ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಘಟಕದ ಕಾರ್ಯಕಾರಿ ಸಮಿತಿಯ ನೂತನ ಸದಸ್ಯರಾಗಿ ಹಡಪದ ಜಡೆಪ್ಪ, ಹನುಮಂತಪ್ಪ, ಐ.ಗಂಗಮ್ಮ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ ಸುಗ್ಗೇನಹಳ್ಳಿ ಘೋಷಿಸಿದರು.
ಇತ್ತೀಚೆಗೆ ಕಾರ್ಯಾಕಾರಿ ಸಮಿತಿಯ ಮೂರು ಸದಸ್ಯ ಸ್ಥಾನಕ್ಕೆ ಚುನಾವಣಾ ಪ್ರಕ್ರಿಯೆಗಳು ನಡೆದಿದ್ದವು. ಮೂರು ಸ್ಥಾನಗಳಿಗೆ ಐದು ಜನ ನಾಮಪತ್ರ ಸಲ್ಲಿಸಿದ್ದರು. ನಂತರ ಇಬ್ಬರು ನಾಮಪತ್ರ ಸಲ್ಲಿಸಿದ ಹಿನ್ನಲೆ ಅವಿರೋಧವಾಗಿ ಹಡಪದ ಜಡೆಪ್ಪ, ಹನುಮಂತಪ್ಪ, ಐ.ಗಂಗಮ್ಮ ಆಯ್ಕೆಗೊಂಡಿದ್ದರು. ಅವಿರೋಧವಾಗಿ ಆಯ್ಕೆಗೊಂಡ ನೂತನ ಸದಸ್ಯರ ಘೋಷಣೆ ಬಾಕಿ ಇತ್ತು. ಆದರೆ, ಚುನಾವಣೆಗೆ ಕೋರ್ಟ್ ತಡೆಯಾಜ್ಞೆ ನೀಡಿದ ಪರಿಣಾಮ ಕೆಲ ದಿನಗಳವರೆಗೆ ಪ್ರಕ್ರಿಯೆಗಳು ಸ್ಥಗಿತವಾಗಿದ್ದವು. ಆದರೆ, ಈಗ ಕೋರ್ಟ್ ಚುನಾವಣೆ ಮುಂದುವರೆಸಲು ಅನುಮತಿಸಿದ ಹಿನ್ನಲೆ ಈಗ ಕಂಪ್ಲಿ ಪಟ್ಟಣದಲ್ಲಿರುವ ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಚುನಾವಣಾ ಕಛೇರಿಯಲ್ಲಿ ಚುನಾವಣಾ ಅಧಿಕಾರಿ ರಮೇಶ ಸುಗ್ಗೇನಹಳ್ಳಿ ನೇತೃತ್ವದಲ್ಲಿ ಹಾಗೂ ಸಹಾಯಕ ಚುನಾವಣಾಧಿಕಾರಿ ನಾಗರಾಜ ಅವರು ಚುನಾವಣಾ ಪ್ರಕ್ರಿಯೆಗಳನ್ನು ಆರಂಭಿಸಿ, ಅವಿರೋಧವಾಗಿ ಆಯ್ಕೆಗೊಂಡ ಹಡಪದ ಜಡೆಪ್ಪ, ಹನುಮಂತಪ್ಪ, ಐ.ಗಂಗಮ್ಮ ಅವರ ಪಟ್ಟಿ ಶುಕ್ರವಾರ ಘೋಷಿಸಿದರು.
ನಂತರ ನೂತನ ಸದಸ್ಯರಾದ ಹನುಮಂತಪ್ಪ, ಐ.ಗಂಗಮ್ಮ ಹಾಗೂ ಹಡಪದ ಜಡೆಪ್ಪ ಅವರ ಅನುಪಸ್ಥಿತಿಯಲ್ಲಿ ಅವರ ಪತ್ನಿ ಎಸ್.ರೇಣುಕಮ್ಮ ಜಡೆಪ್ಪ ಇವರು ಪ್ರಮಾಣ ಪತ್ರ ಸ್ವೀಕರಿಸಿದರು. ತದನಂತರ ನೂತನ ಸದಸ್ಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಹೆಚ್.ದೊಡ್ಡಬಸಪ್ಪ, ಸಹ ಶಿಕ್ಷಕರಾದ ಮರಿಸ್ವಾಮಿ, ಎನ್.ಚಂದ್ರಶೇಖರ, ವೀರಕುಮಾರ, ಮಲ್ಲಿಕಾರ್ಜುನ, ಸಿ.ಕೆ.ರಾಮಚಂದ್ರಪ್ಪ ಸೇರಿದಂತೆ ಇತರರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















