ಬಳ್ಳಾರಿ / ಕಂಪ್ಲಿ : ರಾಜ್ಯದಲ್ಲಿ ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗುತ್ತಿರುವ ನಡುವೆಯೇ ಕಂಪ್ಲಿ ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ಪೆಟ್ರೋಲ್ ಬಂಕ್ ಗಳು ಅಚಾನಕವಾಗಿ ಬಂದ್ ಆಗಿರುವುದು ಸಾರ್ವಜನಿಕರಲ್ಲಿ ಆತಂಕ ಹಾಗೂ ಆಕ್ರೋಶಕ್ಕೆ ಕಾರಣವಾಗಿದೆ.
ಕಂಪ್ಲಿ ಪಟ್ಟಣದ ಬಳ್ಳಾರಿ ರಸ್ತೆಯಲ್ಲಿರುವ ಕೆಲವು ಪ್ರಮುಖ ಪೆಟ್ರೋಲ್ ಬಂಕ್ಗಳು ದಿನಪೂರ್ತಿ ಕಾರ್ಯ ನಿರ್ವಹಿಸದೇ ಬಂದ್ ಆಗಿದ್ದರಿಂದ ವಾಹನ ಸವಾರರು ಇಂಧನಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಭಾರತ್ ಪೆಟ್ರೋಲಿಯಂ ಹಾಗೂ ಇಂಡಿಯನ್ ಆಯಿಲ್ ಸಂಸ್ಥೆಗಳ ಬಂಕ್ ಗಳು ಬಂದ್ ಆಗಿರುವುದು ಸ್ಥಳೀಯರಲ್ಲಿ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಇನ್ನೂ ತಾಲೂಕಿನ ಗುತ್ತಿಗನೂರು ಸಮೀಪದಲ್ಲಿರುವ ಪೆಟ್ರೋಲ್ ಬಂಕ್ ಸಹ ಕಾರ್ಯನಿರ್ವಹಿಸದೇ ಬಂದ್ ಆಗಿದ್ದರಿಂದ ಗ್ರಾಮೀಣ ಭಾಗದ ಜನರು ಕೂಡ ಸಂಕಷ್ಟ ಅನುಭವಿಸಿದರು. ಕೆಲಸದ ನಿಮಿತ್ತ ದೂರ ಪ್ರಯಾಣಕ್ಕೆ ಹೊರಟಿದ್ದ ವಾಹನ ಸವಾರರು ಬಂಕ್ಗಳಿಂದ ಹಿಂದಿರುಗಬೇಕಾದ ಪರಿಸ್ಥಿತಿ ಎದುರಾಯಿತು. ಕೆಲವರು ಹಲವು ಕಿಲೋಮೀಟರ್ ದೂರದ ಬಂಕ್ಗಳಿಗೆ ತೆರಳಿ ಇಂಧನ ಪಡೆಯಬೇಕಾಯಿತು.
ಸ್ಥಳೀಯರ ಆರೋಪದ ಪ್ರಕಾರ, ಕೆಲವು ಬಂಕ್ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಂಗ್ರಹ ಇದ್ದರೂ ಸಹ ಸಾರ್ವಜನಿಕರಿಗೆ ವಿತರಣೆ ಮಾಡಲು ಮಾಲೀಕರು ಮುಂದಾಗಿಲ್ಲ ಎನ್ನಲಾಗಿದೆ. ತೈಲ ಬೆಲೆ ಮತ್ತಷ್ಟು ಏರಿಕೆಯಾಗುವ ನಿರೀಕ್ಷೆಯಲ್ಲಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕೆಲವರು ಉದ್ದೇಶಪೂರ್ವಕವಾಗಿ ಕೃತಕ ಅಭಾವ ಸೃಷ್ಟಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.
ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ತೈಲ ದರ ಏರಿಕೆಯಾಗುತ್ತಿದ್ದು, ಸಾಮಾನ್ಯ ಜನರ ಬದುಕಿನ ಮೇಲೆ ಅದರ ಪರಿಣಾಮ ಸ್ಪಷ್ಟವಾಗಿ ಕಾಣಿಸುತ್ತಿದೆ. ಸಾರಿಗೆ ವೆಚ್ಚ ಹೆಚ್ಚಳ, ಅಗತ್ಯ ವಸ್ತುಗಳ ಬೆಲೆ ಏರಿಕೆ, ರೈತರು ಹಾಗೂ ಸಣ್ಣ ವ್ಯಾಪಾರಿಗಳಿಗೆ ಹೆಚ್ಚುವರಿ ಹೊರೆ ಸೇರಿದಂತೆ ಹಲವು ಸಮಸ್ಯೆಗಳು ಉಂಟಾಗಿವೆ. ಇಂತಹ ಸಂದರ್ಭದಲ್ಲೇ ಪೆಟ್ರೋಲ್ ಬಂಕ್ಗಳು ಬಂದ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
“ಬಂಕ್ನಲ್ಲಿ ಇಂಧನ ಇದ್ದರೂ ಕೊಡುತ್ತಿಲ್ಲ. ಇದು ಸಾರ್ವಜನಿಕರೊಂದಿಗೆ ನಡೆಯುತ್ತಿರುವ ಅನ್ಯಾಯ. ಜಿಲ್ಲಾಡಳಿತ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಕ್ಷಣ ಕ್ರಮ ಕೈಗೊಂಡು ಬಂಕ್ಗಳ ಪರಿಶೀಲನೆ ನಡೆಸಬೇಕು” ಎಂದು ವಾಹನ ಸವಾರರು ಒತ್ತಾಯಿಸಿದ್ದಾರೆ.
ಅತ್ಯಾವಶ್ಯಕ ಸೇವೆಗಳಿಗೆ ತೆರಳುವ ಜನರು, ಆಟೋ ಚಾಲಕರು, ರೈತರು ಹಾಗೂ ಸಣ್ಣ ವ್ಯಾಪಾರಿಗಳು ಇಂಧನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೆಲವು ಕಡೆಗಳಲ್ಲಿ ವಾಹನಗಳ ಉದ್ದ ಸಾಲುಗಳು ಕಂಡುಬಂದರೆ, ಇನ್ನೂ ಕೆಲವು ಬಂಕ್ಗಳಲ್ಲಿ “ಇಂಧನ ಇಲ್ಲ” ಎಂಬ ಫಲಕ ಅಳವಡಿಸಲಾಗಿತ್ತು.
ಈ ಕುರಿತು ಜಿಲ್ಲಾಡಳಿತ ತಕ್ಷಣ ಗಮನಹರಿಸಿ ಕೃತಕ ಅಭಾವ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಸಾರ್ವಜನಿಕರಿಗೆ ನಿರಂತರವಾಗಿ ಇಂಧನ ಲಭ್ಯವಾಗುವಂತೆ ಕ್ರಮ ವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















