ತಾಯಿ – ನಮ್ಮ ಮನೆಯ ವಿಷಯಕ್ಕೆ ಬಂದರೆ, ನಮ್ಮ ತಾಯಿ ಮನೆಯ ಎಲ್ಲ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಅವರು ನಮ್ಮ ಅಭಿವೃದ್ಧಿಗಾಗಿ ಸದಾ ದುಡಿಯುತ್ತಿದ್ದರು. ಅವರು ಅನಕ್ಷರಸ್ಥರಾಗಿದ್ದರೂ ಒಳ್ಳೆಯ ಕೆಲಸಗಾರರಾಗಿದ್ದರು. ಒಳ್ಳೆಯ ಕೆಲಸಗಾರರು ಎಂದರೆ ಕಠಿಣ ಪರಿಶ್ರಮದಿಂದ, ಶ್ರದ್ಧೆಯಿಂದ, ಉತ್ಸಾಹದಿಂದ ಸಮಯೋಚಿತವಾಗಿ ಕೆಲಸ ಮಾಡುವುದು.
ಮೆಣಸಿನ ಪುಡಿ, ಮಸಾಲೆ ಪುಡಿ, ಮೆಂಥೆ ಹಿಟ್ಟು, ಶೇಂಗಾ ಚಟ್ನಿ ಮುಂತಾದವುಗಳನ್ನು ನಮ್ಮ ತಾಯಿಯವರು ಕಾಲ ಕಾಲಕ್ಕೆ ಮಾಡುತ್ತಿದ್ದರು. ಇವೆಲ್ಲವುಗಳನ್ನು ಮಾಡಲು ಸಾಕಷ್ಟು ಪರಿಶ್ರಮ ಬೇಕಾಗುತ್ತದೆ. ದಿನವೊಂದಕ್ಕೆ ಸುಮಾರು 40 ಜೋಳದ ರೊಟ್ಟಿಗಳನ್ನು ಅವರು ಮಾಡುತ್ತಿದ್ದರು ಮತ್ತು ಅವನ್ನು ನಮಗೆ ಬಿಸಿಬಿಸಿಯಾಗಿ ಬಡಿಸುತ್ತಿದ್ದರು.
ಅವರು ಯಾವತ್ತೂ ಉಳಿದ ನೆರೆಯ ಹೆಂಗಸರೊಡನೆ ಮನೆಯ ಜಗುಲಿಯ ಕಟ್ಟೆಮೇಲೆ (ಪಾವಟಿಗೆಗಳು) ಕುಳಿತು ಹರಟೆ ಹೊಡೆದುದನ್ನು ಅಥವಾ ಇತರರ ಬಗ್ಗೆ ಟೀಕೆ ಟಿಪ್ಪಣಿ ಮಾಡಿದುದನ್ನು ನಾನು ಕಂಡಿಲ್ಲ ಎಂದು ನನ್ನ ಹಿರಿಯಕ್ಕ ಯಾವಾಗಲೂ ಹೇಳುತ್ತಾಳೆ. ನಮ್ಮ ತಂದೆ ತೀರಿ ಹೋದ ಮೇಲೆ ಅವರು ಸುಮಾರು ಎಂಟು ವರ್ಷ ನಮ್ಮೊಡನೆ ಇದ್ದರು, ಹಾಗೂ ಆರಾಮ ಕುರ್ಚಿಯ ಮೇಲೆ ಕುಳಿತು (ಫೋಟೋ ಲಗತ್ತಿಸಲಾಗಿದೆ) ಜೋರಾಗಿ ದೇವರನಾಮಗಳನ್ನು ಹೇಳುತ್ತಿದ್ದರು ಹಾಗೂ ಆ ಹಾಡುಗಳನ್ನು ನೆರೆಮನೆಯವರು ಕೇಳಿ ಸಂತೋಷಪಡುತ್ತಿದ್ದರು.
ನಾನು ಭಾವಿಸಿದಂತೆ,ನಮ್ಮ ತಾಯಿಯವರ ಈ ಹವ್ಯಾಸಗಳು, ನಮಗೆ ಬಿಟ್ಟುಹೋದ ಆಸ್ತಿಗಳು. ಅವಳ ಮಕ್ಕಳು ಕೂಡ ಇತರರ ಬಗ್ಗೆ ಟೀಕೆ ಮಾಡುವುದನ್ನು ಆಗಲಿ ಅಥವಾ ವೃಥಾ ಕಾಲಹರಣ ಮಾಡುವದನ್ನಾಗಲೀ ಇಷ್ಟಪಡುವುದಿಲ್ಲ.
Asset 17
ಹೌದು ಸರ್
ಅವರ ಕಾಯಕವೇ.ಕೈಲಾಸ ದ ತತ್ತ್ವವೇ ನಮಗೆ ಆಸ್ತಿ.
- Smt shanta Nagamangala.
ಅರಿಶಿನ ಪುಡಿ, ಅಚ್ಚಮೆಣಸಿನ ಪುಡಿ, ಧನಿಯಾ ಜೀರಿಗೆ ಪುಡಿ ಚಾಟ್ ಮಸಾಲಾ ಪುಡಿ ಆದಿಯಾಗಿ ಈಗಲೂ ನನ್ನ ತಾಯಿಯಿಂದ ನನಗೆ ಅನೇಕ ಒಳ್ಳೆಯ ಸಂಸ್ಕಾರಗಳು ಬಂದಿವೆ. ಮುಖ್ಯವಾದವುಗಳಲ್ಲಿ ದೇವರನಾಮಗಳನ್ನು ಹೇಳುವುದು , ರುಚಿಯಾಗಿ ಅಡುಗೆ ಮಾಡುವುದು , ಮನೆಯನ್ನು ಸ್ವಚ್ಛವಾಗಿಟ್ಟು ಕೊಳ್ಳುವುದು, ಬೇರೆಯವರಿಗೆ ಸಹಾಯ ಮಾಡುವುದು, ವರ ಕನ್ಯಾ ನೋಡುವುದು ಮುಂತಾದವುಗಳು.
- Smt. Sandhya Nagasampagi, Raichur.
Asset 17
ತಂದೆ ತಾಯಿಗೆ ಯಾರು ಗೌರವ ಕೊಡುತ್ತಾರೋ ಅವರನ್ನು ದೇವರು ವಿಶೇಷವಾಗಿ ಅನುಗ್ರಹಿಸುತ್ತಾನೆ. ಜನ್ಮದಾತಾರ ಸೇವೆ ಜನಾರ್ಧನನ ಸೇವೆ. ನಾನು ತುಂಬಾ ಜನರು ಮಾತಾ ಪಿತೃರ ಸೇವೆ ಮಾಡಿ ಉಚ್ಚ ಸ್ಥಾನಕ್ಕೆ ಹೋಗಿರುವದನ್ನು ಸ್ವತಃ ನೋಡಿದ್ದೇನೆ.
- Raghavendra R Bagewadi, Bangalore.
ಅಮ್ಮನ ನೆನಪು
ನಮ್ಮ ತಾಯಿ ,ನಾನು ಹತ್ತನೇ ತರಗತಿಯಲ್ಲಿರುವಾಗ ಗರ್ಭಕೋಶ ಕ್ಯಾನ್ಸರ್ ನಿಂದ ತೀರಿಕೊಂಡರು.
ಅಮ್ಮನ ನೆನಪು ಆಗುತ್ತಾ ಇರುತ್ತದೆ.ಅವಳು ಮನೆಗೆ ಬಂದಾವರಿಗೆ ಏನಾದರೂ ತಿನ್ಬಲು ಕೊಟ್ಟು ಕಳುಹಿಸುತ್ತಿದ್ದಳು. ಹಲವರು ಆಕೆಯನ್ನು ಅನ್ನಪೂರ್ಣೇಶ್ವರಿಯೆಂದು ಕೊಂಡಾಡುತ್ತಿದ್ದರು.
ಆಕೆ ಇದ್ದಾಗ ಮನೆಯಲ್ಲಿ ಸಕಲ ಸೌಭಾಗ್ಯವಿತ್ತು.ಆಕೆಯ ಮರಣದೊಂದಿಗೆ ಹೋಯಿತು.
ಕೊಟ್ಟಿಗೆಯ ತುಂಬ ದನಕರುಗಳಿದ್ದವು. ಭತ್ತ ಅಡಿಕೆ ಬಾಳೆ ಮೊದಲಾದ ಬೆಳೆಗಳ ಸಮೃದ್ಧಿ ಇತ್ತು.ಅಮ್ಮ ದನಗಳ ಹಾಲು ಕರೆದು ಮನೆ ಮಂದಿಗೆಲ್ಲಾ ಬೆಳಗಿನ ಉಪಹಾರ ,ಮಧ್ಯಾಹ್ನ ಮತ್ತು ರಾತ್ರಿಯ ಊಟ ಸಿದ್ಧಪಡಿಸುತ್ತಿದ್ದಳು.
ಸಂಜೆಯ ಹೊತ್ತಿನಲ್ಲಿ ಮನೆಯ ಹಿತ್ತಲಿನಲ್ಲಿ ಬೆಳೆದ ತರಕಾರಿ ಗಿಡಗಳ ಆರೈಕೆ ಮಾಡುತ್ತಿದ್ದಳು.ಮನೆಯ ಸುತ್ತ ತರತರಹದ ಹೂ ಗಿಡಗಳನ್ನು ನೆಟ್ಟಿದ್ದಳು.
