
ಬಳ್ಳಾರಿ / ಕಂಪ್ಲಿ : ಈದ್ ಮಿಲಾದ್ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಶಾಂತಿ ಹಾಗೂ ಸೌಹಾರ್ದಯುತವಾಗಿ ಹಬ್ಬ ಗಳನ್ನು ಆಚರಿಸಬೇಕು ಎಂದು ಡಿವೈಎಸ್ಪಿ ಪ್ರಸಾದ್ ಗೋಖಲೆ ಕರೆ ನೀಡಿದ್ದಾರೆ.
ಈದ್ ಮಿಲಾದ್ ಹಾಗೂ ಗಣೇಶ ಹಬ್ಬದ ಅಂಗವಾಗಿ ಪಟ್ಟಣದ ಪೊಲೀಸ್ ಠಾಣೆ ಸಭಾಂಗಣದಲ್ಲಿ ಶುಕ್ರವಾರ ನಡೆದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂಗಳಿಗೆ ಗಣೇಶ ಹಬ್ಬ ಹಾಗೂ ಮುಸ್ಲಿಂ ಸಮುದಾಯದವರಿಗೆ ಈದ್ ಮಿಲಾದ್ ಪವಿತ್ರ ಹಬ್ಬಗಳಾಗಿವೆ. ಎರಡೂ ಹಬ್ಬಗಳನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತದೆ. ಕಿಡಿಗೇಡಿಗಳು ಹರಡುವ ವದಂತಿಗಳಿಗೆ ಕಿವಿಗೊಡದೇ ಶಾಂತಿಯುತವಾಗಿ ಎಲ್ಲರೂ ಹಬ್ಬವನ್ನು ಆಚರಿಸಬೇಕು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ಈದ್ ಮಿಲಾದ್ ಮೆರವಣಿಗೆಗಳ ರೊಟ್ ಮ್ಯಾಪ್ ತಿಳಿಸಬೇಕು, ಪೊಲೀಸ್ ಠಾಣೆ ಧ್ವನಿವರ್ಧಕ ಹಬ್ಬಗಳ ಸಂದರ್ಭದಲ್ಲಿ ನಿಗದಿಪಡಿಸಿದ ಡೆಸಿಬಲ್ ಮೀರಿ ಅತಿಯಾದ ಶಬ್ದದ ಡಿಜೆ ಬಳಸುವುದನ್ನು ನಿಷೇಧಿಸಲಾಗಿರುತ್ತದೆ. ಕೋರ್ಟ್ ಮತ್ತು ಸರ್ಕಾರದ ನಿಯಮಾವಳಿಗಳನ್ನು ಪಾಲಿಸಬೇಕು. ವಾಟ್ಸಾಪ್, ಫೇಸ್ಬುಕ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವಂತಹ ಅಥವಾ ಪ್ರಚೋದನಾಕಾರಿ ಪೋಸ್ಟ್ಗಳು ಹಾಗೂ ವೀಡಿಯೋಗಳನ್ನು ಹಂಚಿಕೊಳ್ಳಬಾರದು. ಎರಡೂ ಸಮುದಾಯಗಳ ಮುಖಂಡರು ಪರಸ್ಪರ ಸಹಕರಿಸಿ, ಯಾವುದೇ ಸಣ್ಣಪುಟ್ಟ ಗೊಂದಲಗಳಿದ್ದರೂ ಪೊಲೀಸರ ಗಮನಕ್ಕೆ ತಂದು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆಗಳು ಕಂಡುಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ಪಿ.ಐ ವಾಸುಕುಮಾರ ಮಾತನಾಡಿ, ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಆಯಾ ಸಮಿತಿಗಳು ಸ್ವಯಂಸೇವಕರನ್ನು ನೇಮಿಸಬೇಕು.
ಯಾವುದೇ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲಿದೆ. ಒಟ್ಟಾರೆ ಹಬ್ಬಗಳು ಶಾಂತಿ, ಸುವ್ಯವಸ್ಥಿತವಾಗಿ, ಸಾಮರಸ್ಯದಿಂದ ಆಚರಿಸಬೇಕೆಂಬುದು ಸಭೆಯ ಉದ್ದೇಶ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯರಾದ ಕೆ.ಎಂ. ಹೇಮಯ್ಯ ಸ್ವಾಮೀ, ಉಸ್ಮಾನ್, ಮಸ್ತನವಲಿ ಕಡಪ, ಬಿ. ಜಾಫರ್ ಸಾಧಿಕ್ , ಲೋಡ್ಡು ಅಬ್ದುಲ್ ಕರೀಂ, ಕೆ. ಮೆಹೆಬೂಬ್, ಉಡೆಗೋಳ್, ಚನ್ನಬಸಪ್ಪ, ವಿರೇಶ್, ಜಾಹಿರವುದ್ದಿನ್, ಮೌಲಾಹುಸೇನ್, ಕೋಟೆ ಶಬ್ಬೀರ್, ಗುರುರಾಜ್ ಸೇರಿದಂತೆ ಎಲ್ಲಾ ಸಮುದಾಯದ ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















