
ಬೆಳಗಾವಿ : ಕುರಿ ಕಾಯುವ ಕೆಲಸದ ಹಣದ ವಿಚಾರಕ್ಕೆ ವ್ಯಕ್ತಿಯ ಭೀಕರ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದ ಫಕ್ಕೀರಪ್ಪ ಕಿರಕಸಾಲಿ (38) ಕಾಣೆಯಾಗಿ ದೊಡವಾಡ ಗ್ರಾಮದ ರುದ್ರವ್ವ ಬಸಪ್ಪ ಹೆಬ್ಬಳ್ಳಿ ಅವರ ಮೆಕ್ಕೆಜೋಳ ಬೆಳೆ ಬೆಳೆದ ಜಮೀನಿನಲ್ಲಿನ ಹುಣಸೆ ಮರದ ಬಳಿ ಶವವಾಗಿ ಪತ್ತೆಯಾಗಿದ್ದರು. ಹಾಲಪ್ಪ, ಮಂಜುನಾಥ, ಅರ್ಜುನ ಕೊಲೆ ಮಾಡಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತನ ಪತ್ನಿ ನೀಲಮ್ಮ ಕಿರಕಸಾಲಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ತೀವ್ರಗೊಳಿಸಿದ್ದರು. ಸಿಸಿ ಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಆರೋಪಿಗಳಾದ ಹಾಲಪ್ಪ ಜವಳಿ ಹಾಗೂ ಮಂಜುನಾಥ ತಳವಾರ ಅವರು ಫಕ್ಕೀರಪ್ಪನನ್ನು ಕರೆದುಕೊಂಡು ಹೋಗಿರುವುದು ಬೆಳಕಿಗೆ ಬಂದಿತ್ತು.
ತನಿಖೆ ವೇಳೆ ಫಕ್ಕೀರಪ್ಪನು ಕುರಿ ಕಾಯುವ ಕೆಲಸಕ್ಕೆ ಆರೋಪಿಗಳಿಂದ 10 ಸಾವಿರ ರೂ. ಪಡೆದುಕೊಂಡು ಬಳಿಕ ಕೆಲಸ ಬಿಟ್ಟು ಮನೆಗೆ ತೆರಳಿದ್ದ ವಿಚಾರಕ್ಕೆ ವೈಷಮ್ಯ ಉಂಟಾಗಿತ್ತು ಎಂಬುದು ಗೊತ್ತಾಗಿದೆ.
ಮೇ 28 ರಂದು ರಾತ್ರಿ ಆರೋಪಿಗಳು ಹಾಗೂ ಫಕ್ಕೀರಪ್ಪ ಮದ್ಯ ಸೇವಿಸಿ ಊಟ ಮಾಡುವ ವೇಳೆ ಹಣದ ವಿಚಾರವಾಗಿ ಜಗಳ ಆರಂಭವಾಗಿದ್ದು, ಈ ವೇಳೆ ಫಕ್ಕೀರಪ್ಪ ಆರೋಪಿಗಳಿಗೆ ಅವಾಚ್ಯವಾಗಿ ನಿಂದಿಸಿದ್ದಾನೆ ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿಗಳು ಕೊಡಲಿ ಕಾವಿನಿಂದ ತಲೆ, ಕೈ, ಕಾಲು ಹಾಗೂ ಮೈಮೇಲೆ ಹಲ್ಲೆ ನಡೆಸಿ ಬಲಗಾಲು ಮುರಿದು ಕೊಲೆ ಮಾಡಿರುವುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ. ಸುಳಿವು ಸಿಗದೆ ಪೋಲಿಸ್ ಇಲಾಖೆಗೆ ನಿದ್ದೆಗೆಡಿಸಿದ್ದ ಈ ಪ್ರಕರಣವನ್ನು
ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೊಂಡ ಬಸರಗಿ ಹಾಗೂ ಡಿ ಎಸ್ ಪಿ ವೀರಯ್ಯ ಹಿರೇಮಠ ಅವರ ಮಾರ್ಗದರ್ಶನದಲ್ಲಿ ಸಿಪಿಐ ಶಿವಾನಂದ ಗುಡಗನಟ್ಟಿ, ಪಿಎಸ್ಐ ಹೆಚ್.ಕೆ. ಪಾಟೀಲ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಪ್ರಕರಣ ಭೇದಿಸಿದೆ. ಬೈಲಹೊಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ ಮುನ್ನಾ ಹುಜರತಿ




