ಅಮ್ಮ ಕಂಬಕ್ಕೆ ಕಡಗೋಲು ಕಟ್ಟಿ ಮೊಸರು ಕಡೆದು ಬೆಣ್ಣೆ ತೆಗೆಯುತ್ತಿದ್ದಳು. ಆಗಾಗ್ಗೆ ಹಸುವಿನ ತುಪ್ಪ ಮಾಡಿಡುತ್ತಿದ್ದಳು.ಪುಟ್ಟ ಬಾಳೆಯನ್ನು ಅಡುಗೆ ಮನೆಯ ಒಲೆಯ ಮೇಲೆ ತಟ್ಟಿ ಹಾಕಿ ಒಣಗಿಸಿ ತಿನ್ನಲು ಕೊಡುತ್ತಿದ್ದಳು. (ಇದು ಬಹಳ ರುಚಿ). ಹಲಸಿನ ಹಪ್ಪಳ ಮತ್ತು ಮಾವಿನ ಕಾಯಿ ಅಮಟೆಕಾಯಿಯ ಉಪ್ಪಿನ ಕಾಯಿಗಳನ್ನು ಮಾಡುತ್ತಿದ್ದಳು.
ರಾತ್ರಿ ನಾವು ಮಲಗಿದೊಡನೆ ಅಮ್ಮ ನಮ್ಮ ಅಂಗಾಲು ಕಾಲುಗಳಿಗೆ ತೆಂಗಿನೆಣ್ಣೆ ಯನ್ನು ಹಾಕಿ ತಿಕ್ಕುತ್ತಿದ್ದಳು.
ಹಬ್ಬ ಹುಣ್ಣಿಮೆಗಳಲ್ಲಿ ಸಿಂಗರಿಸಿಕೊಂಡು ಸಡಗರದಲ್ಲಿ ಇರುತ್ತಿದ್ದಳು.ನಮಗೂ ಹೊಸಬಟ್ಟೆ ತೊಡಿಸಿ ನಮ್ಮ ಆಟ ಪಾಠ ನೋಡಿ ಸಂತೋಷಪಡುತ್ತಿದ್ದಳು.
ಅಮ್ಮನಿಗೆ ತುಂಬ ತಾಳ್ಮೆ ಇತ್ತು.ಸಹನಾ ಧರಿತ್ರಿಯೇ ಆಗಿದ್ದಳು.ಆಕೆ ಪುಣ್ಯಕೋಟಿಯ ಕತೆಯ ಪೂರ್ಣ ಪದ್ಯವನ್ನು ಹೇಳುತ್ತಿದ್ದಳು.
ಅಮ್ಮ ಅನಾರೋಗ್ಯದಿಂದ ಹಾಸಿಗೆ ಹಿಡಿದಾಗ ನಮ್ಮ ಕೈಗಳನ್ನು ಹಿಡಿದು ಮೃದುವಾಗಿ ಒತ್ತಿ ಒಂದೆರಡು ಮಾತಾಡುತ್ತಿದ್ದಳು.
ಅಮ್ಮನ ನೆನಪಾದಾಗ ಅಮ್ಮನ ಬೆಚ್ಚನೆಯ ಮಡಿಲಲ್ಲಿ ಮತ್ತೊಮ್ಮೆ ಮಗುವಾಗಬೇಕೆನಿಸುತ್ತದೆ.
- ಹುವಾಶ್ರೀ H V Shriprakash, Bangalore.
ಜೀವನದ ನಿಜವಾದ ಮಾರ್ಗದರ್ಶಿ ತಾಯಿ ಆಗಿರುತ್ತಾಳೆ. ತಾಯಿ ಕೇವಲ ತಾಯಿಯಾಗಿರದೇ ಎಲ್ಲರ ದೈವ ಆಗಿದ್ದಾಳೆ. ಮಕ್ಕಳು ಯಾವುದೇ ವಯಸ್ಸಿನಲ್ಲಿ ಇದ್ದರೂ ತಿದ್ದಿ ತೀಡಿ ಮುನ್ನಡೆಸುವ ಜವಾಬ್ದಾರಿಯನ್ನು ಹೊತ್ತು ತನ್ನ ಕೊನೆ ಉಸಿರು ಇರುವರೆಗೂ ಮಕ್ಕಳ ಕಾಳಜಿ ಮಾಡುತ್ತಾಳೆ.
- Lect. Rahul Rohidekar, Vijayapura.
- ಪ್ರಮೋದ್ ಕುಲಕರ್ಣಿ




















