ಬಳ್ಳಾರಿ / ಕಂಪ್ಲಿ : ತಾಲ್ಲೂಕಿನ ಎಲ್ಲಾ ಸರ್ಕಾರಿ ಇಲಾಖೆಗಳ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಪಾದರ್ಶಕತೆಯಿಂದ ಕಾರ್ಯನಿರ್ವಹಿಸಬೇಕೆಂದು ಬಳ್ಳಾರಿ ಲೋಕಾಯುಕ್ತ ಪಿಐ ಸುರೇಶ ಬಾಗವಾನಿ ತಿಳಿಸಿದರು.
ಅವರು ಸೋಮವಾರ ಪಟ್ಟಣದ ತಹಸಿಲ್ದಾರ್ ಕಚೇರಿ ಸಭಾಂಗಣದಲ್ಲಿ ಬಳ್ಳಾರಿ ಲೋಕಾಯುಕ್ತ ಇಲಾಖೆ ಏರ್ಪಡಿಸಿದ್ದ ಸಾರ್ವಜನಿಕ ಕುಂದುಕೊರತೆ ಮತ್ತು ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ
ಮಾತನಾಡಿದರು.
ಎಲ್ಲಾ ಇಲಾಖೆಗಳಲ್ಲಿ ಲೋಕಾಯುಕ್ತ ಇಲಾಖೆಯ ಸೂಚನೆಗಳ ನಾಮಫಲಕಗಳನ್ನು, ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ, ಶುಲ್ಕ ಸ್ವೀಕಾರದ ಮಾಹಿತಿ ಹಾಗೂ ಲೋಕಾಯುಕ್ತ ಅಧಿಕಾರಿಗಳ
ಮೊಬೈಲ್ ನಂಬರುಗಳ ಮಾಹಿತಿ ಇರುವ ನಾಮಫಲಕಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಅಳವಡಿಸಬೇಕು. ಸಾರ್ವಜನಿಕರನ್ನು ವೃಥಾ
ಕಚೇರಿಗಳಿಗೆ ಅಲೆದಾಡಿಸದೇ ಸೂಕ್ತ ಸಮಯದಲ್ಲಿ ಕೆಲಸಗಳನ್ನು ಮಾಡಿಕೊಡಬೇಕು. ತಾಂತ್ರಿಕ ಸಮಸ್ಯಗಳಿದ್ದರೆ ಅರ್ಜಿದಾರರಿಗೆ ಸೂಕ್ತ
ಮಾಹಿತಿಗಳನ್ನು ನೀಡಬೇಕೆಂದರು.
ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಮಗೆ ಯಾವುದಾರೂ ಸಮಸ್ಯೆಗಳಿದ್ದರೆ ಹಿರಿಯ ಅಧಿಕಾರಿಗಳ ಗಮನಕ್ಕೆ
ತರಬೇಕು ಮತ್ತು ಯಾರಾದರೂ ವೃಥಾ ಕಿರುಕುಳ ನೀಡುತ್ತಿದ್ದರೆ ಅವರ ಬಗ್ಗೆಯೂ ಹಿರಿಯ ಅಧಿಕಾರಿಗಳಿಗೆ ತಿಳಿಸಬೇಕು ಎಂದರು.
ಸರ್ಕಾರಿ ಇಲಾಖೆಗಳು ಭ್ರಷ್ಟಚಾರ ಮುಕ್ತ ಕಚೇರಿಗಳಾಗಬೇಕು ಎಂದರು.
