ಬಳ್ಳಾರಿ / ಕಂಪ್ಲಿ : ಸರ್ಕಾರ ರೈತರ ನೀರಾವರಿಯಾಗಿ ಸಾಕಷ್ಟು ಅನುದಾನಗಳನ್ನು ನೀಡುವುದು ಒಂದು ಕಡೆಯಾದರೆ, ಮತ್ತೊಂದು ಕಡೆ ನೀರಾವರಿ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ನೀರಿಲ್ಲದೇ ಗಿಡಗಂಟಿ, ಜಲಸಸ್ಯಗಳಿಂದ ರೈತರ ಕಾಲುವೆಗಳು ಮಾಯವಾಗುವಂತಾಗಿದೆ.
ತುಂಗಭದ್ರ ಬಲದಂಡೆ ಭಾಗದಲ್ಲಿ ಹಾದು ಹೋಗಿರುವ ಕಾಲುವೆಗಳ ನೀರಿನಿಂದಾಗಿ ರೈತರು ನಾನಾ ಬೆಳೆಗಳನ್ನು ಬೆಳೆಯುವ ಮೂಲಕ ಬದುಕು ರೂಪಿಸಿಕೊಳ್ಳುತ್ತಾ ಬಂದಿದೆ. ಆದರೆ, ಇಲ್ಲಿನ ರೈತರ ಜೀನವಾಡಿ ಎಂಬಂತಿರುವ ಕಾಲುವೆಗಳ ದುರಸ್ಥಿ ನೋಡಿದರೆ, ರೈತರು ಬದುಕು ಎಷ್ಟರ ಮಟ್ಟಿಗೆ ಕಷ್ಟದಲ್ಲಿ ನಡೆಯುತ್ತದೆ ಎಂಬುದು ಗೋಚರವಾಗುತ್ತದೆ.
ಸಮೀಪದ ಬುಕ್ಕಸಾಗರ ಸೇರಿದಂತೆ ವ್ಯಾಪ್ತಿಯ ವೆಂಕಟಾಪುರ ಮತ್ತು ಗ್ರಾಮಗಳ ಸಾಕಷ್ಟು ರೈತರು ಭೂಮಿ ತಾಯಿಯನ್ನೇ ನಂಬಿ ಬದುಕು ಕಟ್ಟಿಕೊಂಡಿದ್ದಾರೆ. ಬಸವ, ರಾಮ ಮತ್ತು ಕಮಲಾಪುರ ಕೆರೆಯಿಂದ ಕಾಲುವೆ ಮೂಲಕ ಉದ್ದಾನ ವೀರಭದ್ರ ದೇವಸ್ಥಾನ ಬಳಿಯಲ್ಲಿರುವ ತುರ್ತು ಕಾಲುವೆಗೆ ನೀರು ಹರಿದು ಬರುತ್ತದೆ. ಇಲ್ಲಿನ ತುರ್ತು ಕಾಲುವೆ ವ್ಯಾಪ್ತಿಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ರೈತರ ಜಮೀನುಗಳಿವೆ. ಇಲ್ಲಿನ ರೈತರಿಗೆ ತುರ್ತು ಕಾಲುವೆಯ ನೀರೇ ಆಧಾರಸ್ತಂಬವಾಗಿದೆ. ನೀರಿನಿಂದ ಬೆಳೆ, ಬೆಳೆಯಿಂದ ನೀರಲ್ಲ ಎಂಬಂತೆ ಈ ಭಾಗದಲ್ಲಿ ಬಹುತೇಕವಾಗಿ ರೈತರು ತುರ್ತು ಕಾಲುವೆಯ ನೀರಿನ ಆಧಾರದ ಮೇಲೆ ಬೆಳೆಗಳನ್ನು ಬೆಳೆಯುವದುಂಟು. ಆದರೆ, ಕಳೆದ ಮುಂಗಾರು ಹಂಗಾಮಿನನಿಂದ ತುರ್ತು ಕಾಲುವೆಯ ರೈತರ ಬದುಕು ಸಂಕಷ್ಟದಲ್ಲಿ ದೂಡುವಂತಾಗಿದೆ.
