
ಬಳ್ಳಾರಿ / ಕಂಪ್ಲಿ : ಸಿಲಿಂಡರ್ ಸೋರಿಕೆಯ ಬೆಂಕಿ ಅವಘಡಕ್ಕೆ ಬೆಳ್ಳಿ, ಬಂಗಾರ ಸೇರಿದಂತೆ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ಸುಟ್ಟು ಭಸ್ಮವಾದ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ 4ನೇ ವಾರ್ಡಿನ ಕೆಂಚಮ್ಮ ಗುಡಿ ಬಳಿಯ ಹರಿಜನ ಕಾಲೋನಿಯಲ್ಲಿರುವ ನಿವಾಸಿ ಜಿ.ಯಲ್ಲಪ್ಪ ಎಂಬುವರ ಶೆಡ್ಡಿನ ಮನೆಯಲ್ಲಿ ಸೋಮವಾರ ಬೆಳಿಗ್ಗೆ 9 ಗಂಟೆಗೆ ಸಿಲಿಂಡರ್ ಸೋರಿಕೆಯಾಗಿದೆ. ಸೋರಿಕೆಯಿಂದ ಉದ್ಭವಗೊಂಡ ಬೆಂಕಿ ಧಗಧಗನೇ ಉರಿಯಲು ಆರಂಭಿಸಿದೆ. ಮನೆಯಲ್ಲಿದ್ದ ಯಲ್ಲಪ್ಪ ಅವರ ಪತ್ನಿ ಲಲಿತಮ್ಮ, ಮೂರು ಜನ ಮಕ್ಕಳು ಕೂಡಲೇ ಎಚ್ಚೆತ್ತುಕೊಂಡು ತಗಡಿನ ಶೆಡ್ನಿಂದ ಹೊರಗಡೆ ಬಂದಿದ್ದಾರೆ. ನಂತರ ಉರಿ ಬೆಂಕಿ ಶೆಡ್ ತುಂಬಾ ಆವರಿಸಿಕೊಂಡು, ಟಿ.ವಿ, ಫ್ರೀಜ್, 1 ಲಕ್ಷ ನಗದು ಹಣ, ನಾಲ್ಕೈದು ತೊಲೆ ಬೆಳ್ಳಿ, ಎರಡು ತೊಲೆ ಬಂಗಾರ, ದವನಧಾನ್ಯ, ಪಾತ್ರೆಗಳು, ಮಂಚ, ಬಟ್ಟೆ ಸೇರಿದಂತೆ ನಾನಾ ಸಾಮಾಗ್ರಿಗಳು ಸುಟ್ಡು ಭಸ್ಮವಾಗಿವೆ. ಶೆಡ್ ಸಂಪೂರ್ಣವಾಗಿ ಸುಟ್ಟು ಕರಕಲವಾಗಿದೆ. ಶೆಡ್ನಲ್ಲಿದ್ದ ತಾಯಿ, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನಾ ಸ್ಥಳಕ್ಕೆ ಗಂಗಾವತಿ ಅಗ್ನಿ ಶಾಮಕದಳದವರು ಭೇಟಿ ನೀಡಿ, ಬೆಂಕಿ ನಂದಿಸಿದ್ದಾರೆ. ಅಷ್ಟರೊಳಗೆ ಲಕ್ಷಾಂತರ ಮೌಲ್ಯಾದ ಬೆಳ್ಳಿ, ಬಂಗಾರ ಸೇರಿದಂತೆ ನಾನಾ ಸಾಮಾಗ್ರಿಗಳು ಬೆಂಕಿಗಾಹುತಿಯಾಗಿವೆ. ತದನಂತರ ಶಾಸಕ ಜೆ.ಎನ್.ಗಣೇಶ ಸ್ಥಳಕ್ಕೆ ಭೇಟಿ, ಪರಿಶೀಲಿಸಿದ ನಂತರ ನಷ್ಟಕ್ಕೊಳಗಾದ ಯಲ್ಲಪ್ಪ ಕುಟುಂಬಕ್ಕೆ ಸ್ಥಳದಲ್ಲೇ 25 ಸಾವಿರ ನಗದು ಪರಿಹಾರ ನೀಡಿ, ಮುಂದಿನ ದಿನದಲ್ಲಿ ಮನೆ ಕಟ್ಟಿಸಿಕೊಡುವ ಭರವಸೆ ನೀಡಿದರು.
