ಬಳ್ಳಾರಿ : ಈಚೆಗೆ ಹಸುವಿನ ತಲೆ ಪತ್ತೆಯಾದ ಘಟನೆ ಹಾಗೂ ವಿಷಯವನ್ನಿಟ್ಟುಕೊಂಡು ಪಶು ಆಸ್ಪತ್ರೆ ಬಳಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ ಸಮಸ್ಯೆ ಸೃಷ್ಠಿಸಿದ ಸಂಬಂಧ ಪ್ರತ್ಯೇಕ ಠಾಣೆಗಳಲ್ಲಿ, ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸುಗಮ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದಡಿ ಬಿಜೆಪಿ ಘಟಕದ ಜಿಲ್ಲಾಧ್ಯಕ್ಷ ಅನಿಲ್ ಕುಮಾರ ನಾಯ್ಡು, ಮುಖಂಡರಾದ ಶ್ರೀನಿವಾಸ್ ಮೋತ್ಕರ್, ಗುರಂ ವೆಂಕಟರಮಣ, ಮಾರುತಿ ಪ್ರಸಾದ್, ಅರ್ಜುನ್ ಸಿಂಗ, ಗೋವಿಂದ, ಮಂಜು, ಕೇಶವ, ಸುಗುಣ, ಭಾಗ್ಯಲಕ್ಷ್ಮೀ, ಸೋಮು ಎಂಬುವರರ ಸೇರಿ ಒಟ್ಟು ಹನ್ನೊಂದು ಜನರ ವಿರುದ್ಧ ಬ್ರೂಸ್ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಸುಗಳ ತಲೆ ಪತ್ತೆಯಾದ ಹಿನ್ನೆಲೆ, ಕಳೇಬರೆ ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ ಅವುಗಳನ್ನು ತಮಗೆ ನೀಡಬೇಕು ಎಂದು ಒತ್ತಾಯಿಸಿ, ಹಿಂದೂ ಸಂಘಟನೆಗಳು ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಕಾನೂನು ಬಾಹಿರವಾಗಿ ಜಾನುವಾರುಗಳ ತಲೆಗಳನ್ನು ನೀಡಲು ಸಾಧ್ಯವಿಲ್ಲವೆಂದು ತಿಳಿಸಿದರೂ ಪ್ರತಿಭಟನಾಕಾರರು ಯಾವುದೇ ಮುನ್ಸೂಚನೆ ಅಥವಾ ಅನುಮತಿ ಪಡೆಯದೆ ಏಕಾಏಕಿ ರಸ್ತೆಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆಯಿಂದಾಗಿ ಸಂಚಾರಕ್ಕೆ ತೀವ್ರ ಅಡ್ಡಿಯಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಲ್ಲಿನ ಕಪ್ಪಗಲ್ ರಸ್ತೆಯಲ್ಲಿ ಹಸುಗಳ ತಲೆ ಪತ್ತೆಯಾದ ಪ್ರಕರಣಕ್ಕೆ ಸಂಬಂಧ ಅಪರಿಚಿತರ ವಿರುದ್ಧ ನಗರದ ನಿವಾಸಿ ಹರೀಶ ಕುಮಾರ ಎಂಬುವವರು ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಯಾರೋ ದುಷ್ಕರ್ಮಿಗಲು ಎರಡು ಜಾನುವಾರುಗಳನ್ನು ಕೊಂದು, ಅವುಗಳ ತಲೆಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಸಾರ್ವಜನಿಕ ಸ್ಥಳದಲ್ಲಿ ಎಸೆದು ಹೋಗಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ವರದಿ : ಜಿಲಾನಸಾಬ್ ಬಡಿಗೇರ್




















