ಬಳ್ಳಾರಿ / ಕಂಪ್ಲಿ : ಕಂಪ್ಲಿ ತಾಲೂಕಿನ ಎಮ್ಮಿಗನೂರು ಗ್ರಾಮದಲ್ಲಿ ಧಾರ್ಮಿಕ ಸಮನ್ವಯತೆಯ ಹರಿಕಾರ ಸಂತ ಶಿಶುನಾಳ ಶರೀಫರ ಪುಣ್ಯ ಸ್ಮರಣೋತ್ಸವನ್ನು ಸಂತ ಶಿಶುನಾಳ ಶರೀಫ ಸೇವಾ ಟ್ರಸ್ಟ್ ಎಮ್ಮಿಗನೂರು ವತಿಯಿಂದ ಶುಕ್ರವಾರ ಸಂಜೆ ತೇರು ಬೀದಿಯ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಎಚ್. ವೀರಾಪುರದ ಜಡೇಶ್ ತಾತನವರು ಕರ್ನಾಟಕದ ಕಬೀರ ಎಂದೇ ಪ್ರಖ್ಯಾತರಾದ ಮಹಾನ್ ತತ್ವಜ್ಞಾನಿ ಮತ್ತು ಸೌಹಾರ್ದತೆಯ ಮೂರ್ತಿ ಸಂತ ಶ್ರೀ ಶಿಶುನಾಳ ಶರೀಫರ ಪುಣ್ಯಸ್ಮರಣೆಯನ್ನು ಸೇವಾ ಟ್ರಸ್ಟ್ ಹಮ್ಮಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ ಶರೀಫರು ತಮ್ಮ ತತ್ವಪದಗಳ ಮೂಲಕ ಸಮಾಜದಲ್ಲಿದ್ದ ಮೂಢನಂಬಿಕೆ, ಜಾತಿ ಪದ್ಧತಿಯನ್ನು ಖಂಡಿಸಿ, ಮಾನವೀಯತೆ ಮತ್ತು ಕೋಮು ಸಾಮರಸ್ಯವನ್ನು ಜಗತ್ತಿಗೆ ಸಾರಿದರು. ಶರೀಫರ ಹಿಂದೂ ಗುರುಗಳಾದ ಶ್ರೀ ಗೋವಿಂದ ಭಟ್ಟರ ಶಿಷ್ಯರಾಗಿ ಅಧ್ಯಾತ್ಮದ ಉನ್ನತ ಮಾರ್ಗವನ್ನು ತಲುಪಿದರು. ಇವರ ಗುರು-ಶಿಷ್ಯರ ಸಂಬಂಧವು ಇಂದಿಗೂ ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.
ಸೇವ ಟಸ್ಸಿನ ಸಾಧಕಲಿ ಸಾಬ್ ಮಾತನಾಡಿ, ಈಶ್ವರ, ಅಲ್ಲಾ, ನೀನೇ ಎಲ್ಲಾ’ ಎಂದು ಬೋಧಿಸಿದವರು, ಆಚರಣೆಯಲ್ಲಿ ತಂದವರು ಹಾಗೂ ಸಾಧಿಸಿದವರು ಕಳಸದ ಗುರು ಗೋವಿಂದ ಭಟ್ಟರು ಹಾಗೂ ಅವರ ಶಿಷ್ಯರಾದ ಕರ್ನಾಟಕದ ಕಬೀರ ಸಂತ ಶಿಶುನಾಳ ಶರೀಫರು. ಮಂದಿರ-ಮಸೀದಿ, ಪುರಾಣ-ಕುರಾನ, ನಮನ-ನಮಾಜ್, ಅಲ್ಲಮ-ಅಲ್ಲಾ, ಜಂಗಮ-ಫಕೀರ, ಇವೆಲ್ಲಾ ಒಂದೇ, ಭಗವಂತನ ದರ್ಶನಕ್ಕೆ ನಾವು ಹಾಕಿಕೊಂಡ ವಿವಿಧ ಹಾದಿಗಳು ಎಂದು ತೋರಿಸಿದಂತಹ “ದಾರ್ಶನಿಕರು” ಕಳಸದ ಗುರು ಗೋವಿಂದ ಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು.
ಹಿಂದೂ ಹಾಗೂ ಇಸ್ಲಾಂ ಧರ್ಮಗಳ ಸಮಾನತೆ, ಸಮನ್ವಯ ಹಾಗೂ ಸಮಭಾವನ್ನು, ಸಮಚಿತ್ತ ಹಾಗೂ ಸಮದೃಷ್ಟಿಯಿಂದ ನೋಡಿದ ‘ಸಮಾನತೆಯ ಹರಿಕಾರರು‘ ಕಳಸದ ಗುರು ಗೋವಿಂದಭಟ್ಟರು ಹಾಗೂ ಸಂತ ಶಿಶುನಾಳ ಶರೀಫರು. ಇವರಿಬ್ಬರೂ ದೈವಭಕ್ತರು, ಆತ್ಮಜ್ಞಾನಿಗಳು, ತತ್ವಜ್ಞಾನಿಗಳು, ವಿಚಾರವಾದಿಗಳು, ವಿಮರ್ಶಕರು, ಶಾಂತಿ ಹಾಗೂ ಕ್ರಾಂತಿ ಪುರುಷರು, ಸಮಾಜ ಸುಧಾರಕರು, ನೀತಿ ಬೋಧಕರು ಹಾಗೂ ತ್ರಿಕಾಲ ಜ್ಞಾನಿಗಳು. ಎಲ್ಲಕ್ಕಿಂತ ಹೆಚ್ಚಾಗಿ ಇವರಿಬ್ಬರೂ ಸಮಸಮಾಜದ, ಮಾನವತೆಯ ಎರಡು ಕಣ್ಣುಗಳಾಗಿ ‘ಮಹಾನ್ ಮಾನವತಾವಾದಿ’ಗಳಾಗಿ ಸಮಾಜಕ್ಕೆ ಬೆಳಕನ್ನು ಕೊಟ್ಟವರು ಎಂದು ಸ್ಮರಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ದಾಸರ ನಾರಾಯಣಪ್ಪ, ಸದಾಶಿವ ಧಣಿ, ಗಾದಲಿ ನಾಗರೆಡ್ಡಿ, ಸಮಾಜ ಸೇವಕ ನಾಯರ್ ಪೆಟ್ರೋಲ್ ಬಂಕ್ ನ ರಾಜು, ಕನಕಪ್ಪ ಸುಣಗಾರ ಪ್ರಮುಖರಾದ ಟಿ. ರಾಮ, ತಾಯಪ್ಪ, ಪದ್ಮಾವತಮ್ಮ, ನಾರಾಯಣಪ್ಪ, ಪೀರವಲಿಸಾಬ್, ಸೇರಿದಂತೆ ಇತರರಿದ್ದರು.
ಕಾರ್ಯಕ್ರಮ ನಿರೂಪಣೆಯನ್ನು ಶಿಕ್ಷಕ ಎಸ್ ರಾಮಪ್ಪ ನಿರ್ವಹಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