ವಾರ್ಡಿನ ಮಾಜಿ ಸದಸ್ಯ ಕೆ.ಎಸ್.ಚಾಂದ್ ಬಾಷಾ ಭೇಟಿ ನೀಡಿ, ಸಿಲಿಂಡರ್ ಸೋರಿಕೆಯಿಂದ ಸಾಮಾಗ್ರಿಗಳು ಸುಟ್ಟು ಹೋಗಿದ್ದು, ಜೀವನ ನಿರ್ವಹಣೆ ಕಷ್ಟಕರವಾಗಿದೆ. ಆದ್ದರಿಂದ ಮನೆ ನಿರ್ಮಾಣಕ್ಕಾಗಿ 50 ಚೀಲ ಸಿಮೆಂಟ್ ಒದಗಿಸುವ ಜೊತೆಗೆ 25 ಸಾವಿರ ಪರಿಹಾರ ನೀಡಲಾಗುವುದು ಎಂದರು.
ನಷ್ಟಕೊಳಗಾದ ನಿವಾಸಿ ಜಿ.ಯಲ್ಲಪ್ಪ ಮಾತನಾಡಿ, ದಿನ ನಿತ್ಯದ ದುಡಿಮೆಯಿಂದಾಗಿ ಸಣಾಪುರಕ್ಕೆ ತೆರಳಿದ್ದೆ. ಮನೆಯಲ್ಲಿ ಸಿಲಿಂಡರ್ ಅವಘಡ ಸುದ್ದಿ ತಿಳಿದ ತಕ್ಷಣ ಅಲ್ಲಿಂದ ಓಡೋಡಿ ಬಂದಿದ್ದೇನೆ. ಅಷ್ಟರೊಳಗೆ ಮನೆ ಶೆಡ್ ಸಂಪೂರ್ಣವಾಗಿ ಬೆಂಕಿಗೆ ಸುಟ್ಟಿತ್ತು. ಬೆಳಿಗ್ಗೆ 9ಗಂಟೆ ಸುಮಾರಿಗೆ ಪತ್ನಿ ಲಲಿತಮ್ಮ, ಮೂರು ಜನ ಮಕ್ಕಳು ಮನೆಯಲ್ಲಿರುವಾಗ ಸಿಲಿಂಡರ್ ಸೋರಿಕೆಯಾಗಿದೆ. ಪತ್ನಿ, ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಬೆಂಕಿ ಅವಘಡದಲ್ಲಿ ಒಂದು ಲಕ್ಷ ರೂ.ಗಳ ನಗದು ಹಣ, ನಾಲ್ಕೈದು ತೊಲೆ ಬೆಳ್ಳಿ, ಎರಡು ತೊಲೆ ಬಂಗಾರ, ಫ್ರೀಜ್, ಟಿವಿ ಸೇರಿದಂತೆ ಲಕ್ಷಾಂತರ ಮೌಲ್ಯದ ಸಾಮಾಗ್ರಿಗಳು ನಷ್ಟವಾಗಿದ್ದು, ಮುಂದಿನ ಜೀವನ ನಿರ್ವಹಣೆ ಕಷ್ಟಕರವಾಗಿದೆ. ನಾನು ಬಡವನಾಗಿದ್ದು, ಸರ್ಕಾರದ ಮಟ್ಟದಲ್ಲಿ ನಷ್ಟ ಪರಿಹಾರ ಒದಗಿಸಿಕೊಡಬೇಕೆಂದು ಮನವಿ ಮಾಡಿದರು.
ವರದಿ : ಜಿಲಾನಸಾಬ್ ಬಡಿಗೇರ್



