ಇಲ್ಲಿನ ಕಾಲುವೆ ಜಲಸಸ್ಯ ಮತ್ತು ಗಿಡ ಕಂಟಿಗಳಿಂದ ಮುಚ್ಚಿದೆ. ಎಲ್ಲಿದೇ ಕಾಲುವೆ ಎಂಬ ಹುಡುಕಾಟ ನಡೆದಿದೆ. ಇಲ್ಲಿನ ಉದ್ದಾನ ವೀರಭದ್ರ ದೇವಸ್ಥಾನ ಬಳಿಯಲ್ಲಿರುವ ತುರ್ತು ಕಾಲುವೆಯ ನಾಲ್ಕು ಗೇಟ್ ಗಳು ಸಂಪೂರ್ಣವಾಗಿ ತುಕ್ಕು ಹಿಡಿದು ಹಾಳಾಗಿವೆ. 1 ಕಿ.ಮೀ.ಯಿಂದ 18 ಕಿ.ಮೀ.ವರೆಗೆ ಕಾಲುವೆ ಹಾದು ಹೋಗಿದೆ. ಇದರಲ್ಲಿ 3 ಕಿ.ಮೀ 8 ಕಿ.ಮೀ ವರೆಗೆ ಕಾಮಗಾರಿ ನಡೆದಿಲ್ಲ. ಇದರಿಂದ ನೀರು ಸರಾಗವಾಗಿ ಹರಿಯುತ್ತಿಲ್ಲ. ಮತ್ತು ಮುಂದಕ್ಕೆ ನೀರು ಹೋಗದ ಪರಿಣಾಮ ಕಾಲುವೆ ಸಂಪೂರ್ಣವಾಗಿ ಹೂಳು ಮತ್ತು ಜಲಸಸ್ಯದಿಂದ ಕಣ್ಮರೆಯಾಗಿದೆ.
ಇಲ್ಲಿನ ಬುಕ್ಕಸಾಗರ ವ್ಯಾಪ್ತಿಯ ತುರ್ತು ಕಾಲುವೆ ವ್ಯಾಪ್ತಿಯಲ್ಲಿ ಸಾವಿರಾರು ಎಕರೆಯಷ್ಟು ರೈತರ ಜಮೀನುಗಳಿವೆ. ಕಳೆದ ಬಾರಿಯ ಮುಂಗಾರಿನ ಹಂಗಾಮಿನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕಿತ್ತಿ ಹೋಗಿತ್ತು. ಇದರಿಂದ ಮೊದಲ ಬೆಳೆ ತೆಗೆದುಕೊಳ್ಳಲು ರೈತರಲ್ಲಿ ಅನುಮಾನ ಕಾಡಿದ ನಡುವೆಯೂ ತಾತ್ಕಾಲಿಕವಾಗಿ ಗೇಟ್ ದುರಸ್ಥಿಯಿಂದಾಗಿ ಮೊದಲ ಫಸಲು ತೆಗೆದುಕೊಂಡದರು. ಆದರೆ, ಹೊಸ ಗೇಟ್ ಗಳ ಅಳವಡಿಕೆ ಹಿನ್ನಲೆ ಎರಡನೇ (ಬೇಸಿಗೆ) ಬೆಳೆಗೆ ನೀರು ಹರಿಸದಂತೆ ಡಿಬಿ ಬೋರ್ಡ್ ನಿರ್ಧರಿಸಿತ್ತು. ಅದರಂತೆಯೇ ಎರಡನೇ ಬೆಳೆಯಿಂದ ರೈತರು ದೂರು ಉಳಿದಿದ್ದರು. ಈಗ ಮುಂಗಾರು ಹಂಗಾಮಿ ಚಿಗುರು ಕಾಣುತ್ತಿರುವ ನಡುವೆ ಇಲ್ಲಿನ ಬುಕ್ಕಸಾಗರದ ತುರ್ತು ಕಾಲುವೆಗೆ ನೀರಿಲ್ಲದಂತಾಗುವ ಆತಂಕ ಮನೆ ಮಾಡಿದೆ. ಇಲ್ಲಿನ ಕಾಲುವೆಯಲ್ಲಿ ಮೇಲ್ಭಾಗದಿಂದ ಕೆಳ ಹಂತದವರೆಗೆ ಗಿಡ ಕಂಟಿಗಳು ಬೆಳೆದು ನಿಂತಿದ್ದು, ಮತ್ತು ಹೂಳಿನಿಂದ ತುಂಬಿಕೊಂಡಿದ್ದು, ಎಲ್ಲಿದೇ ಕಾಲುವೆ ಎಂದು ಹುಡುಕಾಡಬೇಕಾಗಿದೆ. ಇಲ್ಲಿನ ತುರ್ತು ಕಾಲುವೆಗೆ ಹರಿಸುವ ಎರಡು ಗೇಟ್ಗಳು ಸಂಪೂರ್ಣವಾಗಿ ದುರಸ್ಥಿಗೊಳಪಟ್ಟಿವೆ. ಮತ್ತು ಗೇಟ್ಗಳು ಸಂಪೂರ್ಣವಾಗಿ ತುಕ್ಕು ಹಿಡಿದು ಜಾಮ್ ಆಗಿ ಬಿಟ್ಟಿದ್ದು. ಗೇಟ್ ನಿರ್ವಹಣೆ ಭಾಗ್ಯ ಇಲ್ಲದಂತಾಗಿದೆ. ಇದರಿಂದ ರೈತರಿಗೆ ನೀರಿನ ಅಭಾವ ತಲೆ ದೋರುವಂತಾಗಿದೆ. ಇಲ್ಲಿನ ಭಾಗದಲ್ಲಿ ಅತಿ ಹೆಚ್ಚಾಗಿ ಬಾಳೆ, ಕಬ್ಬು, ಭತ್ತ ಬೆಳೆಯುವುದುಂಟು. ಭತ್ತಕ್ಕೆ ನಿರಂತರವಾಗಿ ನೀರು ಹರಿಸಲೇಬೇಕು. ಉಳಿದ ಬೆಳೆಗಳಿಗೆ ಆಗೊಮ್ಮೆ ಈಗೊಮ್ಮೆ ನೀರಿನ ಅವಶ್ಯಕತೆ ಇದೆ. ಸಂಬಂಧಿಸಿದ ಕಮಲಾಪುರ ನೀರಾವರಿ ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಗೆ ರೈತರು ಸಂಕಷ್ಡ ಅನುಭವಿಸುವಂತಾಗಿದೆ. ಆದ್ದರಿಂದ ಇಲ್ಲಿನ ತುರ್ತು ಕಾಲುವೆಗೆ ಕಾಯಕಲ್ಪ ನೀಡಬೇಕಾಗಿದೆ.
” ತುರ್ತು ಕಾಲುವೆಗೆ ನೀರಿಲ್ಲದೇ, ರೈತರಿಗೆ ತುಂಬ ಸಮಸ್ಯೆಯಾಗಿದೆ. ನಾಲ್ಕು ಗೇಟ್ ಗಳು ತುಕ್ಕು ಹಿಡಿದು ಹಾಳಾಗಿದ್ದು, ಹೊಸ ಗೇಟ್ ಅಳವಡಿಕೆಗೆ ನೀರಾವರಿ ಇಲಾಖೆ ಮುಂದಾಗುತ್ತಿಲ್ಲ. ಇಲ್ಲಿನ ನಾಲೆಯಲ್ಲಿ ಜಲಸಸ್ಯ, ಹೂಳು ತುಂಬಿಕೊಂಡು ನೀರು ಹರಿಯುತ್ತಿಲ್ಲ. ರೈತ ನೂರ್ ಅಹ್ಮದ್ ಅವರ ತೋಟದಲ್ಲಿ ನೀರು ನಿಂತ ಪರಿಣಾಮ ಕಾಲುವೆ ಮೇಲ್ಭಾಗದಲ್ಲಿ ನೀರು ಹರಿಯುವಂತಾಗಿದೆ. ಕೆಲವೊಂದು ಕಡೆಯಲ್ಲಿ ಕಾಮಗಾರಿ ಮಾಡಿ ಕೈತೊಳೆದುಕೊಳ್ಳಲಾಗಿದೆ.
ಇಲ್ಲಿನ ನೀರಾವರಿ ಅಧಿಕಾರಿಗಳ ಬೇಜವಾಬ್ದಾರಿಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಅಧಿಕಾರಿಗಳು ಎಚ್ಚೇತ್ತು ತುರ್ತು ಕಾಲುವೆಗೆ ಕಾಯಕಲ್ಪ ನೀಡಬೇಕು. ಇಲ್ಲದಿದ್ದರೆ ಹೋರಾಟ ಶತಸಿದ್ಧ.
- ಎಲ್.ಎಸ್.ರುದ್ರಪ್ಪ, ರೈತ, ಬುಕ್ಕಸಾಗರ.
ವರದಿ : ಜಿಲಾನಸಾಬ್ ಬಡಿಗೇರ್




