ಕಂಪ್ಲಿ ತಾಲ್ಲೂಕಿನಿಂದ ಸರ್ಕಾರಿ ಕೆಲಸಗಳ ವಿಳಂಬದ ಬಗ್ಗೆಯಾಗಲಿ, ಭ್ರಷ್ಟಚಾರದ ಬಗ್ಗೆ ಯಾಗಲಿ ನಿರೀಕ್ಷಿತ ಪ್ರಮಾಣದಲ್ಲಿ ದೂರುಗಳು
ಬರುತ್ತಿಲ್ಲ. ಇದಕ್ಕೆ ಕಾರಣಗಳೇನೂ ಎಂದು ಪ್ರಶ್ನಿಸಿದ ಅವರು ತಹಸಿಲ್ದಾರ್ ಕಚೇರಿಯಲ್ಲಿ ಲೋಕಾಯುಕ್ತ ಅಹವಾಲು ಸ್ವೀಕಾರದ ಬಗ್ಗೆ ಸಾರ್ವಜನಿಕರಿಗೆ ಸೂಕ್ತ ಮಾಹಿತಿ ನೀಡಿಲ್ಲವೆಂದು ಅಸಮಾಧಾನ
ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಸಂಘಟನೆಯೊಂದರ ಮುಖಂಡ ಮೆಟ್ರಿ ಬಸಪ್ಪ ಮಾತನಾಡಿ ಇಂದಿನ ಸಭೆಯ ಬಗ್ಗೆ ನಮಗೆ ಮಾಹಿತಿಯೇ ಇಲ್ಲ. ಮಾಹಿತಿ
ಇದ್ದರೆ, ಹಲವಾರು ಸಮಸ್ಯೆಗಳ ಬಗ್ಗೆ ಅರ್ಜಿಗಳನ್ನು ಸಲ್ಲಿಸುತ್ತಿದ್ದೆವು ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ನಾರಾಯಣಸ್ವಾಮಿ ಈಗಾಗಲೇ ತಮ್ಮ ಮೇಲೆ ಹಲವಾರು ಬಾರಿ ಮಾರಣಾಂತಿಕ ಹಲ್ಲೆಗಳು ನಡೆದಿದ್ದು, ಅನೇಕ ಬಾರಿ
ದೂರುಗಳನ್ನು ನೀಡಿದರೂ ತಮಗೆ ಸೂಕ್ತ ನ್ಯಾಯ ಸಿಕ್ಕಿಲ್ಲವೆಂದು ಲೋಕಾಯುಕ್ತರಿಗೆ ಮೌಖಿಕ ಮನವಿ ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಪಿಐ ಸುರೇಶ ಬಾಗವಾನಿ ಈಗಾಗಲೇ ದೂರು ನೀಡಿದ ಬಗ್ಗೆ ಸೂಕ್ತವಾದ ತನಿಖೆ ನಡೆಯುತ್ತಿದ್ದು
ಕಾನೂನು ಪ್ರಕಾರ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು
ಕೈಗೊಳ್ಳಲಾಗುವುದು ಎಂದರು.
ತಹಸೀಲ್ದಾರ್ ಜೂಗಲ್ ಮಂಜುನಾಯಕ ಮಾತನಾಡಿ ಲೋಕಾಯುಕ್ತ ಅಹವಾಲು ಸ್ವಿಕಾರ ಕಾರ್ಯಕ್ರಮದ ಬಗ್ಗೆ ಪತ್ರಿಕೆಗಳ ಮೂಲಕ ಹಾಗೂ ಗ್ರಾಮಾಡಳಿತ ಅಧಿಕಾರಿಗಳ ಮೂಲಕ ಮತ್ತು ಸರ್ಕಾರಿ ಕಚೇರಿಗಳಲ್ಲಿ
ನೋಟೀಸ್ ಅಂಟಿಸುವ ಮೂಲಕ ವ್ಯಾಪಕ ಪ್ರಚಾರ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ತಾ.ಪಂ.ಇಒ ಆರ್.ಕೆ.ಶ್ರೀಕುಮಾರ್, ಪುರಸಭೆ ಪ್ರಭಾರ
ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ, ಟಿಎಚ್ಒ ಡಾ.ಅರುಣಕುಮಾರ್,
ಬಿಇಒ ಟಿ.ಎಂ.ಸಿದ್ಧಲಿಂಗಮೂರ್ತಿ, ಜೆಸ್ಕಾಂ ಎಇಇ ಶ್ರೀನಿವಾಸಪ್ರಸಾದ್,
ಕೃಷಿ ಇಲಾಖೆಯ ಟಿ.ಜ್ಯೋತಿ, ಸಿಡಿಪಿಒ ಇಲಾಖೆಯ ಮೋಹನ್
ಕಳಸಾಪುರ, ಸೇರಿದಂತೆ ತಾಲ್ಲೂಕಿನ ವಿವಿಧ ಸರ್ಕಾರಿ ಇಲಾಖೆಯ
ಅಧಿಕಾರಿಗಳು ಸಿಬ್ಬಂದಿಗಳು ಭಾಗವಹಿಸಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















