತಳ್ಳಿದೆ.
“ಎಷ್ಟು ಅಪಘಾತಗಳು ಆಗಬೇಕು? ಎಷ್ಟು ಜೀವ ಹೋದರೆ ತೃಪ್ತಿ?”
“ಶೀಘ್ರದಲ್ಲೇ ದುರಸ್ತಿ” ಎಂಬ ಖಾಲಿ ಭರವಸೆಯನ್ನು ಹಳೆಯ ಕ್ಯಾಸೆಟ್ನಂತೆ ಮತ್ತೆ ಮತ್ತೆ ಹೇಳುತ್ತಾ ಕಾಲಹರಣ ಮಾಡುತ್ತಿರುವ ತಾಲೂಕು ದಂಡಾಧಿಕಾರಿಗಳು ಮತ್ತು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗಳ ವಿರುದ್ಧ ಜನರ ಆಕ್ರೋಶ ಸ್ಫೋಟಗೊಂಡಿದೆ.
ಪಟ್ಟಣದ ಮಧ್ಯದಲ್ಲೇ ಮರಣ ಬಲೆ ನಿರ್ಮಾಣವಾಗಿದ್ದರೂ ಕ್ರಮ ಕೈಗೊಳ್ಳದಿರುವುದು—ಇದು ಕೇವಲ ನಿರ್ಲಕ್ಷ್ಯವಲ್ಲ, ಜನರ ಜೀವದ ಮೇಲೆ ನಡೆಸುತ್ತಿರುವ ನಿರ್ದಯ ಪ್ರಯೋಗ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅನಾಹುತವಾದ ಬಳಿಕ ‘ಜಾಗೃತ’ ಎನ್ನುವ ನಾಟಕ ಆಡುವುದು ಅಧಿಕಾರಿಗಳ ಪದ್ಧತಿ ಆಗಿಬಿಟ್ಟಿದೆ ಎಂಬ ಟೀಕೆ ಕೇಳಿಬರುತ್ತಿದೆ. ಇನ್ನೂ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಮುಂದಿನ ಅನಾಹುತಗಳಿಗೆ ನೇರ ಹೊಣೆ ಅಧಿಕಾರಿಗಳದ್ದೇ ಆಗಲಿದೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ವರದಿ: ವಿನಾಯಕ ಆಚಾರಿ, ಹೊನ್ನಾವರ




















